Site icon Vistara News

ಪ್ರಧಾನಿ ಮೋದಿ 2002ರಿಂದ ಪ್ರತಿ ಚುನಾವಣೆಯಲ್ಲೂ ನಾಮಪತ್ರಕ್ಕೆ ಸಹಿ ಹಾಕಲು ಬಳಸುವ ಪೆನ್​ ಯಾರು ಕೊಟ್ಟಿದ್ದು ಗೊತ್ತಾ?

PM Modi visti to state tomorrow Here is the complete details of the program

ಅಹ್ಮದಾಬಾದ್​: ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯ ಪ್ರಮುಖ್​ ಆಗಿದ್ದ ಸ್ವಾಮಿ ಮಹಾರಾಜರ ಜನ್ಮಶತಾಬ್ದಿ ಮಹೋತ್ಸವ ಇತ್ತೀಚೆಗಷ್ಟೇ ಗುಜರಾತ್​​ನ ಅಹ್ಮದಾಬಾದ್​ನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದು ಪೆನ್ನಿನ ವಿಷಯ ತಿಳಿಸಿದ್ದಾರೆ. ತನ್ಮೂಲಕ ಸ್ವಾಮಿ ಮಹಾರಾಜರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ್ದಾರೆ.

‘ನಾನು 2002ರಲ್ಲಿ ಮೊದಲ ಬಾರಿಗೆ ರಾಜ್​ಕೋಟ್​​ನಿಂದ ಉಪ ಚುನಾವಣೆಗೆ ಸ್ಪರ್ಧಿಸಿದೆ. ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಸಮಯದಲ್ಲಿ ನನಗೆ ಎರಡು ಪೆನ್​​ಗಳು ಬಂದವು. ಅದರಲ್ಲಿ ಒಂದರ ಮೇಲೆ ಸ್ವಾಮಿ ಮಹಾರಾಜ್​ ಅವರ ಹೆಸರು ಇತ್ತು. ‘ಇದೇ ಪೆನ್​​ನಿಂದ ನಾಮಪತ್ರಕ್ಕೆ ಸಹಿ ಹಾಕುವಂತೆ ಸ್ವಾಮಿ ಮಹಾರಾಜ್​ ವಿನಂತಿಸಿದ್ದಾರೆ’ ಎಂದು ಬರೆಯಲಾಗಿತ್ತು. ನಾನು ಹಾಗೇ ಮಾಡಿದೆ. ಅಷ್ಟೇ ಅಲ್ಲ, ಪ್ರತಿ ವಿಧಾನಸಭೆ ಚುನಾವಣೆಯಲ್ಲೂ ನಾಮಪತ್ರ ಸಲ್ಲಿಸುವಾಗ ಇದೇ ಪೆನ್​​ನಿಂದ ಸಹಿ ಹಾಕುತ್ತಿದ್ದೆ. ಬಳಿಕ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿಯಿಂದ ಸ್ಪರ್ಧಿಸಿದಾಗಲೂ ನನಗೆ ಸ್ವಾಮಿ ಮಹಾರಾಜ್​ ಅವರಿಂದ ಪೆನ್​​ಗಳು ಉಡುಗೊರೆಯಾಗಿ ಬಂದಿವೆ. ಆ ಪೆನ್​​ಗಳೆಲ್ಲ ಬಿಜೆಪಿ ಪಕ್ಷದ ಬಣ್ಣದಲ್ಲೇ ಇರುತ್ತಿದ್ದವು. ಅವರು ಕೊಟ್ಟ ಪೆನ್​​ನಿಂದಲೇ ಈಗಲೂ ನನ್ನ ನಾಮಪತ್ರಗಳಿಗೆ ಸಹಿ ಮಾಡುತ್ತಿದ್ದೇನೆ. ಸ್ವಾಮಿ ಮಹಾರಾಜ್​ ಅವರು ನನ್ನನ್ನು ತಮ್ಮ ಪುತ್ರನಂತೆ ನಡೆಸಿಕೊಂಡರು’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಜೀವನ ಯಾವತ್ತೂ ಇಳಿಮುಖ ಆಗಲೇ ಇಲ್ಲ. ಪಕ್ಷಸಂಘಟನೆಯಿಂದ ಪ್ರಾರಂಭ ಮಾಡಿ, ಅಂದಿನ ರಾಜ್​ಕೋಟ್​​ನಿಂದ ಇಂದಿನ ವಾರಾಣಸಿಯವರೆಗೆ ಅವರು ಸತತವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ದೇಶದ ಪ್ರಧಾನಿಯೂ ಆಗಿದ್ದಾರೆ. ಅವರೀಗ ತಾವು ಚುನಾವಣೆಗಳಿಗೆ ನಾಮಪತ್ರ ಸಲ್ಲಿಸುವಾಗ ಯಾವ ಪೆನ್​ ಬಳಸುತ್ತಿದ್ದೆ ಎಂಬ ಗುಟ್ಟು ಹೇಳಿದ್ದಾರೆ. ಸ್ವಾಮಿ ಮಹಾರಾಜರು ಪೆನ್​ ಮೂಲಕ ಪ್ರತಿ ಚುನಾವಣೆಯಲ್ಲೂ ನನ್ನನ್ನು ಆಶೀರ್ವದಿಸಿದರು ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.

ಹಿಂದು ಸ್ವಾಮಿ ನಾರಾಯಣ ಸಮುದಾಯದ ಪ್ರಸಿದ್ಧ ಅಧ್ಯಾತ್ಮ ಸಂಸ್ಥೆಯಾದ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯ 5ನೇ ಅಧ್ಯಾತ್ಮ ಗುರುವಾಗಿದ್ದ ಪ್ರಮುಖ್ ಆಗಿದ್ದ ಸ್ವಾಮಿ ಮಹಾರಾಜ್​ ಅವರು 1950ರಿಂದ 2016ರವರೆಗೆ ಅಧ್ಯಕ್ಷರಾಗಿದ್ದರು. ಇವರ ಆಡಳಿತ ಅವಧಿಯಲ್ಲಿ ಅಟ್ಲಾಂಟಾ, ಲಾಸ್ ಏಂಜಲೀಸ್, ಲಂಡನ್, ಟೊರೊಂಟೊ, ಆಕ್ಲೆಂಡ್ ಮತ್ತು ಸಿಡ್ನಿಗಳಲ್ಲಿ ಈ ಸಂಸ್ಥೆಯಿಂದ ಅಕ್ಷರಧಾಮ ದೇವಾಲಯಗಳನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: Yuvajanotsava | ಯುವಜನೋತ್ಸವಕ್ಕೆ ಪ್ರಧಾನಿ ಮೋದಿಗೆ ಆಹ್ವಾನ: ಸಿಎಂ ಬೊಮ್ಮಾಯಿ

Exit mobile version