Site icon Vistara News

Jiah Khan Suicide Case: ಜಿಯಾ ಖಾನ್​ ಆತ್ಮಹತ್ಯೆ ಕೇಸ್​ನಲ್ಲಿ ಸೂರಜ್​ ಪಾಂಚೋಲಿಗೆ ಬಿಗ್ ರಿಲೀಫ್​; ನಿರ್ದೋಷಿ ಎಂದು ತೀರ್ಪು ಕೊಟ್ಟ ಕೋರ್ಟ್​​

Jiah Khan suicide case Sooraj Pancholi acquitted By Mumbai CBI Court

#image_title

ಮುಂಬಯಿ: 2013ರಲ್ಲಿ ಇಡೀ ಮನರಂಜನಾ ಕ್ಷೇತ್ರಕ್ಕೆ ಶಾಕ್​ ನೀಡಿದ್ದ, ಅಮೆರಿಕ ಮೂಲದ, ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ (Jiah Khan Suicide Case) ಪ್ರಕರಣಕ್ಕೆ ಸಂಬಂಧಪಟ್ಟ ಅಂತಿಮ ತೀರ್ಪು ಇಂದು ಹೊರಬಿದ್ದಿದೆ. ಘಟನೆ ನಡೆದು ದಶಕದ ನಂತರ ಇಂದು ಮುಂಬಯಿಯ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿ ‘ಜಿಯಾ ಖಾನ್​ ಆತ್ಮಹತ್ಯೆಗೆ ಆಕೆಯ ಪ್ರಿಯಕರನಾಗಿದ್ದ ಸೂರಜ್ ಪಾಂಚೋಲಿ (Sooraj Pancholi) ಕಾರಣನಲ್ಲ. ಆತ ನಿರಪರಾಧಿ‘ ಎಂದು ತೀರ್ಪು ನೀಡಿದೆ. ಈ ಮೂಲಕ ಸೂರಜ್​ರನ್ನು ಕೇಸ್​​ನಿಂದ ಖುಲಾಸೆಗೊಳಿಸಿದೆ.

ಜಿಯಾ ಖಾನ್​ ಅವರ ಮೊದಲ ಹೆಸರು ನಫೀಸಾ ಖಾನ್​. ತಂದೆ ಅಲಿ ರಿಜ್ವಿ ಖಾನ್ ಅವರು ಭಾರತ ಮೂಲದ ಉದ್ಯಮಿ. ಅವರು ರಬಿಯಾ ಅಮಿನ್​ರನ್ನು ಮದುವೆಯಾದ ಬಳಿಕ ಯುಎಸ್​ಗೆ ಹೋಗಿ ನೆಲೆಸಿದ್ದರು. ನಫೀಸಾ ಖಾನ್​ (ಜಿಯಾ ಖಾನ್​) ಹುಟ್ಟಿದ್ದು ಅಮೆರಿಕದ ನ್ಯೂಯಾರ್ಕ್​ನಲ್ಲಿ. ಜಿಯಾಗೆ 2ವರ್ಷವಿದ್ದಾಗಲೇ ಅಲಿ ರಿಜ್ವಿ ತಮ್ಮ ಕುಟುಂಬವನ್ನು ಬಿಟ್ಟು ಹೋಗಿದ್ದಾರೆ. ಅದಾದ ಮೇಲೆ ರಬಿಯಾ ಅಮಿನ್ ತಮ್ಮ ಮಕ್ಕಳೊಂದಿಗೆ ಭಾರತಕ್ಕೆ ಬಂದು ನೆಲೆಸಿದರು. ಜಿಯಾ ಖಾನ್​ 16ವರ್ಷ ಇದ್ದಾಗಲೇ ಹಿಂದಿ ಚಿತ್ರರಂಗದಲ್ಲಿ ತೊಡಗಿಸಿಕೊಂಡರು. ಮುಂಬಯಿಯ ಜುಹುವಿನಲ್ಲಿ ಮನೆ ಮಾಡಿದ್ದರು. ಜೀವನ ಏರಿಳಿತದಲ್ಲಿ ಸಾಗುತ್ತಿದ್ದಾಗಲೇ ಜಿಯಾ ಅವರು 2013ರ ಜೂನ್​ 3ರಂದು, ತಮ್ಮ 25ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಹುವಿನಲ್ಲಿರುವ ತಮ್ಮ ಮನೆಯಲ್ಲಿ, ಅಮ್ಮ-ಸಹೋದರಿ ಇಬ್ಬರೂ ಇಲ್ಲದ ಸಮಯದಲ್ಲಿ ಜಿಯಾ ಖಾನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

