ಶ್ರೀನಗರ: ಜಮ್ಮು-ಕಾಶ್ಮೀರದ (Jammu-Kashmir) ಕಠುವಾ ಜಿಲ್ಲೆಯ ಶಾಲೆಯೊಂದರಲ್ಲಿ ಕಪ್ಪುಹಲಗೆ ಮೇಲೆ ಜೈ ಶ್ರೀರಾಮ್ (Jai Shri Ram) ಎಂದು ಬರೆದ ಕಾರಣಕ್ಕಾಗಿ ಇಬ್ಬರು ಶಿಕ್ಷಕರು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣವು ಗಂಭೀರ ಸ್ವರೂಪ ಪಡೆದಿದ್ದು, ಇಬ್ಬರು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹಾಗೆಯೇ, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಠುವಾ ಜಿಲ್ಲೆಯ ಬನಿ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯಲ್ಲಿ ನೀರಜ್ ಎಂಬ ವಿದ್ಯಾರ್ಥಿಯು ಆಗಸ್ಟ್ 25ರಂದು ಕಪ್ಪು ಹಲಗೆ ಮೇಲೆ ಜೈಶ್ರೀರಾಮ್ ಎಂಬುದಾಗಿ ಬರೆದಿದ್ದಾನೆ. ಇದರಿಂದ ಕುಪಿತಗೊಂಡ ಉರ್ದು ಶಿಕ್ಷಕ ಫಾರೂಕ್ ಅಹ್ಮದ್ ಹಾಗೂ ಪ್ರಾಂಶುಪಾಲ ಮೊಹಮ್ಮದ್ ಹಫೀಜ್ ಅವರು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ವಿದ್ಯಾರ್ಥಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹಲ್ಲೆ ಖಂಡಿಸಿ ಪ್ರತಿಭಟನೆ
ಫಾರೂಕ್ ಅಹ್ಮದ್ ಹಾಗೂ ಮೊಹಮ್ಮದ್ ಹಫೀಜ್ ವಿರುದ್ಧ ಬನಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣದ ಕುರಿತು ಹಿಂದುಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ತನಿಖೆಗೆ ಆದೇಶಿಸಲಾಗಿದೆ. “ಬಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಪ್ರಕರಣದ ಕುರಿತು ಕೂಲಂಕಷ ತನಿಖೆ ನಡೆಸಲಾಗುವುದು” ಎಂದು ಉಪ ಆಯುಕ್ತ ಅಧಿಸೂಚನೆ ಹೊರಡಿಸಿದ್ದಾರೆ.
ಇದನ್ನೂ ಓದಿ: Love Jihad: ಹಿಂದು ಮಹಿಳೆಗಾಗಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ ಮುಸ್ಲಿಂ ಯುವಕ, ಕ್ರಿಕೆಟಿಗ ರೋಹಿತ್ ಶರ್ಮಾ ನಂಟೇನು?
ಮಕ್ಕಳು ಹೇಳುವುದೇನು?
ಫಾರೂಕ್ ಅಹ್ಮದ್ ಹಾಗೂ ಮೊಹಮ್ಮದ್ ಹಫೀಜ್ ಸೇರಿ ನೀರಜ್ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ವಿದ್ಯಾರ್ಥಿಗಳು ಮಾಧ್ಯಮಗಳಿಗೆ ವಿವರಿಸಿದ್ದಾರೆ. “ಜೈ ಶ್ರೀರಾಮ್ ಎಂಬುದಾಗಿ ಕಪ್ಪುಹಲಗೆ ಮೇಲೆ ಬರೆದಿದ್ದನ್ನು ಕಂಡ ಫಾರೂಕ್ ಅಹ್ಮದ್ ಅವರು ನೀರಜ್ನನ್ನು ಹೊರಗೆ ಎಳೆದು ಹೊಡೆದಿದ್ದಾರೆ. ಆಗ ಪ್ರಿನ್ಸಿಪಾಲ ಮೊಹಮ್ಮದ್ ಹಫೀಜ್ ಕೂಡ ನೀರಜ್ ಮೇಲೆ ಹಲ್ಲೆ ನಡೆಸಿದ್ದಾರೆ” ಎಂಬುದಾಗಿ ತಿಳಿಸಿದ್ದಾರೆ.