Site icon Vistara News

ಉತ್ತರ ಪ್ರದೇಶದಲ್ಲಿ ದಲಿತ ಸೋದರಿಯರ ಬರ್ಬರ ಹತ್ಯೆ: ಶವ ಪರೀಕ್ಷೆ ವರದಿಯಲ್ಲೇನಿದೆ?

Uttar Pradesh Rape Case

ಲಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಹತ್ಯೆಯಾದ ದಲಿತ ಸಹೋದರಿಯ ಪೋಸ್ಟ್ ಮಾರ್ಟಮ್​ ವರದಿ ಹೊರಬಿದ್ದಿದೆ. ಇವರಿಬ್ಬರ ಮೇಲೆ ಅತ್ಯಾಚಾರವಾಗಿದ್ದು ಶವಪರೀಕ್ಷೆಯಲ್ಲಿ ದೃಢಪಟ್ಟಿದೆ. ಈಗಾಗಲೇ ಬಂಧಿತರಾಗಿರುವ ಆರೋಪಿಗಳಾದ ಚೋಟು, ಜುನೈದ್, ಸೊಹೈಲ್, ಹಫೀಜುಲ್, ಕರಿಮುದ್ದೀನ್ ಮತ್ತು ಆರಿಫ್ ತಾವು ರೇಪ್​ ಮಾಡಿದ್ದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ ಮತ್ತು ತಾವೇನೆಲ್ಲ ಮಾಡಿದೆವು ಎಂಬುದನ್ನೂ ವಿವರಿಸಿದ್ದಾರೆ. ಆರು ಮಂದಿ ಆರೋಪಿಗಳು ನೀಡಿದ ವಿವರಣೆಯನ್ನು ಪೊಲೀಸರು ಮಾಧ್ಯಮಗಳ ಎದುರು ಬಿಚ್ಚಿಟ್ಟಿದ್ದಾರೆ.

‘ಇಬ್ಬರು ಹುಡುಗಿಯರೂ ಅಕ್ಕ-ತಂಗಿಯರು. ಇವರ ಮೃತದೇಹ ಕಬ್ಬಿನ ಗದ್ದೆ ಸಮೀಪ ಮರವೊಂದಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗುತ್ತಿದ್ದಂತೆ, ಅವರ ತಾಯಿ ತನ್ನ ಮಕ್ಕಳನ್ನು ಮೇಲ್ಜಾತಿಯವರು ಕಿಡ್ನ್ಯಾಪ್​ ಮಾಡಿ, ನಂತರ ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ವಾಸ್ತವದಲ್ಲಿ ಬಾಲಕಿಯರನ್ನು ಆರೋಪಿಗಳು ಕಿಡ್ನ್ಯಾಪ್​ ಮಾಡಿರಲಿಲ್ಲ. ಜುನೈದ್ ಮತ್ತು ಸೊಹೈಲ್​ ಜತೆ ಈ ಹುಡುಗಿಯರಿಗೆ ಸ್ನೇಹವಿತ್ತು. ಇವರಿಬ್ಬರೂ ಸೇರಿ ಪುಸಲಾಯಿಸಿ ಬಾಲಕಿಯರನ್ನು ಹೊಲಕ್ಕೆ ಕರೆಸಿಕೊಂಡಿದ್ದರು. ಅಲ್ಲಿಯೇ ಇವರ ಮೇಲೆ ರೇಪ್​ ಮಾಡಿದ್ದಾರೆ. ಆಗ ಹುಡುಗಿಯರು ತಮ್ಮನ್ನು ಮದುವೆಯಾಗುವಂತೆ ಅವರಿಬ್ಬರನ್ನು ಒತ್ತಾಯಿಸಿದ್ದಾರೆ. ಇದರಿಂದ ಕುಪಿತಗೊಂಡ ಜುನೈದ್​ ಮತ್ತು ಸೊಹೈಲ್​ ಸೇರಿ ಬಾಲಕಿಯರನ್ನು ಹತ್ಯೆ ಮಾಡಿದ್ದಾರೆ. ಅಷ್ಟಾದ ಮೇಲೆ ಭಯಗೊಂಡು ‘ನಾವು ಈ ಅಪರಾಧ ಮಾಡಿಬಿಟ್ಟಿದ್ದೇವೆ. ಹೇಗಾದರೂ ಬಚಾವ್​ ಆಗಬೇಕು, ಏನಾದರೂ ಮಾಡಿ’ ಎಂದು ಹಫೀಜುಲ್, ಕರಿಮುದ್ದೀನ್ ಮತ್ತು ಆರಿಫ್​​ಗೆ ಕರೆ ಮಾಡಿದ್ದಾರೆ. ಅವರೂ ಸ್ಥಳಕ್ಕೆ ಬಂದ ಬಳಿಕ ಎಲ್ಲರೂ ಸೇರಿ ಹುಡುಗಿಯರನ್ನು ಮರಕ್ಕೆ ನೇತು ಹಾಕಿದ್ದಾರೆ’ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.

