Site icon Vistara News

ಅಬಕಾರಿ ನೀತಿ ಅಕ್ರಮದಲ್ಲಿ ಮನೀಶ್​ ಸಿಸೋಡಿಯಾರೇ ಪ್ರಥಮ ಆರೋಪಿ; ಸಿಬಿಐ ಎಫ್​ಐಆರ್​ನಲ್ಲಿ ಉಲ್ಲೇಖ

Manish Sisodia

ನವ ದೆಹಲಿ: ನೂತನ ಅಬಕಾರಿ ನೀತಿಯಲ್ಲಿನ ಅಕ್ರಮ ತನಿಖೆ ಕೈಗೆತ್ತಿಕೊಂಡು ದೆಹಲಿ ಉಪಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ಮತ್ತು ಇತರ ಹಲವು ಅಧಿಕಾರಿಗಳ ವಿರುದ್ಧ ಎಫ್​ಐಆರ್​ ದಾಖಲು ಮಾಡಿರುವ ಸಿಬಿಐ, ‘ಮನೀಷ್ ಸಿಸೋಡಿಯಾ ಅವರೇ ಪ್ರಕರಣದ ಪ್ರಥಮ ಆರೋಪಿ’ ಎಂದು ಉಲ್ಲೇಖಿಸಿದೆ. ಸಿಬಿಐನ ಎಫ್ಐಆರ್​ ಕಾಪಿ ಇದೀಗ ಲಭ್ಯವಾಗಿದ್ದು ಅದರಲ್ಲಿ ಸಿಸೋಡಿಯಾ ಹೆಸರೇ ಮೊದಲಿದೆ. ಮನೀಷ್​ ಸೇರಿ ಒಟ್ಟು 15 ಆರೋಪಿಗಳನ್ನು ಹೆಸರಿಸಲಾಗಿದೆ. ಅದರೊಂದಿಗೆ ಇನ್ನಿತರ ಜನಸೇವಕರು ಮತ್ತು ಖಾಸಗಿ ವ್ಯಕ್ತಿಗಳು ಇದ್ದಾರೆ ಎಂದೂ ಉಲ್ಲೇಖ ಮಾಡಿದೆ.

ನೂತನ ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರ ನಡೆದಿರುವ ಆರೋಪದಡಿ ತನಿಖೆ ಪ್ರಾರಂಭಿಸಿರುವ ಸಿಬಿಐ ಇಂದು ಮನೀಷ್​ ಸಿಸೋಡಿಯಾಗೆ ಸೇರಿದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಸುಮಾರು ಐದು ತಾಸುಗಳ ಕಾಲ ರೇಡ್​ ಮಾಡಿರುವ ಸಿಬಿಐ, ಹಲವು ಅತ್ಯಂತ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಆದರೆ ಇವು ಯಾವುದಕ್ಕೆ ಸಂಬಂಧಪಟ್ಟಿದ್ದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಿಬಿಐ ಯಾವುದೇ ಮಾಹಿತಿಯನ್ನೂ ಬಹಿರಂಗಪಡಿಸುತ್ತಿಲ್ಲ. ಹಾಗೇ, ಸಿಸೋಡಿಯಾ ಅವರ ಖಾಸಗಿ ವಾಹನಕ್ಕಾಗಿ ಹುಡುಕಾಟವೂ ಶುರುವಾಗಿದೆ.

ಮನೀಷ್​ ಸಿಸೋಡಿಯಾ ವಿರುದ್ಧ ಸಿಬಿಐ ದಾಳಿಯಾಗಿದ್ದು ಈಗ ರಾಜಕೀಯ ಸ್ವರೂಪ ಪಡೆದಕೊಂಡಿದೆ. ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ, ದೆಹಲಿ ಸರ್ಕಾರವನ್ನು ದುರ್ಬಲಗೊಳಿಸಲೆಂದೇ ತನಿಖಾ ಏಜೆನ್ಸಿಗಳನ್ನು ಉಪಯೋಗಿಸಿಕೊಳ್ಳುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿದೆ. ಆಪ್​​ಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಅನುರಾಗ್ ಠಾಕೂರ್​, ‘ಆಮ್​ ಆದ್ಮಿ ಪಕ್ಷದ ಮುಖಂಡರ ವಿರುದ್ಧ ಭ್ರಷ್ಟಾಚಾರ ಕೇಸ್​ ದಾಖಲಾಗುತ್ತಿರುವುದು ಇದೇ ಮೊದಲೇನೂ ಅಲ್ಲ. ಹಣ ಅಕ್ರಮ ವರ್ಗಾವಣೆ ಕೇಸ್​​ನಲ್ಲಿ ಮೇ ತಿಂಗಳಲ್ಲಿ ಸತ್ಯೇಂದ್ರ ಜೈನ್​ ಅರೆಸ್ಟ್ ಆಗಿದ್ದಾರೆ. ಹಾಗಿದ್ದಾಗ್ಯೂ ಅವರನ್ನು ಅರವಿಂದ್ ಕೇಜ್ರಿವಾಲ್​ ಇನ್ನೂ ಅಮಾನತು ಮಾಡಿಲ್ಲ. ಈಗ ಕೇಜ್ರಿವಾಲ್​ ಮತ್ತು ಮನೀಷ್​ ಸಿಸೋಡಿಯಾ ನೈಜ ಮುಖ ಸಾರ್ವಜನಿಕರ ಎದುರು ಅನಾವರಣಗೊಂಡಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನ್ಯೂಯಾರ್ಕ್​ ಟೈಮ್ಸ್​​ಲ್ಲಿ ವರದಿ ಬಂದಿದ್ದಕ್ಕೇ ಸಿಬಿಐ ದಾಳಿ ಆಗಿದೆ ಎಂದ ಆಪ್​; ಪೇಡ್​ ಎಂದು ಟೀಕಿಸಿದ ಬಿಜೆಪಿ

Exit mobile version