Site icon Vistara News

Amritpal Singh: ಪಂಜಾಬ್​ ಪೊಲೀಸರೇ ಸುಳ್ಳು ಹೇಳ್ತಿದ್ದಾರೆ, ಅಮೃತ್​​ಪಾಲ್​​ ಸಿಂಗ್​ ಬಂಧನವಾಗಿದೆ ಎಂದ ಸಹಚರ

Amritpal Singh Arrested

#image_title

ನವ ದೆಹಲಿ: ಖಲಿಸ್ತಾನಿ ಯುವ ನಾಯಕ, ವಾರಿಸ್​ ಪಂಜಾಬ್​ ದೆ ಮುಖ್ಯಸ್ಥ ಅಮೃತ್​ಪಾಲ್​ ಸಿಂಗ್​ (Amritpal Singh) ಬಂಧನವಾಗಿದ್ದಾನಾ? ಅಥವಾ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದನಾ? ನಿನ್ನೆಯಿಂದಲೂ ಈ ವಿಷಯದಲ್ಲಿ ಗೊಂದಲ ಏರ್ಪಟ್ಟಿದೆ. ಮಾ.18ರ ಮಧ್ಯಾಹ್ನದ ಹೊತ್ತಿಗೆ ಅಮೃತ್​ಪಾಲ್​ ಸಿಂಗ್​, ಪಂಜಾಬ್​​ನ ನಕೋಡರ್​ ಬಳಿ​ ಅರೆಸ್ಟ್ ಆಗಿದ್ದಾನೆ ಎಂಬ ಸುದ್ದಿಬಂತು. ಆದರೆ ಕೆಲವೇ ಹೊತ್ತಲ್ಲಿ, ಆತನ ಬಂಧನವಾಗಿಲ್ಲ. ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಅವನ ಸಹಚರರನ್ನು ಮಾತ್ರ ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರೇ ಪ್ರಕಟಣೆ ಹೊರಡಿಸಿದ್ದರು. ಆದರೆ ಈಗ ಮತ್ತೊಂದು ವರದಿ ಬಂದಿದೆ. ಅಮೃತ್​ಪಾಲ್​ ಸಿಂಗ್​ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅವನು ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ನೀಡಿದ ಹೇಳಿಕೆಯೇ ಸುಳ್ಳೆಂದು ಅಮೃತ್​ಪಾಲ್ ಸಿಂಗ್​​ನ ಸಹಚರನೊಬ್ಬ ಹೇಳಿದ್ದಾಗಿ ಮಾಹಿತಿ ಲಭ್ಯವಾಗಿದೆ.

ಪ್ರತ್ಯೇಕತಾವಾದಿ, ಖಲಿಸ್ತಾನಿ ಚಳವಳಿಗಾಗಿ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಅಮೃತ್​ಪಾಲ್​ ಸಿಂಗ್​ ಬಂಧನ ಪಂಜಾಬ್​​ನಲ್ಲಿ ಸೂಕ್ಷ್ಮ ವಿಷಯವೇ ಆಗಿದೆ. ಹೀಗಾಗಿ ನಿನ್ನೆಯಿಂದಲೂ ಕೆಲವು ಸ್ಥಳಗಳಲ್ಲಿ ಮೊಬೈಲ್​ ಇಂಟರ್​ನೆಟ್​ ಸೇವೆ ಸ್ಥಗಿತಗೊಂಡಿದೆ. ಜಲಂಧರ್​ ಪೊಲೀಸ್ ಆಯುಕ್ತ ಕುಲದೀಪ್​ ಸಿಂಗ್​ ಚಾಹಲ್​ ಈ ಬಗ್ಗೆ ಎಎನ್​ಐ ಮಾಧ್ಯಮದ ಜತೆ ಮಾತನಾಡಿ, ‘ಅಮೃತ್​ಸಿಂಗ್​ ಪಾಲ್​​ನನ್ನು ದೇಶಭ್ರಷ್ಟ ಎಂದು ಘೋಷಿಸಲಾಗಿದೆ. ಅವನ ವಾಹನವನ್ನು ಜಲಂಧರ್​ನ ನಾಕೋಡರ್​ ಬಳಿ ತಡೆಯಲಾಯಿತು. ಆದರೆ ಆತ ಪರಾರಿಯಾದ. ಸಹಚರರನ್ನು ಬಂಧಿಸಲಾಗಿದೆ’ ಎಂದಿದ್ದರು. ಆದರೆ ಈಗ ಸಹಚರನೊಬ್ಬ ಹೇಳಿಕೆ ಬಿಡುಗಡೆ ಮಾಡಿದ್ದು, ‘ಅಮೃತ್ ಪಾಲ್​ ಸಿಂಗ್​ ಅರೆಸ್ಟ್ ಆಗಿದೆ. ಆತನನ್ನು ಪಂಜಾಬ್​ಗೆ ಕರೆದೊಯ್ಯಬಹುದು ಅಥವಾ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ಗೆ ಹಸ್ತಾಂತರ ಮಾಡಬಹುದು’ ಎಂದು ಹೇಳಿದ್ದಾನೆ.

