Site icon Vistara News

ಅಕ್ರಮ ಶಸ್ತ್ರಾಸ್ತ್ರಗಳು ಗಂಭೀರ ಸಮಸ್ಯೆ, ಕಠಿಣ ಕಾನೂನು ಅಗತ್ಯ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಸಲಹೆ

Make stricter law against unlicensed weapons Says Supreme Court

ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರಗಳನ್ನು ಹೊಂದುವುದು ನಿಜವಾದ ಸಮಸ್ಯೆ ಮತ್ತು ಅದನ್ನು ಗಂಭೀರ ಅಪರಾಧ ಎಂದು ಸರ್ಕಾರ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ (Supreme Court)​ ಹೇಳಿದೆ. ಜನರು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿ, ನಡೆಸಿರುವ ಕ್ರೈಂಗಳ ಬಗ್ಗೆ ವಿವಿಧ ರಾಜ್ಯಗಳು ಕೊಟ್ಟ ಅಂಕಿ-ಸಂಖ್ಯೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಸುಪ್ರೀಂಕೋರ್ಟ್​ ಅಭಿಪ್ರಾಯ ವ್ಯಕ್ತಪಡಿಸಿದೆ. ‘ಅಕ್ರಮ ಶಸ್ತ್ರಾಸ್ತ್ರಗಳಿಂದ ಅಂದರೆ ಲೈಸೆನ್ಸ್​ ಇಲ್ಲದ ಶಸ್ತ್ರಾಸ್ತ್ರಗಳಿಂದ (Unlicensed Weapons)ನಡೆದ ಅಪರಾಧಗಳು ಎಷ್ಟು? ಆ ಬಗ್ಗೆ ನಿಮ್ಮಲ್ಲಿನ ಸಂಬಂಧಪಟ್ಟ ಆಡಳಿತಗಳು, ಪೊಲೀಸ್ ಇಲಾಖೆಗಳು ಏನು ಕ್ರಮ ಕೈಗೊಂಡಿವೆ? ಎಂಬ ಬಗ್ಗೆ ಡಾಟಾ ಸಹಿತ ಮಾಹಿತಿ ಕೊಡುವಂತೆ ಏಪ್ರಿಲ್ 13ರಂದು ಸುಪ್ರೀಂಕೋರ್ಟ್​ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿತ್ತು.

ರಾಜ್ಯಗಳು ಸುಪ್ರೀಂಕೋರ್ಟ್​ಗೆ ನೀಡಿದ ಮಾಹಿತಿ ಪ್ರಕಾರ ‘ಉತ್ತರ ಪ್ರದೇಶ, ಬಿಹಾರ, ಪಂಜಾಬ್​ ಮತ್ತು ಉತ್ತರ ಭಾಗದ ಇತರ ರಾಜ್ಯಗಳಲ್ಲೇ ಈ ಅಕ್ರಮ ಶಸ್ತ್ರಾಸ್ತ್ರ ಅಪರಾಧ ಪ್ರಕರಣಗಳು ಜಾಸ್ತಿ ಎಂಬುದನ್ನು ಸುಪ್ರೀಂಕೋರ್ಟ್​ ಗಮನಿಸಿದೆ. ತಮಿಳುನಾಡು ಹೊರತುಪಡಿಸಿ ಉಳಿದೆಲ್ಲ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲೂ ಅಕ್ರಮ ಬಂದೂಕು ಸೇರಿ ಇತರ ಶಸ್ತ್ರಾಸ್ತ್ರಗಳಿಂದ ಕ್ರೈಂ ನಡೆದಿರುವ ಬಗ್ಗೆ ಕೇಸ್​ ದಾಖಲಾಗಿದೆ. ತಮಿಳುನಾಡಲ್ಲಿ ಒಂದೂ ಪ್ರಕರಣ ಇಲ್ಲ ಎಂದು ಆ ರಾಜ್ಯ ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದೆ.

ಇದನ್ನೂ ಓದಿ: Adani Group : ಅದಾನಿ-ಹಿಂಡೆನ್‌ಬರ್ಗ್‌ ತನಿಖಾ ವರದಿಯನ್ನು ಆ.14ರೊಳಗೆ ಸಲ್ಲಿಸಲು ಸೆಬಿಗೆ ಸುಪ್ರೀಂಕೋರ್ಟ್‌ ಸೂಚನೆ

ಈ ಅಂಕಿ-ಅಂಶಗಳ ಬಗ್ಗೆ ಪರಿಶೀಲನೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ಕೆ.ಎಂ.ಜೋಸೆಫ್​ ಮತ್ತು ನ್ಯಾ. ಬಿ.ವಿ.ನಾಗರತ್ನಾ ಅವರನ್ನೊಳಗೊಂಡ ಪೀಠ ‘ಪರವಾನಗಿ ಇಲ್ಲದ ಶಸ್ತ್ರಾಸ್ತ್ರಗಳನ್ನು ಹೊಂದಿ, ಅದರಲ್ಲಿ ಕ್ರೈಂ ನಡೆಸುತ್ತಿರುವುದು ನಿಜವಾದ ಸಮಸ್ಯೆ. ಹೀಗಾಗಿ ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದೆ ಇದ್ದರೆ ಜನರು ಈ ಬಗ್ಗೆ ಭಯಗೊಳ್ಳುವುದಿಲ್ಲ’ ಎಂದು ಕೇಂದ್ರದ ಪರ ಹಾಜರಾದ ವಕೀಲ ರಜತ್​ ನಾಯರ್​ಗೆ ಹೇಳಿದೆ. ಅಕ್ರಮ ಶಸ್ತ್ರಾಸ್ತ್ರ ಹೊಂದುವವರನ್ನು ಶಸ್ತ್ರ ಕಾಯ್ದೆಯಡಿ ಬಂಧಿಸಲಾಗುತ್ತಿದೆ. ಇದರಡಿಯಲ್ಲಿ 3ರಿಂದ 7ವರ್ಷಗಳವರೆಗೆ ಜೈಲು ಶಿಕ್ಷೆ ನೀಡಬಹುದಾಗಿದೆ. ಆದರೆ ಕಾಯ್ದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತ ಮಾಡಿ, ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಅಷ್ಟೇ ಅಲ್ಲ, ಯುಸ್​ನ ಉದಾಹರಣೆಯನ್ನೂ ಕೊಟ್ಟಿದೆ. ಅಲ್ಲಿ ಚಿಕ್ಕವಯಸ್ಸಿನವರೆಲ್ಲ ಗನ್ ಇಟ್ಟುಕೊಂಡು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಾರೆ. ಶಾಪಿಂಗ್ ಮಾಲ್, ಜನಸಂದಣಿ ಇರುವ ಸ್ಥಳಗಳು, ಶಾಲಾ-ಕಾಲೇಜುಗಳಿಗೆ ನುಗ್ಗಿ ಹೇಗೆ ಪೈರಿಂಗ್​, ಚಾಕು ದಾಳಿ ನಡೆಸುತ್ತಾರೆ ಎಂಬುದನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್ ಪೀಠ ‘ನಮ್ಮ ದೇಶದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳಿಂದ ಅಪರಾಧಗಳ ನಿಯಂತ್ರಣ ಆಗಲೇಬೇಕು’ ಎಂದು ಒತ್ತಿ ಹೇಳಿದೆ.

Exit mobile version