Site icon Vistara News

NCP Crisis: ಶಿವಸೇನೆ ಪರಿಸ್ಥಿತಿಯೇ ಬಂತು; ನಿಜವಾದ ಎನ್​ಸಿಪಿ ಯಾವುದು?-ನಾಳೆಯೇ ಪವರ್​ಫುಲ್​ ಸಭೆ

Ajit Pawar Sharad Pawar and Supriya Sule

ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ (Maharashtra Politics) ಮೈತ್ರಿ ಕಡಿದುಕೊಂಡು ಹೋಗಿ, ಕಾಂಗ್ರೆಸ್-ಎನ್​ಸಿಪಿಯೊಟ್ಟಿಗೆ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆಗೆ ಯಾವ ಪರಿಸ್ಥಿತಿ ಉಂಟಾಗಿದೆಯೋ, ಅದೇ ಪರಿಸ್ಥಿತಿಯನ್ನೀಗ ಅಲ್ಲಿನ ಇನ್ನೊಂದು ಪ್ರಮುಖ ಪಕ್ಷ ಎನ್​ಸಿಪಿ (NCP Crisis) ಅನುಭವಿಸುತ್ತಿದೆ. ಒಂದೂವರೆ ವರ್ಷದ ಹಿಂದೆ ಶಿವಸೇನೆಯಲ್ಲಿ ಉದ್ಧವ್​ ಠಾಕ್ರೆ ಬಣ, ಶಿಂಧೆ ಬಣ ಉಂಟಾಗಿತ್ತು. ಈ ಎರಡೂ ಬಣಗಳ ನಡುವಿನ ಕಾದಾಟ ಸುಪ್ರೀಂಕೋರ್ಟ್​ ಮೆಟ್ಟಿಲೇರಿ, ಬಳಿಕ ಶಿಂಧೆ ಬಣದಲ್ಲಿ ಜಾಸ್ತಿ ಶಿವಸೈನಿಕರು ಇರುವ ಕಾರಣಕ್ಕೆ ಅದೇ ಬಣವೇ ನಿಜವಾದ ಶಿವಸೇನೆ ಎಂಬ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿತ್ತು.

ಅಂಥದ್ದೇ ಸಂದಿಗ್ಧ ಈಗ ಎನ್​ಸಿಪಿಯಲ್ಲಿದೆ. ಎನ್​ಸಿಪಿ ಪ್ರಮುಖ ನಾಯಕ ಅಜಿತ್ ಪವಾರ್ ಈಗ ಪಕ್ಷವನ್ನು ಒಡೆದಿದ್ದಾರೆ. ತನಗೆ 40ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಹೇಳಿರುವ ಅವರು ಬಿಜೆಪಿ-ಶಿವಸೇನೆ (ಶಿಂಧೆ ಬಣ)ದ ಮೈತ್ರಿ ಸೇರಿಕೊಂಡು, ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನೂ ಸ್ವೀಕಾರ ಮಾಡಿದ್ದಾರೆ. ಇಲ್ಲೀಗ ಅಜಿತ್ ಪವಾರ್ ಬಣ ಮತ್ತು ಸಂಸ್ಥಾಪಕ ಮುಖ್ಯಸ್ಥ ಶರದ್ ಪವಾರ್​ ಬಣವೆಂಬ ಎರಡು ಗುಂಪು ಆಗಿದೆ. ಮತ್ತೀಗ ನಿಜವಾದ ಎನ್​ಸಿಪಿ ಯಾವುದು ಎಂಬ ಕಿತ್ತಾಟ ಶುರುವಾಗಿದೆ. ಈ ಮಧ್ಯೆ ಶರದ್ ಪವಾರ್ ಬಣ ಮತ್ತು ಅಜಿತ್ ಪವಾರ್ ಬಣಗಳೆರಡೂ ಜುಲೈ 5ರಂದು ಪ್ರಮುಖವಾದ ಸಭೆಯೊಂದನ್ನು ನಡೆಸಲಿವೆ. ಈ ಮೂಲಕ ನಿಜವಾದ ಎನ್​ಸಿಪಿ ಪಕ್ಷ ಎಂಬ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆ ನಡೆಸುವ ಬಗ್ಗೆ ಚರ್ಚಿಸಲಿದ್ದಾರೆ.

ಇದನ್ನೂ ಓದಿ: Maharastra Politics : ಅಜಿತ್‌ ಮಹಾ ಬಂಡಾಯ, ಶರದ್‌‌ ಪವಾರ್ ಈಗ ಪವರ್‌ಲೆಸ್?

ಈಗಾಗಲೇ ಎರಡೂ ಬಣಗಳಿಂದ ಪರಸ್ಪರ ಹಲವರು ರೆಬೆಲ್​ ಸದಸ್ಯರನ್ನು ಕಿತ್ತುಹಾಕಲಾಗಿದೆ. ತಮಗೇ ಸಂಪೂರ್ಣ ಅಧಿಕಾರ ಇರುವುದು ಎಂದು ಅಜಿತ್ ಪವಾರ್ ಮತ್ತು ಶರದ್ ಪವಾರ್ ಇಬ್ಬರೂ ಪ್ರತಿಪಾದಿಸುತ್ತಿದ್ದಾರೆ. ಅಂದಹಾಗೇ, ಬುಧವಾರ ಮಧ್ಯಾಹ್ನ 1 ಗಂಟೆಗೆ ಎನ್​ಸಿಪಿ ಶರದ್​ ಪವಾರ್ ಬಣದ ಸಭೆ ಮತ್ತು ಬೆಳಗ್ಗೆ 11ಗಂಟೆಗೆ ಅಜಿತ್ ಪವಾರ್ ಸಭೆ ನಡೆಯಲಿದೆ. ಸದ್ಯಕ್ಕಂತೂ ಎರಡೂ ಬಣಗಳು ತಮಗೇ ಸಂಪೂರ್ಣ ಬೆಂಬಲ ಇರುವುದು ಎಂದು ಹೇಳಿಕೊಳ್ಳುತ್ತಿವೆ. ಅಜಿತ್ ಪವಾರ್​ ಬಂಡಾಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ‘ಇಂಥ ಬಂಡಾಯಗಳು ಸಾಮಾನ್ಯ. ಆದರೆ ನಾನಿದಕ್ಕೆಲ್ಲ ಹೆದರುವುದಿಲ್ಲ. ಯಾರು ಎನ್​ಸಿಪಿಯನ್ನು ಒಡೆದಿದ್ದಾರೋ ಅವರಿಗೆ ಅವರ ನಿಜವಾದ ಜಾಗ ತೋರಿಸುತ್ತೇನೆ. ನಾನು ನನ್ನ ಪಕ್ಷವನ್ನು ಮತ್ತೆ ಕಟ್ಟಿ ತೋರಿಸುತ್ತೇನೆ’ ಎಂದಿದ್ದಾರೆ.

Exit mobile version