6ಪುಟಗಳ ಪತ್ರ ಸಿಕ್ಕಿತ್ತು..!
ಜಿಯಾ ಖಾನ್​ ಸಾವು ಆಕೆಯ ಕುಟುಂಬಕ್ಕೆ, ಮನರಂಜನಾ ಕ್ಷೇತ್ರಕ್ಕೆ, ಆಕೆಯ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಅಂದು ಆಕೆಯ ಅಂತ್ಯಕ್ರಿಯೆಯಲ್ಲಿ ಆಮಿರ್ ಖಾನ್​, ಕಿರಣ್ ರಾವ್, ರಿತೇಶ್ ದೇಶ್​ಮುಖ್​, ನಗ್ಮಾ ಸೇರಿ ಬಾಲಿವುಡ್​ನ ಹಲವು ಗಣ್ಯರು ಪಾಲ್ಗೊಂಡಿದ್ದರು. ಅದಾಗಿ ನಾಲ್ಕು ದಿನದ ಬಳಿಕ ಅಂದರೆ ಜೂನ್​ 7ರಂದು ಜಿಯಾ ಖಾನ್​ ಮನೆಯಲ್ಲಿ ಆಕೆಯೇ ಬರೆದಿದ್ದ ಆರು ಪುಟಗಳ ಒಂದು ಪತ್ರ ಸಿಕ್ಕಿತ್ತು. ಅದು ಅವಳ ಪ್ರಿಯಕರನಾಗಿದ್ದ ನಟ ಸೂರಜ್​ ಪಾಂಚೋಲಿಯನ್ನು ಉದ್ದೇಶಿಸಿ ಬರೆದಿದ್ದಾಗಿತ್ತು. ಸೂರಜ್ ಪಾಂಚೋಲಿಯಿಂದ ಪ್ರತಿನಿತ್ಯ ಮಾನಸಿಕ-ದೈಹಿಕ ಹಿಂಸೆಯಾಗುತ್ತಿದೆ’ ಎಂದು ಆಕೆ ಪತ್ರದಲ್ಲಿ ಹೇಳಿದ್ದಲ್ಲದೆ, ಸೂರಜ್​​ನಿಂದಾಗಿ ಗರ್ಭ ಧರಿಸಿ, ಬಳಿಕ ಅವನ ಒತ್ತಾಯಕ್ಕೆ ಗರ್ಭಪಾತ ಮಾಡಿಸಿಕೊಂಡೆ ಎಂಬಿತ್ಯಾದಿ ಹಲವು ವಿಷಯಗಳು ಪತ್ರದಲ್ಲಿ ಇದ್ದವು. ಈ ಸುದೀರ್ಘ ಪತ್ರವನ್ನು ಜಿಯಾ ಖಾನ್ ಕುಟುಂಬದವರು ಮಾಧ್ಯಮಗಳ ಎದುರು ಬಿಡುಗಡೆ ಮಾಡಿದ್ದರು.

