Site icon Vistara News

Eknath Shinde: ಅಯೋಧ್ಯೆಯಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ; ಫಡ್ನವೀಸ್ ಜತೆ ಸೇರಿ ಬಲಪ್ರದರ್ಶನ

Maharashtra CM Eknath Shinde Ayodhya Visit

#image_title

ಅಯೋಧ್ಯೆ: ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನೆ ನಾಯಕ ಏಕನಾಥ್ ಶಿಂದೆ (Eknath Shinde) ಅವರು ಇಂದು ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಅವರೊಂದಿಗೆ ಶಿವಸೇನೆಯ ಸಂಸದರು, ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್​ ಕೂಡ ಇದ್ದಾರೆ. ಶನಿವಾರವೇ ಲಖನೌಗೆ ಆಗಮಿಸಿದ್ದ ಏಕನಾಥ್ ಶಿಂಧೆ ಇಂದು ಅಯೋಧ್ಯೆಗೆ ತೆರಳುವ ವೇಳೆ ಶಿವಸೇನೆಯ ಸಾವಿರಾರು ಕಾರ್ಯಕರ್ತರು/ಬೆಂಬಲಿಗರು ನೆರೆದಿದ್ದರು. ಥೇಟ್​ ಒಂದು ರೋಡ್ ಶೋ ಆದಂತೆ ಆಗಿದೆ.

ಶಿವಸೇನೆ ಇಬ್ಭಾಗವಾಗಿ 2022ರಲ್ಲಿ ಏಕನಾಥ್​ ಶಿಂದೆ ಅವರ ಬಣ ಬಿಜೆಪಿಯೊಟ್ಟಿಗೆ ಸೇರಿ ಸರ್ಕಾರ ರಚನೆ ಮಾಡಿದೆ. ಏಕನಾಥ್​ ಶಿಂಧೆಯವರು 2018ರಲ್ಲಿ ಒಮ್ಮೆ ಅಯೋಧ್ಯೆ ಶ್ರೀರಾಮಜನ್ಮಭೂಮಿಗೆ ಭೇಟಿಕೊಟ್ಟಿದ್ದರು. ಆಗಿನ್ನೂ ಸುಪ್ರೀಂಕೋರ್ಟ್​ ಅಲ್ಲಿ ರಾಮಮಂದಿರ ನಿರ್ಮಾಣದ ತೀರ್ಪು ಕೊಟ್ಟಿರಲಿಲ್ಲ. ಅದಾದ ಮೇಲೆ 2020ರಲ್ಲಿ ಒಮ್ಮೆ ಅಲ್ಲಿಗೆ ಹೋಗಿದ್ದರು. ಹೀಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ಮೇಲೆ ಏಕನಾಥ್​ ಶಿಂಧೆಯವರು ಅಯೋಧ್ಯೆಗೆ ಭೇಟಿ ಕೊಡುತ್ತಿರುವುದು ಇದೇ ಮೊದಲಬಾರಿಗೆ.

ಇಂದು ಮುಂಜಾನೆ ಲಖನೌನಿಂದ ಅಯೋಧ್ಯೆಗೆ ಹೊರಡುವ ಮುನ್ನ ಮಾತನಾಡಿದ ಸಿಎಂ ಏಕನಾಥ್ ಶಿಂಧೆ, ‘ನಾನಿಂದು ಅಯೋಧ್ಯೆಗೆ ಭೇಟಿ ನೀಡಿ, ಶ್ರೀರಾಮನ ದರ್ಶನ ಪಡೆಯುತ್ತೇನೆ. ಶಿವಸೇನೆಯ ಚಿಹ್ನೆಯಾದ ಬಿಲ್ಲು-ಬಾಣ ನಮ್ಮ ಬಣಕ್ಕೆ ಸಿಕ್ಕಿದೆ. ಹೀಗಾಗಿ ಶ್ರೀರಾಮನ ಅನುಗ್ರಹ ನಮ್ಮ ಮೇಲಿದೆ ಎಂದೇ ಅರ್ಥ’ ಎಂದು ಹೇಳಿದ್ದಾರೆ.
ಅಯೋಧ್ಯೆಯನ್ನು ತಲುಪಿರುವ ಏಕನಾಥ್​ ಶಿಂಧೆ, ಸಂಜೆ ಸರಯೂ ನದಿ ತೀರದಲ್ಲಿ ನಡೆಯಲಿರುವ ಮಹಾ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗೇ, ದೇವಸ್ಥಾನ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಲಿದ್ದಾರೆ. ಅಲ್ಲಿನ ಸಾಧು-ಸಂತರನ್ನು ಭೇಟಿ ಮಾಡಲಿದ್ದಾರೆ. ಏಕನಾಥ್​ ಶಿಂಧೆಯವರೊಟ್ಟಿಗೆ ಉತ್ತರಪ್ರದೇಶ ಸಚಿವ ಸ್ವತಂತ್ರ ದೇವ್​ ಸಿಂಗ್​ ಕೂಡ ಇರಲಿದ್ದಾರೆ.

ಇದನ್ನೂ ಓದಿ: Ram Lalla Jalabhishek: ಅಯೋಧ್ಯೆ ರಾಮಲಲ್ಲಾಗೆ ಏ.23ರಂದು ಜಲಾಭಿಷೇಕ, 155 ದೇಶಗಳ ನದಿ ನೀರು ಸಮರ್ಪಣೆ

ಶಿವಸೇನೆಯ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆಯವರಿಗೆ ಶ್ರೀರಾಮ ಮಂದಿರ ನಿರ್ಮಾಣ ಬಹುದೊಡ್ಡ ಕನಸಾಗಿತ್ತು ಎಂದು ಹೇಳಿರುವ ಏಕನಾಥ್ ಶಿಂಧೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನ ಲಖನೌದಲ್ಲಿ ಈಗಾಗಲೇ ಭೇಟಿ ಮಾಡಿದ್ದಾರೆ. ನಾನು ಅಯೋಧ್ಯೆಗೆ ಬಂದಿರುವುದು ಯಾವುದೇ ರಾಜಕೀಯ ಕಾರಣಕ್ಕಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಿಂಧೆ ಅಯೋಧ್ಯೆ ಭೇಟಿ ನಿಮಿತ್ತ, ಅಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.

Exit mobile version