Site icon Vistara News

NCP Crisis: ಪವಾರ್​ vs ಪವಾರ್ ಸಭೆ ಇಂದು; ಎನ್​ಸಿಪಿ ಶಾಸಕ, ಸಂಸದರಿಗೆ ವಿಪ್​ ಜಾರಿ

Ajit Pawar And Sharad Pawar

ಮುಂಬಯಿ: ರಾಷ್ಟ್ರೀಯವಾದಿ ಕಾಂಗ್ರೆಸ್​ ಪಕ್ಷ (ಎನ್​​ಸಿಪಿ-NCP)ವೀಗ ಎರಡು ಭಾಗವಾಗಿದೆ. ಅಲ್ಲೀಗ ಎರಡು ಪವರ್​ (ಪವಾರ್​)ಫುಲ್​ ಬಣಗಳಾಗಿವೆ. ಒಂದು ಬಣಕ್ಕೆ ಶರದ್​ ಪವಾರ್ (Sharad Pawar) ಮುಖ್ಯಸ್ಥ, ಇನ್ನೊಂದು ಬಣಕ್ಕೆ ಅಜಿತ್ ಪವಾರ್​ ಚೀಫ್ (Ajit Pawar)​. ಈ ಎರಡೂ ಬಣಗಳಲ್ಲಿ ನಿಜವಾದ ಎನ್​ಸಿಪಿ ಯಾವುದು? ಎಂಬುದು ಪ್ರಶ್ನೆ. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಶಿಂಧೆ ಬಣದ ಮೈತ್ರಿ ಸರ್ಕಾರ ಸೇರಿ, ಉಪಮುಖ್ಯಮಂತ್ರಿಯಾದ ಅಜಿತ್ ಪವಾರ್​ ತನಗೆ ಎನ್​ಸಿಪಿಯ 40ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಪಕ್ಷವನ್ನು ಸಂಸ್ಥಾಪಿಸಿದ ಶರದ್ ಪವಾರ್​ ಸುಲಭಕ್ಕಂತೂ ತಮ್ಮ ಹೋರಾಟ ಬಿಡುವ ಲಕ್ಷಣ ಕಾಣಿಸುತ್ತಿಲ್ಲ. ಈ ಮಧ್ಯೆ ಇಂದು ಎರಡೂ ಬಣಗಳು ಪ್ರಮುಖ ಸಭೆ ನಡೆಸಲಿವೆ.

ಶರದ್​ ಪವಾರ್ ಬಣ ಮತ್ತು ಅಜಿತ್ ಪವಾರ್​ ಬಣಗಳು ಎರಡೂ ತಮ್ಮತಮ್ಮ ಗುಂಪಿಗೆ ಮುಖ್ಯ ಸಚೇತಕರನ್ನು ನೇಮಿಸಿಕೊಂಡಿದ್ದಾರ. ಹಾಗೇ, ಈ ಎರಡೂ ಸಭೆಗಳಲ್ಲಿ ಪಕ್ಷದ ಎಲ್ಲ ಶಾಸಕರು, ಸಂಸದರು, ಪದಾಧಿಕಾರಿಗಳು ಹಾಜರಿರಲೇಬೇಕು ಎಂದು ಎರಡೂ ಬಣಗಳಿಂದಲೂ ವಿಪ್​ ಜಾರಿ ಮಾಡಲಾಗಿದೆ. ಶರದ್ ಪವಾರ್​ ಬಣದ ಸಭೆ ದಕ್ಷಿಣ ಮುಂಬಯಿಯ ವೈ.ಬಿ.ಚವ್ಹಾಣ್​ ಸೆಂಟರ್​​ನಲ್ಲಿ ಮಧ್ಯಾಹ್ನ 1ಗಂಟೆಗೆ ನಡೆಯಲಿದೆ. ಹಾಗೇ, ಅಜಿತ್ ಪವಾರ್ ನೇತೃತ್ವದ ಸಭೆ ಬಾಂದ್ರಾ ಸಬ್​ಅರ್ಬನ್​​ನಲ್ಲಿರುವ ಮುಂಬಯಿ ಶೈಕ್ಷಣಿಕ ಸಂಸ್ಥೆ (MET)ಆವರಣದಲ್ಲಿ ಮಧ್ಯಾಹ್ನ 11ಗಂಟೆಗೆ ನಡೆಯಲಿದೆ. ಎರಡೂ ಸಭೆಗಳ ಸಮಯ ಬೇರೆ ಇದ್ದುದರಿಂದ ಎಲ್ಲ ಶಾಸಕರು, ಸಂಸದರು/ಪದಾಧಿಕಾರಿಗಳಿಗೆ ಹಾಜರಾಗಲು ಅನುಕೂಲಕರವಾಗಿಯೇ ಇದೆ.

ಇದನ್ನೂ ಓದಿ: NCP Crisis: ಶಿವಸೇನೆ ಪರಿಸ್ಥಿತಿಯೇ ಬಂತು; ನಿಜವಾದ ಎನ್​ಸಿಪಿ ಯಾವುದು?-ನಾಳೆಯೇ ಪವರ್​ಫುಲ್​ ಸಭೆ

ಶರದ್​ ಪವಾರ್ ಬಣ ಮತ್ತು ಅಜಿತ್ ಪವಾರ್ ಬಣಗಳೆರಡೂ ಎನ್​ಸಿಪಿ ಪಕ್ಷದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿವೆ. ನಮ್ಮ ಬಣವೇ ನಿಜವಾದ ಎನ್​ಸಿಪಿ ಎಂದು ಸಾಬೀತುಪಡಿಸುವ ಸವಾಲು ಅವರ ಮುಂದೆ ಇದೆ. ತಮಗೇ ಹೆಚ್ಚಿನ ಸದಸ್ಯರ ಬೆಂಬಲವಿದೆ ಎಂದು ಶರದ್​ ಮತ್ತು ಅಜಿತ್ ಇಬ್ಬರೂ ಹೇಳಿಕೊಳ್ಳುತ್ತಿದ್ದಾರೆ. ಇಂದಿನ ಎರಡೂ ಸಭೆಯಲ್ಲಿ ಎರಡೂ ಬಣಗಳು ತಮ್ಮೆಡೆಗೆ ಹೆಚ್ಚಿನ ಶಾಸಕರು/ಸಂಸದರನ್ನು ಸೆಳೆಯುವ ಪ್ರಯತ್ನವನ್ನು ಮಾಡಲಿವೆ. ಇದೀಗ ಪಕ್ಷದಿಂದ ಎದ್ದು ಹೋದ ಅಜಿತ್ ಪವಾರ್​ ಬಣ ಅನರ್ಹತೆಯಿಂದ ತಪ್ಪಿಸಿಕೊಳ್ಳಬೇಕು ಎಂದರೆ ಕನಿಷ್ಠ 36 ಶಾಸಕರ ಬೆಂಬಲವಾದರೂ ಬೇಕು. ಇಂದಿನ ಸಭೆಗೂ ಪೂರ್ವ ಅಜಿತ್ ಪವಾರ್ ಮತ್ತು ಶರದ್ ಪವಾರ್ ಇಬ್ಬರೂ ತಾವೇ ಸ್ವತಃ ಬಹುತೇಕ ಶಾಸಕರು, ಸಂಸದರು, ಪದಾಧಿಕಾರಿಗಳಿಗೆ ಫೋನ್ ಕರೆ ಮಾಡಿ ಮಾತನಾಡುತ್ತಿದ್ದಾರೆ.

Exit mobile version