ಜಿಯಾ ಖಾನ್ ತಾಯಿ ಅವರು ಸ್ಥಳೀಯ ನ್ಯಾಯಾಲಯದಲ್ಲಿ ಸೂರಜ್​ ವಿರುದ್ಧ ಮೊಕದ್ದಮೆ ಹೂಡಿದ್ದರು. ಇದೊಂದು ಕೊಲೆ, ಆತ್ಮಹತ್ಯೆಯಲ್ಲ ಎಂದು ಅವರು ವಾದಿಸಿದ್ದರು. ಆಕೆಯ ದೂರು ಮತ್ತು ಪತ್ರದಲ್ಲಿರುವ ವಿಷಯಗಳನ್ನು ಪರಿಗಣಿಸಿ ‘ಆತ್ಮಹತ್ಯೆಗೆ ಪ್ರಚೋದನೆ’ ಆರೋಪದಡಿ ಸೂರಜ್​ ಪಾಂಚೋಲಿಯನ್ನು ಪೊಲೀಸರು ಬಂಧಿಸಿದ್ದರು. 2013ರ ಜುಲೈನಲ್ಲಿ ಸೂರಜ್ ಪಾಂಚೋಲಿಗೆ ಜಾಮೀನು ಸಿಕ್ಕಿತಾದರೂ, ಆತನ ಪಾಸ್​ಪೋರ್ಟ್​ ವಶಪಡಿಸಿಕೊಳ್ಳಲಯಿತು. ಅಕ್ಟೋಬರ್​ನಲ್ಲಿ ಜಿಯಾ ಖಾನ್ ತಾಯಿ ರಬಿಯಾ ಮತ್ತೊಂದು ಪಟ್ಟು ಹಿಡಿದರು. ತಮ್ಮ ಮಗಳ ಕೇಸ್​​ನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದರು.

ತಕ್ಷಣವೇ ಮುಂಬಯಿ ಪೊಲೀಸರು ಸಿಬಿಐ ತನಿಖೆಗೆ ಕೇಸ್​​ನ್ನು ವಹಿಸಲಿಲ್ಲ. 2014ರ ಜುಲೈನಲ್ಲಿ ಸಿಬಿಐ ಈ ಪ್ರಕರಣದ ತನಿಖೆ ಶುರು ಮಾಡಿತು. ಅದೇ ವರ್ಷ ಸೂರಜ್​ ಪಾಂಚೋಲಿ ತಂದೆ ಆದಿತ್ಯ ಪಾಂಚೋಲಿ ಕಾನೂನು ಹೋರಾಟ ಪ್ರಾರಂಭಿಸಿ ರಬಿಯಾ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದರು. 2015ರಲ್ಲಿ ಸಿಬಿಐ ಸೂರಜ್​ ಪಾಂಚೋಲಿ ಮನೆಯನ್ನು ರೇಡ್ ಮಾಡಿತ್ತು. ಅವರನ್ನು ನಿರಂತರವಾಗಿ ವಿಚಾರಣೆಗೆ ಒಳಪಡಿಸಿತ್ತು. ಆದಾದ ಮೇಲೆ ರಬಿಯಾ ಈ ಕೇಸ್​​ ತನಿಖೆಗಾಗಿ ಎಸ್​ಐಟಿ ರಚನೆ ಮಾಡಬೇಕು ಎಂಬ ಮನವಿಯನ್ನೂ ಕೋರ್ಟ್​ಗೆ ನೀಡಿದ್ದರು. ಆದರೆ ಅಂಥ ಯಾವುದೇ ಮನವಿಯನ್ನೂ ಕೋರ್ಟ್ ಪುರಸ್ಕಾರ ಮಾಡಲಿಲ್ಲ. ಸಿಬಿಐ ತನಿಖೆ ಮತ್ತು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಲೇ ಇತ್ತು. ಅಂತಿಮ ತೀರ್ಪಿನ ದಿನಾಂಕವನ್ನು ಕೋರ್ಟ್ ಇಂದು ನಿಗದಿಪಡಿಸಿದೆ. ಸೂರಜ್​ ಪಾಂಚೋಲಿ ನಿರಪರಾಧಿಯಾಗಿದ್ದಾರೆ.

ದೋಷಮುಕ್ತರಾದ ಸೂರಜ್​ ಪಾಂಚೋಲಿ
Exit mobile version