Site icon Vistara News

ಪರ್ಸ್​, ವಾಚ್​ ಕಳೆದುಕೊಂಡ ಬಳಿಕ 2 ಬೈಕ್​​ಗಳಿಗೆ ಬೆಂಕಿ ಹಚ್ಚಿದವ ಬಂಧನ; ನೆರೆದಿದ್ದವರು ವಾಪಸ್​ ಹೋಗುತ್ತಿದ್ದಂತೆ ಹೊಗೆ ಎದ್ದಿತ್ತು!

man sets fire to vehicle After lose his wallet in Chennai

#image_title

ಅನೇಕರು ಕೋಪ-ಹತಾಶೆಗೆ ಒಳಗಾದಾಗ ತಮ್ಮ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ತಾವೇನು ಮಾಡ್ತಿದ್ದೇವೆ ಎಂಬ ಪರಿವೆಯೇ ಇಲ್ಲದಂತೆ ವರ್ತಿಸುತ್ತಾರೆ. ಹಾಗೇ, ಇಲ್ಲೊಬ್ಬ 51ವರ್ಷದ ವ್ಯಕ್ತಿ ತನ್ನ ಪರ್ಸ್​ ಕಳೆದುಕೊಂಡು, ಅದನ್ನು ಹುಡುಕಾಡಿ ಸೋತಿದ್ದಾರೆ. ಎಷ್ಟೆಲ್ಲ ಹುಡುಕಿದರೂ ಪರ್ಸ್​ ಸಿಗದೆ ಇದ್ದಾಗ ಹತಾಶೆ-ಕೋಪಗೊಂಡ ಅವರು ಎರಡು ಬೈಕ್​​ಗಳಿಗೆ ಬೆಂಕಿ ಹಚ್ಚಿ, ಈಗ ಪೊಲೀಸ್​ ಕಸ್ಟಡಿ ಸೇರಿದ್ದಾರೆ.

ಮಧುರವಾಯಲ್​ ಎಂಬಲ್ಲಿ ಘಟನೆ ನಡೆದಿದೆ. ಇಲ್ಲಿನ ವಿಜಿಪಿ ಅಮುಧಾ ನಗರದಲ್ಲಿರುವ ಪಿಳ್ಳೈಯಾರ್​ ಕೋಯಿಲ್ ರಸ್ತೆಯಲ್ಲಿ ಬುಧವಾರ ಮೊದಲು ದೊಡ್ಡ ಶಬ್ದ ಕೇಳಿಸಿತು. ಅದನ್ನು ಕೇಳಿದ ಹಲವರು ಸ್ಥಳದಲ್ಲಿ ಜಮಾಯಿಸಿದರು. ಬಾಗಿಲು ಹಾಕಿಕೊಂಡು ಮನೆಯೊಳಗೆ ಇದ್ದವರೂ ಬಂದು ಇಣುಕಿದರು. ನೋಡಿದೆ ಅರೆಬರೆ ವೃದ್ಧನೊಬ್ಬ ರಸ್ತೆಯಲ್ಲಿ ಗಲಾಟೆ ಶುರುವಿಟ್ಟುಕೊಂಡಿದ್ದರು. ಅವರು ಸ್ಥಳೀಯನೇ ಮತ್ತು ಅವರ ಹೆಸರು ಎಸ್.ರಾಮಚಂದ್ರನ್​ ಎಂದು ಅಲ್ಲಿನ ಹಲವರಿಗೆ ಗೊತ್ತಿತ್ತು. ಏನಾಯ್ತು ಎಂದು ಕೇಳಿದ್ದಕ್ಕೆ, ನಾನು ಇಲ್ಲೇ ಎಲ್ಲೋ ನನ್ನ ವಾಚ್​ ಮತ್ತು ಪರ್ಸ್ ಕಳೆದುಕೊಂಡಿದ್ದೇನೆ. ಅದನ್ನು ಹುಡುಕುತ್ತಿದ್ದೇನೆ ಎಂದಷ್ಟೇ ಅವರು ಹೇಳಿದ್ದಾರೆ.

ಇದನ್ನೂ ಓದಿ: Child theft : 600 ಸಿಸಿ ಟಿವಿ ಚೆಕ್‌ ಮಾಡಿದಾಗ ಆ ಮಕ್ಕಳ ಕಳ್ಳಿ ಸಿಕ್ಕಿಬಿದ್ದಳು; ಅವಳ ಹಿಂದೆ ಕೂಡಾ ಒಂದು ಕಣ್ಣೀರ ಕಥೆ ಇತ್ತು!

ಕ್ರಮೇಣ ಅಲ್ಲಿ ನೆರೆದಿದ್ದವರೆಲ್ಲ ವಾಪಸ್ ಹೊರಡಲು ಶುರು ಮಾಡಿದರು. ಆದರೆ ಕೆಲ ಹೊತ್ತಲ್ಲಿ ರಾಮಚಂದ್ರನ್​ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದ್ದಾರೆ. ಅಲ್ಲೇ ಪಾರ್ಕಿಂಗ್ ಏರಿಯಾದಲ್ಲಿದ್ದ ಎರಡು ಬೈಕ್​ಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಬೆಂಕಿ ಮತ್ತಷ್ಟು ವಾಹನಗಳಿಗೆ ತಗುಲಿ ಅವೆಲ್ಲವೂ ಹಾನಿಗೊಳಗಾಗಿವೆ. ಅಲ್ಲೆಲ್ಲ ದಟ್ಟನೆಯ ಹೊಗೆ ಆವರಿಸಿ, ಆಕಾಶದೆತ್ತರಕ್ಕೆ ಪಸರಿಸಿತ್ತು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರೆಲ್ಲ ಬಂದು ಬೆಂಕಿಯನ್ನು ನಂದಿಸಿದ್ದಾರೆ ಮತ್ತು ಎಸ್.ರಾಮಚಂದ್ರನ್​​ರನ್ನು ಬಂಧಿಸಿದ್ದಾರೆ.

ವಾಹನ ಕಳೆದುಕೊಂಡವರು ರಾಮಚಂದ್ರನ್​ ವಿರುದ್ಧ ದೂರು ದಾಖಲು ಮಾಡಿದ್ದು, ಕೊಯಂಬೇಡು ಠಾಣೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ‘ನಾನು ನನ್ನ ಪರ್ಸ್​ ಮತ್ತು ವಾಚ್​​ನ್ನು ಇದೇ ಏರಿಯಾದಲ್ಲಿ​ ಕಳೆದುಕೊಂಡೆ. ಎಲ್ಲ ಕಡೆ ಹುಡುಕಿದೆ, ನನ್ನ ಅಕ್ಕಪಕ್ಕದ ಮನೆಯವರನ್ನೆಲ್ಲ ಕೇಳಿದೆ. ಎಷ್ಟು ಹುಡುಕಿದರೂ ಸಿಗದೆ, ಹತಾಶೆಯಿಂದ ಹೀಗೆ ಮಾಡಿದೆ. ವಾಹನಗಳ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದೆ’ ಎಂದು ಪೊಲೀಸರ ಎದುರು ರಾಮಚಂದ್ರನ್​ ಒಪ್ಪಿಕೊಂಡಿದ್ದಾರೆ.

Exit mobile version