Site icon Vistara News

ಕಾಂಗ್ರೆಸ್​​ನ ಸಿದ್ಧಾಂತ ಹಳಿ ತಪ್ಪಿದೆ ಎಂದು, ರಾಷ್ಟ್ರೀಯ ವಕ್ತಾರನ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಜೈವೀರ್​ ಶೆರ್ಗಿಲ್​

Jaiveer Shergill

ನವ ದೆಹಲಿ: ಜೈವೀರ್​ ಶೆರ್ಗಿಲ್ ಅವರು ಕಾಂಗ್ರೆಸ್​ ರಾಷ್ಟ್ರೀಯ ವಕ್ತಾರ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಪತ್ರವನ್ನು ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಲ್ಲಿಸಿದ ಅವರು, ‘ಕಾಂಗ್ರೆಸ್​​ನ ನಿರ್ಧಾರಗಳಲ್ಲಿ ಸಾರ್ವಜನಿಕರ ಅಥವಾ ದೇಶದ ಒಳಿತು ಇರುವುದಿಲ್ಲ. ಹಾಗೇ, ಸ್ವ ಹಿತಾಸಕ್ತಿಯೇ ಪ್ರಮುಖವಾಗಿರುವವರು ಪಕ್ಷದ ಪ್ರಮುಖ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ದೊಡ್ಡವರ ಮುಖಸ್ತುತಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಈಗ ಕಾಂಗ್ರೆಸ್​​ನಲ್ಲಿರುವ ನಿರ್ಣಾಯಕರ ದೃಷ್ಟಿಕೋನ ಮತ್ತು ಪಕ್ಷದ ಸಿದ್ಧಾಂತಕ್ಕೆ ಹೊಂದಾಣಿಕೆಯೇ ಆಗುತ್ತಿಲ್ಲ. ಇದು ಕಾಂಗ್ರೆಸ್​ ಮೇಲೆ ಅಪಾರ ನಿರೀಕ್ಷೆ ಇಟ್ಟಿರುವ ಆಧುನಿಕ ಭಾರತದ ಜನರು ಅದರಲ್ಲೂ ಯುವಜನರಿಗೆ ನಿರಾಸೆ ಉಂಟು ಮಾಡುವ ಫಲಿತಾಂಶ ಕೊಡುತ್ತಿದೆ’ ಎಂದೂ ಅವರು ಪತ್ರದಲ್ಲಿ ಬರೆದಿದ್ದಾರೆ.

ಜೈವೀರ್​ ಶೆರ್ಗಿಲ್​ ಅವರು ಕಾಂಗ್ರೆಸ್​​ನ ರಾಷ್ಟ್ರೀಯ ವಕ್ತಾರರಾಗಿದ್ದರೂ ಕಳೆದ ಕೆಲವು ತಿಂಗಳಿಂದಲೂ ಒಂದು ಸುದ್ದಿಗೋಷ್ಠಿ ನಡೆಸಲು ಅವರಿಗೆ ಅವಕಾಶ ನೀಡಿರಲಿಲ್ಲ. ಅದೂ ಒಂದು ಅಸಮಾಧಾನದಿಂದ ಶೆರ್ಗಿಲ್​ ರಾಜೀನಾಮೆ ಕೊಟ್ಟಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ ಗುಲಾಂ ನಬಿ ಆಜಾದ್ ಅವರು ಕೂಡ ಪಕ್ಷದ ಪ್ರಮುಖ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು. ಜಮ್ಮು-ಕಾಶ್ಮೀರದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಅದಾದ ಒಂದು ತಾಸಿನಲ್ಲಿ ತಮ್ಮ ಹುದ್ದೆ ತೊರೆದಿದ್ದರು. ಹಾಗೇ, ಆನಂದ್​ ಶರ್ಮಾ ಅವರು ಹಿಮಾಚಲ ಪ್ರದೇಶದ ಕಾಂಗ್ರೆಸ್ ಸಂಚಾಲಕ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ನಿರಂತರವಾಗಿ ನಿರ್ಲಕ್ಷ್ಯವಾಗುತ್ತಿದ್ದೇನೆ ಮತ್ತು ಅವಮಾನಿತನಾಗುತ್ತಿದ್ದೇನೆ. ಹಾಗಾಗಿ ಪಕ್ಷ ಬಿಡುತ್ತಿದ್ದೇನೆ ಎಂದಿದ್ದರು. ಅದರ ಬೆನ್ನಲ್ಲೇ ಇದೀಗ ಶೆರ್ಗಿಲ್​ ಕೂಡ ಪಕ್ಷದ ಒಂದು ಮಹತ್ವದ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ.

ಅಂದಹಾಗೇ, ಶೆರ್ಗಿಲ್​ ಮೂಲತಃ ಪಂಜಾಬ್​​ನವರು. ಸುಪ್ರೀಂಕೋರ್ಟ್​​ ವಕೀಲರು ಕೂಡ ಹೌದು. ಅವರಿಗೆ ಇನ್ನೂ 39ವರ್ಷಗಳಾಗಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​ನ ಪ್ರಮುಖ ಯುವ ನಾಯಕರು. ಒಂದೆಡೆ ಕಾಂಗ್ರೆಸ್​​ನಲ್ಲಿ ನೂತನ ಅಧ್ಯಕ್ಷರ ನೇಮಕಾತಿ ಕಸರತ್ತು ನಡೆಯುತ್ತಿದೆ. ಇನ್ನೊಂದೆಡೆ ಇಂದು ಸೋನಿಯಾ ಗಾಂಧಿ ತಮ್ಮಿಬ್ಬರು ಮಕ್ಕಳೊಂದಿಗೆ ವಿದೇಶಕ್ಕೆ ಹೋಗಿದ್ದಾರೆ. ಹಾಗೇ, ಪ್ರಮುಖ ನಾಯಕರು ಒಬ್ಬೊಬ್ಬರಾಗಿ ಕಾಂಗ್ರೆಸ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Sonia Gandhi | ಮಗ, ಮಗಳ ಜತೆ ಸೋನಿಯಾ ಗಾಂಧಿ ಇಂದು ವಿದೇಶಕ್ಕೆ ಹೋಗುತ್ತಿರುವುದೇಕೆ?

Exit mobile version