ಇನ್ನು ಚೋಟು ಆ ಸ್ಥಳದಲ್ಲಿ ಇರಲೇ ಇಲ್ಲ. ಜುನೈದ್​ ಮತ್ತು ಸೊಹೈಲ್​ ಹುಡುಗಿಯರನ್ನು ಅತ್ಯಾಚಾರ ಮಾಡಿದಾಗಲೂ ಅವನು ಇರಲಿಲ್ಲ, ಅವರನ್ನು ಹತ್ಯೆ ಮಾಡಿ ಮರಕ್ಕೆ ನೇಣು ಹಾಕುವಾಗಲೂ ಆತ ಸ್ಥಳದಲ್ಲಿ ಇರಲಿಲ್ಲ. ಆದರೆ ಜುನೈದ್​ ಮತ್ತು ಸೊಹೈಲ್​​ನನ್ನು ಹುಡುಗಿಯರಿಗೆ ಪರಿಚಯಿಸಿದ್ದೇ ಅವನು. ಇವರ ಸ್ನೇಹ ಬೆಳೆಯಲು ಕಾರಣನೇ ಚೋಟು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಂದಹಾಗೇ, ಇಲ್ಲಿ ಚೋಟುವನ್ನು ಹೊರತುಪಡಿಸಿ ಉಳಿದೆಲ್ಲರೂ ಲಲಿತ್​ಪುರ ನಿವಾಸಿಗಳೇ ಆಗಿದ್ದಾರೆ.

ಮೃತರು ಅಪ್ರಾಪ್ತೆಯರು
ಇದೀಗ ರೇಪ್​ಗೆ ಒಳಗಾಗಿ ಹತ್ಯೆಗೀಡಾದ ಹುಡುಗಿಯರಲ್ಲಿ ಒಬ್ಬಳು 10ನೇ ತರಗತಿ. ಇನ್ನೊಬ್ಬಾಕೆ 7ನೇ ಕ್ಲಾಸ್​. ಘಟನೆ ನಡೆಯುತ್ತಿದ್ದಂತೆ ತಾಯಿಯ ರೋದನ ಮುಗಿಲುಮುಟ್ಟಿತ್ತು. ನನ್ನ ಮಕ್ಕಳನ್ನು ಮೂವರು ಬಂದು ಬೈಕ್​​ನಲ್ಲಿ ಅಪಹರಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ, ಅವರನ್ನು ಬಿಡಬೇಡಿ ಎಂದು ಅವರು ಆಕ್ರೋಶ ಭರಿತರಾಗಿ ಕೂಗುತ್ತಿದ್ದರು. ಇನ್ನು ವೈದ್ಯರು ಮೃತ ಹುಡುಗಿಯರ ಶವಪರೀಕ್ಷೆಯ ವಿಡಿಯೋ ಕೂಡ ಮಾಡಿದ್ದಾರೆ. ಬಾಲಕಿಯರಿಬ್ಬರ ಮೇಲೆಯೂ ರೇಪ್​ ಆಗಿದೆ. ಅವರನ್ನು ಮೊದಲು ಉಸಿರುಗಟ್ಟಿಸಿ ಕೊಂದು ನಂತರ ಮರಕ್ಕೆ ನೇತು ಹಾಕಲಾಗಿದೆ ಎಂದು ಸ್ಪಷ್ಟವರದಿ ಬಂದಿದೆ.

ಇದನ್ನೂ ಓದಿ :ಲಖಿಂಪುರ ಕೇರಿಯಲ್ಲಿ 2 ದಲಿತ ಬಾಲಕಿಯರು ಮರಕ್ಕೆ ನೇಣು | ರೇಪ್‌ ಮಾಡಿ ಕೊಲೆಗೈದ ಶಂಕೆ

Exit mobile version