Site icon Vistara News

ನೀವು ಪೋಷಿಸಿದ ಕ್ರಿಮಿನಲ್​ಗಳಿಗೆ ನಾವೀಗ ಮಣ್ಣು ಮುಕ್ಕಿಸುತ್ತೇವೆ; ಅಖಿಲೇಶ್​ ಯಾದವ್​​ಗೆ ಸಿಎಂ ಯೋಗಿ ತಿರುಗೇಟು

Mitti mein mila denge says Uttar Pradesh CM Yogi Adityanath over Prayagraj Murder Case

#image_title

ಉತ್ತರ ಪ್ರದೇಶ ಬಹುಜನ ಸಮಾಜ ಪಾರ್ಟಿ ಶಾಸಕರಾಗಿದ್ದ ರಾಜು ಪಾಲ್​ ಹತ್ಯೆ ಕೇಸ್​​ನಲ್ಲಿ (2005ರಲ್ಲಿ ನಡೆದಿದ್ದ ಕೊಲೆ)ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್​ ಪಾಲ್​​ ಎಂಬುವರನ್ನು ಪ್ರಯಾಗ್​ ರಾಜ್​​ನಲ್ಲಿ ಶುಕ್ರವಾರ ಗುಂಡಿಟ್ಟುಕೊಂದಿದ್ದಾರೆ. ಇದೇ ವಿಷಯ ಇಂದು ಬೆಳಗ್ಗೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ನಡುವಿನ ತೀವ್ರಸ್ವರೂಪದ ವಾಗ್ವಾದಕ್ಕೆ ಕಾರಣವಾಯಿತು. ‘ನೀವು ಪೋಷಿಸಿರುವ ಕ್ರಿಮಿನಲ್​​ಗಳು, ಮಾಫಿಯಾಗಳಿಗೆ ನಾವು ಮಣ್ಣು ಮುಕ್ಕಿಸುತ್ತೇವೆ’ ಎಂದು ಸಿಎಂ ಯೋಗಿ ಆದಿತ್ಯನಾಥ್​ ಅವರು ಅಖಿಲೇಶ್​ ಯಾದವ್​ ಉದ್ದೇಶಿಸಿ ಗುಡುಗಿದರು.

ರಾಜ್​ ಪಾಲ್​ ಹತ್ಯೆ ಕೇಸ್​​ನಲ್ಲಿ ಪ್ರಮುಖ ಸಾಕ್ಷಿಯಾಗಿರುವ ಉಮೇಶ್​ ಪಾಲ್​​ಗೆ ಪೊಲೀಸ್​ ಭದ್ರತೆ ಇತ್ತು. ಶುಕ್ರವಾರ ಅವರು ಎಸ್​ಯುವಿಯಲ್ಲಿ, ತಮ್ಮ ಪೊಲೀಸ್ ಭದ್ರತಾ ಸಿಬ್ಬಂದಿಯೊಂದಿಗೆ ಪ್ರಯಾಗ್​ರಾಜ್​ನಲ್ಲಿರುವ ತಮ್ಮ ಬಳಿ ಬಂದು, ಕಾರಿನಿಂದ ಕೆಳಗೆ ಇಳಿದಿದ್ದಾರೆ. ಆಗ ಅಪರಿಚಿತನೊಬ್ಬ ಬಂದು ಗುಂಡಿನ ದಾಳಿ ನಡೆಸಿದ್ದಾನೆ. ಅಷ್ಟೇ ಅಲ್ಲ, ಅವರ ಕಾರಿನತ್ತ ಕಚ್ಚಾಬಾಂಬ್​ ಕೂಡ ಎಸೆಯಲಾಗಿದ್ದು, ಸ್ಫೋಟಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

2005ರಲ್ಲಿ ರಾಜು ಪಾಲ್​ ಕೊಲೆಯಾಗಿತ್ತು. ಬಹುಜನ ಸಮಾಜ ಪಕ್ಷದಿಂದ ಸ್ಪರ್ಧಿಸಿದ್ದ ಇವರು, ಅಲಹಾಬಾದ್​ ಪಶ್ಚಿಮ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಖಾಲಿದ್​ ಆಜಿಂ ವಿರುದ್ಧ ಗೆದ್ದು ಶಾಸಕರಾಗಿದ್ದರು. ಈ ಖಾಲಿದ್ ಅವರು ಮಾಜಿ ಸಂಸದ (ಸಮಾಜವಾದಿ ಪಕ್ಷದ ಆಗಿನ ಸಂಸದ) ಆತಿಕ್​ ಅಹ್ಮದ್​ ಅವರ ಕಿರಿಯ ಸಹೋದರ ಮತ್ತು ರಾಜು ಪಾಲ್​ ಕೊಲೆಯ ಪ್ರಮುಖ ಆರೋಪಿ ಇದೇ ಆತಿಕ್​ ಅಹ್ಮದ್​. 2004ರಿಂದ 2008ರವರೆಗೆ ಫುಲ್ಪುರ ಕ್ಷೇತ್ರದ ಸಂಸದನಾಗಿದ್ದ. 2005ರಲ್ಲಿ ಹತ್ಯೆಯಲ್ಲಿ ಆತಿಕ್​ ಕೈವಾಡ ಇದೆ ಎಂಬ ಆರೋಪದ ಬೆನ್ನಲ್ಲೇ 2008ರಲ್ಲಿ ಸಮಾಜವಾದಿ ಪಕ್ಷ ಅವನನ್ನು ಉಚ್ಚಾಟನೆ ಮಾಡಿತ್ತು. ಸದ್ಯ ಆತಿಕ್​ ಗುಜರಾತ್​ ಜೈಲಿನಲ್ಲಿಯೇ ಇದ್ದಾನೆ. ಇದೀಗ ಉಮೇಶ್ ಪಾಲ್ ಹತ್ಯೆಯ ವಿಷಯವನ್ನು ಇಂದು ಸಮಾಜವಾದಿ ಪಕ್ಷ ದೊಡ್ಡದಾಗಿ ಮಾಡಿ, ಯೋಗಿ ವಿರುದ್ಧ ಅಖಿಲೇಶ್​ ಯಾದವ್ ವಾಗ್ದಾಳಿ ನಡೆಸಿದರು. ಇದು ಬಿಜೆಪಿ ಸರ್ಕಾರದ ವೈಫಲ್ಯ ಎಂದು ಹೇಳಿದರು.

