Site icon Vistara News

Gehlot Controversy | ಮಹಿಳೆಯರ ಹತ್ಯೆ ಹೆಚ್ಚಲು ರೇಪಿಸ್ಟ್​​ಗಳಿಗೆ ಗಲ್ಲು ಕಾನೂನೇ ಕಾರಣ ಎಂದ ಸಿಎಂ ಗೆಹ್ಲೊಟ್‌

Ashok Gehlot

ನವ ದೆಹಲಿ: ಅತ್ಯಾಚಾರ ಆರೋಪಿಗಳನ್ನು ಗಲ್ಲಿಗೇರಿಸುವ ಕಾನೂನು ಬಂದ ಮೇಲೆ ದೇಶದಲ್ಲಿ ಮತ್ತಷ್ಟು ಸಮಸ್ಯೆಯೇ ಆಗಿದೆ. ಮಹಿಳೆಯರನ್ನು ರೇಪ್​ ಮಾಡಿಯಾದ ಮೇಲೆ ಅವರನ್ನು ಕೊಲ್ಲುವ ಪ್ರವೃತ್ತಿ ಹೆಚ್ಚಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ ನಡೆಸಿದ ವೇಳೆ ಅಶೋಕ್​ ಗೆಹ್ಲೋಟ್​​ (Gehlot Controversy) ಈ ಹೇಳಿಕೆ ನೀಡಿದ್ದಾರೆ.

‘ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸಿದ ಮೇಲೆ, ಯಾವುದೇ ಅತ್ಯಾಚಾರವಾದರೂ ಆರೋಪಿಗಳನ್ನು ನೇಣಿಗೆ ಹಾಕಿ ಎಂಬ ಕೂಗು-ಆಗ್ರಹ ಕೇಳಿಬರುತ್ತಿದೆ. ಕಾನೂನು ಕೂಡ ಜಾರಿಯಲ್ಲಿದೆ. ಆದರೆ ಈ ಕಾನೂನಿನಿಂದಾಗಿ ಮಹಿಳೆಯರನ್ನು ಹತ್ಯೆ ಮಾಡುವ ಪ್ರಮಾಣ ಜಾಸ್ತಿಯಾಗಿದೆ. ತಾವು ರೇಪ್​ ಮಾಡಿದ ಮಹಿಳೆಯನ್ನು ಜೀವ ಸಹಿತ ಉಳಿಸಿದರೆ, ತಮ್ಮ ವಿರುದ್ಧ ಸಾಕ್ಷಿ ಹೇಳುತ್ತಾಳೆ. ನಾವೂ ಗಲ್ಲಿಗೇರಬೇಕಾಗುತ್ತದೆ ಎಂದು ಹೆದರಿ, ಆರೋಪಿಗಳು ಆಕೆಯ ಜೀವ ತೆಗೆದೇ ಹೋಗುತ್ತಿದ್ದಾರೆ. ಇದೊಂದು ಅಪಾಯಕಾರಿ ಟ್ರೆಂಡ್ ದೇಶಾದ್ಯಂತ ಪ್ರಾರಂಭವಾಗಿದೆ. ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು’ ಎಂದು ಹೇಳಿದ್ದಾರೆ.

ಗೆಹ್ಲೋಟ್​ ಮಾತುಗಳಿಗೆ ಟೀಕೆ ವ್ಯಕ್ತವಾಗಿದೆ. ಅರಿವು, ತಿಳಿವಳಿಕೆ ಇದ್ದವರು ಇಂಥ ಮಾತುಗಳನ್ನು ಆಡಬಾರದು ಎಂದು ಜನ ಹೇಳುತ್ತಿದ್ದಾರೆ. ರೇಪಿಸ್ಟ್​ಗಳಿಗೆ ಗಲ್ಲು ಶಿಕ್ಷೆ ಬೇಡವೆಂದು ಪರೋಕ್ಷವಾಗಿ ಹೇಳುತ್ತಿದ್ದೀರಾ ಎಂಬ ಪ್ರಶ್ನೆಯನ್ನೂ ಸೋಷಿಯಲ್​ ಮೀಡಿಯಾಗಳಲ್ಲಿ ಜನರು ಕೇಳುತ್ತಿದ್ದಾರೆ. ಈ ಹಿಂದೆ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್​ ಯಾದವ್​ ಮಾತನಾಡುತ್ತ ‘ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾಕೆ?’ ಎಂದು ಪ್ರಶ್ನಿಸಿದ್ದರು. ‘ರೇಪಿಸ್ಟ್​​ಗಳಿಗೆ ನೇಣಿಗೇರಿಸುವಂತಹ ಶಿಕ್ಷೆ ಅಗತ್ಯ ಇರುವುದಿಲ್ಲ. ಪುರುಷರು ತಪ್ಪು ಮಾಡುತ್ತಾರೆ. ಹಾಗಂತ ನೇಣಿಗೆ ಏರಿಸಬಾರದು. ನಾವು ಅಧಿಕಾರಕ್ಕೆ ಬಂದರೆ ಈ ಕಾನೂನನ್ನು ಬದಲಿಸುತ್ತೇವೆ ಎಂದು ಹೇಳಿದ್ದರು.

ನಿರ್ಭಯಾ ನೆನಪು
2012ರಲ್ಲಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್​​ ಮೇಲೆ 23 ವರ್ಷದ ಪ್ಯಾರಾಮೆಡಿಕಲ್​ ವಿದ್ಯಾರ್ಥಿನಿಯನ್ನು ಆರು ಮಂದಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಆಕೆ ಸಿಂಗಾಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆರು ಮಂದಿ ಆರೋಪಿಗಳನ್ನು ತಿಹಾರ್​ ಜೈಲಿಗೆ ಹಾಕಲಾಗಿತ್ತು. ಅದರಲ್ಲಿ ಒಬ್ಬಾತ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ, ಇನ್ನೊಬ್ಬಾತ ಬಾಲಾಪರಾಧಿ ಆಗಿದ್ದರಿಂದ 3 ವರ್ಷ ಜೈಲು ವಿಧಿಸಲಾಗಿತ್ತು. ಉಳಿದ ನಾಲ್ವರನ್ನು 2020ರ ಮಾರ್ಚ್​ 20ರಂದು ಗಲ್ಲಿಗೇರಿಸಲಾಗಿದೆ.

ಇದನ್ನೂ ಓದಿ: ಸುಳ್ಳು ಅತ್ಯಾಚಾರ ಕೇಸ್, ಬೆದರಿಕೆ ಆರೋಪ; ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ವಿರುದ್ಧ FIR

Exit mobile version