Site icon Vistara News

ಕಾಶ್ಮೀರಿ ಪಂಡಿತರ ಹಂತಕ ಬಿಟ್ಟಾ ಕರಾಟೆ ಪತ್ನಿ ಸೇರಿ ನಾಲ್ವರನ್ನು ವಜಾಗೊಳಿಸಿದ ಜಮ್ಮು ಕಾಶ್ಮೀರ ಸರ್ಕಾರ

Bitta Karate

ಶ್ರೀನಗರ: ಹಿಜ್ಬುಲ್​ ಮುಜಾಹಿದ್ದೀನ್​ ಮುಖ್ಯಸ್ಥ ಸೈಯದ್​ ಸಲಾವುದ್ದೀನ್​ ಮಗ, ಜಮ್ಮು ಕಾಶ್ಮೀರ ಪ್ರತ್ಯೇಕತಾವಾದಿ ಬಿಟ್ಟಾ ಕರಾಟೆ ಪತ್ನಿ ಸೇರಿ, ಒಟ್ಟು ನಾಲ್ವರು ಸರ್ಕಾರಿ ಉದ್ಯೋಗಿಗಳನ್ನು ಜಮ್ಮು-ಕಾಶ್ಮೀರ ಸರ್ಕಾರ ವಜಾಗೊಳಿಸಿದೆ. ಡಾ. ಮುಹೀತ್​ ಅಹ್ಮದ್​ ಭಟ್​ ಮತ್ತು ಮಜೀದ್​ ಹುಸೇನ್​ ಖಾದಿರಿ,ಇನ್ನಿಬ್ಬರು ವಜಾಗೊಂಡ ಸರ್ಕಾರಿ ಉದ್ಯೋಗಿಗಳು. ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ನಂಟು ಹೊಂದಿರುವವರನ್ನು ಹುಡುಕಿ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ತನಿಖೆಯ ಭಾಗವಾಗಿಯೇ ಈ ನಾಲ್ವರನ್ನು ವಜಾಗೊಳಿಸಲಾಗಿದೆ.

1990ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಪ್ರಮುಖ ಆರೋಪಿ ಬಿಟ್ಟಾ ಕರಾಟೆ (ಫಾರೂಕ್​ ಅಹ್ಮದ್​ ದಾರ್​​​)ಯ ಪತ್ನಿ, ಅಸ್ಸಾಬಾ-ಉಲ್-ಅರ್ಜಮಂಡ್ ಖಾನ್ ಜಮ್ಮು ಕಾಶ್ಮೀರದ ಆಡಳಿತ ಸೇವೆಗಳ ಅಧಿಕಾರಿಯಾಗಿದ್ದು, ಗ್ರಾಮೀಣಾಭಿವೃದ್ಧಿ ನಿರ್ದೇಶನಾಲಯದಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯನ್ನು ಈಗ ವಜಾಗೊಳಿಸಲಾಗಿದೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಹಿಜ್ಬುಲ್​ ಮುಜಾಹಿದ್ದೀನ್​​ನ ಮುಖ್ಯಸ್ಥ ಸೈಯದ್​ ಸಲಾವುದ್ದೀನ್ ಪುತ್ರ ಸೈಯದ್​ ಅಬ್ದುಲ್​ ಮುಯೀದ್​, ಜಮ್ಮು ಕಾಶ್ಮೀರದ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಇನ್ನುಳಿದ ಡಾ. ಮುಹೀತ್​ ಅಹ್ಮದ್​ ಭಟ್​ ಮತ್ತು ಮಜೀದ್​ ಹುಸೇನ್​ ಖಾದಿರಿ ಇಬ್ಬರೂ ಕಾಶ್ಮೀರ ಯೂನಿವರ್ಸಿಟಿ ಉದ್ಯೋಗಿಗಳು.

ಉಗ್ರಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಆರೋಪ ಹೊತ್ತಿರುವ ಸರ್ಕಾರಿ ಉದ್ಯೋಗಿಗಳನ್ನು ಮುಲಾಜಿಲ್ಲದೆ ವಜಾ ಮಾಡಲಾಗುತ್ತಿದೆ. ಜಮ್ಮು-ಕಾಶ್ಮೀರದ ಭದ್ರತೆ ದೃಷ್ಟಿಯಿಂದ ಲೆಫ್ಟಿನೆಂಟ್​ ಗವರ್ನರ್​ ಮನೋಜ್​ ಸಿನ್ಹಾ ನೇತೃತ್ವದ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ. ಭಾರತ ಸಂವಿಧಾನದ ಆರ್ಟಿಕಲ್​ 311ರಡಿ ಇವರನ್ನೆಲ್ಲ ವಜಾಗೊಳಿಸಲಾಗಿದೆ. ಆರೋಪ ಹೊತ್ತಿರುವ ಉದ್ಯೋಗಿಗಳನ್ನು ಯಾವುದೇ ವಿಚಾರಣೆಗೆ ಒಳಪಡಿಸದೆ, ನೇರವಾಗಿ ವಜಾಗೊಳಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವ ಆರ್ಟಿಕಲ್​ ಇದು. ಕಳೆದ ವರ್ಷವೂ ಕೂಡ ಹಲವು ಸರ್ಕಾರಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು.

ಇದನ್ನೂ ಓದಿ: ಕಾಶ್ಮೀರದಲ್ಲಿ ವಲಸೆ ಕಾರ್ಮಿಕನನ್ನು ಕೊಂದ ಉಗ್ರರು; ಮಧ್ಯರಾತ್ರಿ ಗುಂಡಿನ ದಾಳಿ

Exit mobile version