ಅದಕ್ಕೆ ಖಡಕ್​ ಆಗಿ ಪ್ರತ್ಯುತ್ತರ ನೀಡಿದ ಯೋಗಿ ಆದಿತ್ಯನಾಥ್​ ‘ಪ್ರಯಾಗ್​ರಾಜ್​​ನಲ್ಲಿ ನಡೆದ ಉಮೇಶ್ ಪಾಲ್​ ಹತ್ಯೆಯ ಕೇಸ್​​ನ್ನು ನಮ್ಮ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯಡಿ ತನಿಖೆ ನಡೆಸಲಿದೆ. ಆದರೆ ಅಂದು ರಾಜ್​ಪಾಲ್​ ಹತ್ಯೆಯ ಹಿಂದೆ ಇದ್ದವರು, ಇದೇ ಸಮಾಜವಾದಿ ಪಕ್ಷವೇ ಪೋಷಿಸಿದ ಕ್ರಿಮಿನಲ್​ಗಳು ಅಲ್ಲವೇ? ಸಮಾಜವಾದಿ ಪಕ್ಷದಲ್ಲಿ ಸಂಸದ(ಆತಿಕ್​ ಅಹ್ಮದ್)ನಾಗಿ ಇದ್ದವರೇ ಅಲ್ಲವೇ?, ನಿಜ ಹೇಳಿ ಆತಿಕ್​​ನನ್ನು ಬೆಳೆಸಿದ್ದು ಇದೇ ಸಮಾಜವಾದಿ ಪಾರ್ಟಿ ಹೌದೋ, ಅಲ್ಲವೋ’ ಎಂದು ಕೇಳಿದರು. ‘ಹಾಗೇ, ನೀವು ಪೋಷಿಸಿದ ಮಾಫಿಯಾಗಳನ್ನು, ಕ್ರಿಮಿನಲ್​ಗಳನ್ನು ನಾವು ಮಣ್ಣಲ್ಲಿ, ಮಣ್ಣಾಗಿಸುತ್ತೇವೆ’ ಎಂದು ಯೋಗಿ ಗುಡುಗಿದರು.

ಇದನ್ನೂ ಓದಿ: Suryakumar Yadav | ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಭೇಟಿ ಮಾಡಿದ ಸೂರ್ಯಕುಮಾರ್​ ಯಾದವ್​

ವಿಧಾನಸಭೆಯಿಂದ ಹೊರಬಂದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ‘ಪ್ರಯಾಗ್​ರಾಜ್​ನಲ್ಲಿ ಕ್ರಿಮಿನಲ್​ಗಳು ಬಂದು ಹಾಗೆ ಕಚ್ಚಾ ಬಾಂಬ್​ ಎಸೆದಿದ್ದನ್ನು ನೋಡಿದಾಗಲೇ ಅರ್ಥವಾಗುತ್ತದೆ, ಈ ಸರ್ಕಾರದ ವೈಫಲ್ಯ ಏನು ಎಂಬುದು. ಹಾಡಹಗಲಲ್ಲೇ, ಸಾರ್ವಜನಿಕರ ಎದುರಲ್ಲೇ ಹೀಗೆ ಫೈರಿಂಗ್ ಮಾಡಲಾಗುತ್ತದೆ, ಬಾಂಬ್​ ಎಸೆಯಲಾಗುತ್ತದೆ ಅಂದರೆ, ಇದು ರಾಮರಾಜ್ಯ ಹೌದೋ? ಅಲ್ಲವೋ ಎಂದು ಎಂಥವರಿಗಾದರೂ ಗೊತ್ತಾಗುತ್ತದೆ. ಉತ್ತರಪ್ರದೇಶದಲ್ಲಿ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅದಕ್ಕೆ ಬಿಜೆಪಿ ಸರ್ಕಾರವೇ ಹೊಣೆ’ ಎಂದು ಹೇಳಿದರು.

Exit mobile version