Site icon Vistara News

Siddique Kappan: ಹತ್ರಾಸ್​ ರೇಪ್​ ಕೇಸ್​ ವರದಿಗೆ ಹೋಗುತ್ತಿದ್ದಾಗ ಅರೆಸ್ಟ್​ ಆಗಿದ್ದ ಕೇರಳ ಪತ್ರಕರ್ತ 2 ವರ್ಷದ ಬಳಿಕ ಬಿಡುಗಡೆ

Journalist Siddique Kappan Released From UP jail

#image_title

ನವ ದೆಹಲಿ: 2020ರಲ್ಲಿ ಉತ್ತರ ಪ್ರದೇಶದ ಹತ್ರಾಸ್​​ನಲ್ಲಿ ದಲಿತ ಮಹಿಳೆ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ವರದಿ ಮಾಡಲು ತೆರಳುತ್ತಿದ್ದಾಗ ಬಂಧಿತನಾಗಿದ್ದ ಉತ್ತರ ಪ್ರದೇಶ ಪೊಲೀಸರಿಂದ ಕೇರಳದ ಪತ್ರಕರ್ತ ಸಿದ್ಧಿಕ್​ ಕಪ್ಪನ್ (Siddique Kappan) ಇದೀಗ ಬಿಡುಗಡೆಯಾಗಿದ್ದಾರೆ. ಅಂದು ಸಿದ್ಧಿಕ್​ ಕಪ್ಪನ್​ ಪಿಎಫ್​ಐ (ನಿಷೇಧಿತ) ಸಂಘಟನೆಯೊಂದಿಗೆ ಸಂಪರ್ಕಹೊಂದಿದ್ದು, ಅನ್ಯಥಾ ಧಾರ್ಮಿಕ ಕಲಹ ಮತ್ತು ಉಗ್ರ ಚಟುವಟಿಕೆಯನ್ನು ನಡೆಸಲು ಹತ್ರಾಸ್​ಗೆ ಹೋಗುತ್ತಿದ್ದಾರೆ ಎಂದು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು.

2020ರ ಅಕ್ಟೋಬರ್​ನಲ್ಲಿ ಹತ್ರಾಸ್​​ನಲ್ಲಿ ದಲಿತ ಮಹಿಳೆಯೊಬ್ಬಳ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯಾಗಿತ್ತು. ಆ ಕೇಸ್​ ವರದಿ ಮಾಡಲು ಕಪ್ಪನ್​ ಮತ್ತು ಮೂವರು ಹತ್ರಾಸ್​ಗೆ ಹೊರಟಿದ್ದರು. ಅವರೆಲ್ಲರನ್ನೂ ಉತ್ತರಪ್ರದೇಶ ಪೊಲೀಸರು ಮಥುರಾ ಟೋಲ್​ಪ್ಲಾಜಾದ ಬಳಿ ಬಂಧಿಸಿ, ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ ಎಫ್​ಐಆರ್​ ದಾಖಲಿಸಿದ್ದರು. ಸಿದ್ಧಿಕ್​ ಕಪ್ಪನ್​ ಬಂಧನದ ವಿರುದ್ಧ ಹಲವು ಪ್ರತಿಭಟನೆಗಳು ನಡೆದಿದ್ದವು. ಇನ್ನು 2022ರ ಸೆಪ್ಟೆಂಬರ್​ ತಿಂಗಳಲ್ಲಿ ಸುಪ್ರೀಂಕೋರ್ಟ್​​ನಿಂದ ಸಿದ್ಧಿಕ್​ಗೆ ಜಾಮೀನು ಸಿಕ್ಕಿತ್ತು. ಆದರೆ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA)ಯಡಿ ದಾಖಲಾಗಿದ್ದ ಪ್ರಕರಣವೊಂದು ಅಲಹಬಾದ್​ ಹೈಕೋರ್ಟ್​​ನಲ್ಲಿ ಬಾಕಿ ಇತ್ತು. ಈಗ ಆ ಕೇಸ್​ನಲ್ಲೂ ಜಾಮೀನು ಸಿಕ್ಕಿದೆ. ಸಿದ್ಧಿಕ್​ ಕಪ್ಪನ್​ ಜಾಮೀನಿಗೆ ಈಗ ಲಖನೌ ಸೆಷನ್ಸ್​ ಕೋರ್ಟ್​ ಸಹಿ ಮಾಡಿದ್ದು, ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ಧಿಕ್​, ‘ನಾನು 28 ತಿಂಗಳುಗಳ ಬಳಿಕ ಜೈಲಿನಿಂದ ಹೊರಬಂದಿದ್ದೇನೆ. ನನ್ನ ಕಷ್ಟದ ಸಮಯದಲ್ಲಿ ನನ್ನ ಜತೆಗಿದ್ದ ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಅದೇನೇ ಇರಲಿ, ನಾನೀಗ ಹೊರಬಂದಿದ್ದೇನೆ ಖುಷಿಯಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Siddique Kappan | ಯುಪಿನಲ್ಲಿ ಬಂಧಿತನಾಗಿದ್ದ ಪತ್ರಕರ್ತ ಕಪ್ಪನ್‌ಗೆ 2 ವರ್ಷದ ಬಳಿಕ ಸುಪ್ರೀಂ ಜಾಮೀನು

Exit mobile version