ಇದನ್ನೂ ಓದಿ: Amritpal Singh : ಪೊಲೀಸರನ್ನೇ ಯಾಮಾರಿಸುತ್ತಿರುವ ಪ್ರತ್ಯೇಕವಾದಿ ಅಮೃತ್​ಪಾಲ್​ ಸಿಂಗ್​; ಸೆರೆಗೆ ಕಾರ್ಯಾಚರಣೆ

ಲಾರೆನ್ಸ್​ ಬಿಷ್ಣೋಯಿ ಈಗಾಗಲೇ ಜೈಲಿನಲ್ಲಿ ಇರುವ ನಟೋರಿಯಸ್​ ಗ್ಯಾಂಗ್​ಸ್ಟರ್​. ಈತನ ಗ್ಯಾಂಗ್​ಗೂ-ಖಲಿಸ್ತಾನಿ ಗ್ಯಾಂಗ್​ಗೂ ದ್ವೇಷ. ತನ್ನನ್ನು ತಾನು ರಾಷ್ಟ್ರೀಯವಾದಿ ಎಂದು ಹೇಳಿಕೊಳ್ಳುವ ಲಾರೆನ್ಸ್ ಬಿಷ್ಣೋಯಿ, ಖಲಿಸ್ತಾನಿಗಳ ವಿರುದ್ಧ ಕಿಡಿಕಾರುತ್ತಾರೆ. ಈಗ ಬಂಧಿತನಾಗಿರುವ ಅಮೃತ್​ಪಾಲ್​ ಸಿಂಗ್​​ನನ್ನು ಪೊಲೀಸರೇ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್​ಗೆ ಹಸ್ತಾಂತರ ಮಾಡಿ, ತನ್ಮೂಲಕ ಕೊಲ್ಲಿಸುತ್ತಾರೆ. ಹೀಗಾಗಿಯೇ ಅವನು ಅರೆಸ್ಟ್ ಆಗಿಲ್ಲ ಎನ್ನುತ್ತಿದ್ದಾರೆ ಎಂಬುದು ಸಹಚರನ ವಾದ.

ಇನ್ನು ಪೊಲೀಸರು ಈ ಅಮೃತ್​ ಪಾಲ್​ ಸಿಂಗ್​​ನ ಸಂಘಟನೆ ವಾರಿಸ್​ ಪಂಜಾಬ್​ ದೆಯ ಸುಮಾರು 78 ಜನರನ್ನು ಬಂಧಿಸಿದ್ದಾರೆ. ಇನ್ನೂ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪಂಜಾಬ್​ನ ಹಲವು ಭಾಗಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅದರಲ್ಲೂ ಅಮೃತ್​ಪಾಲ್​ ಸಿಂಗ್​ ಹುಟ್ಟೂರು ಜಲ್ಲುಪುರ್​ ಖೇರಾದಲ್ಲಿ ಮತ್ತಷ್ಟು ಭದ್ರತೆ ಕಲ್ಪಿಸಲಾಗಿದೆ. ರಾಜ್ಯಾದ್ಯಂತ ಹಲವೆಡೆ ಪೊಲೀಸರು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

Exit mobile version