Site icon Vistara News

ಒಡಿಶಾ ರೈಲು ಅಪಘಾತದ ಬಗ್ಗೆ ತುರ್ತು ಸೇವೆಗಳಿಗೆ ತಕ್ಷಣ ಮಾಹಿತಿ ನೀಡಿದ್ದು, ರಜಾದಲ್ಲಿದ್ದ ಎನ್​ಡಿಆರ್​​ಎಫ್ ಯೋಧ!

NDRF jawan on leave sent first alert to emergency services about Odisha Train Accident

#image_title

ಒಡಿಶಾದ ಬಾಲಾಸೋರ್​​ ಮೂರು ರೈಲುಗಳು ಅಪಘಾತಕ್ಕೀಡಾಗಿ (Odisha Train Accident), ಹಲವು ಬೋಗಿಗಳು ಕಳಚಿ ಬಿದ್ದು, ಪ್ರಯಾಣಿಕರೆಲ್ಲ ನರಳುತ್ತಿದ್ದಾಗ ಯಾರೇನು ಮಾಡಬೇಕು? ಯಾರಿಗೆ ಹೇಳಬೇಕು? ಎಂಬಿತ್ಯಾದಿ ಧಾವಂತ ಅಲ್ಲಿತ್ತು. ಕೂಗಾಟ-ನರಳಾಟ, ರೈಲಿನ ಅವಶೇಷಗಳಡಿ ಸಿಲುಕಿದವರ ಆಕ್ರಂದನದ ಸನ್ನಿವೇಶ ಸೃಷ್ಟಿಯಾಗಿತ್ತು. ಇದೆಲ್ಲದರ ಮಧ್ಯೆ ತುರ್ತು ಸೇವೆಗಳಿಗೆ ತಕ್ಷಣ ವಿಷಯ ಮುಟ್ಟಿಸಿ, ರೈಲು ದುರಂತದ ವಿಷಯ ತಿಳಿಸಿದ್ದು ಒಬ್ಬರು ಎನ್​ಡಿಆರ್​​ಎಫ್​​​​ (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ) ಯೋಧ.

ರೈಲು ದುರಂತದ ಬಗ್ಗೆ ರಕ್ಷಣಾ ಮತ್ತು ತುರ್ತು ಸೇವೆಗಳಿಗೆ ಮೊಟ್ಟಮೊದಲು ವಿಷಯ ಮುಟ್ಟಿಸಿ ಅಲರ್ಟ್​ ಮಾಡಿದ್ದು, ಎನ್​ಡಿಆರ್​ಎಫ್ ಯೋಧ​ ಎನ್​. ಕೆ.ವೆಂಕಟೇಶ್​. ರಜೆಯಲ್ಲಿದ್ದ ಇವರು ಅಪಘಾತಕ್ಕೀಡಾದ ಕೋರಮಂಡಲ ಎಕ್ಸ್​ಪ್ರೆಸ್​ ರೈಲಿನಲ್ಲಿಯೇ ಪ್ರಯಾಣ ಮಾಡುತ್ತಿದ್ದರು. ಅಪಘಾತ ನಡೆದ ಜಾಗದ ಲೈವ್​ ಲೊಕೇಶನ್​ ಕೂಡ ಇವರು ತುರ್ತು ಸೇವೆಗಳ ವಿಭಾಗಕ್ಕೆ ಕಳಿಸಿಕೊಟ್ಟಿದ್ದರು. ನಂತರ ಕ್ವಿಕ್​ ಆಗಿ ಅಲ್ಲಿಗೆ ಧಾವಿಸಿದ ರಕ್ಷಣಾ ಸಿಬ್ಬಂದಿಯೊಂದಿಗೆ ಸೇರಿ ತಾವೂ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಶುಕ್ರವಾರ ರಾತ್ರಿ ಬಾಲಾಸೋರ್​ ಬಳಿ ಬಹನಾಗಾ ಎಂಬಲ್ಲಿ ಮೂರು ರೈಲುಗಳ ಮಧ್ಯೆ ಭೀಕರ ಅಪಘಾತವಾಗಿ 288 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಅಂದು ಲೂಪ್​ ಹಳಿಯ ಮೇಲೆ ಸರಕು ರೈಲು ನಿಂತಿತ್ತು. ಅದೇ ಮಾರ್ಗವಾಗಿ ಸಾಗುತ್ತಿದ್ದ ಶಾಲಿಮಾರ್-ಚೆನ್ನೈ ಸೆಂಟ್ರಲ್​ ಕೋರಮಂಡಲ ಎಕ್ಸ್​​ಪ್ರೆಸ್​ ರೈಲು ತಪ್ಪಾದ ಮಾರ್ಗದಲ್ಲಿ ಸಂಚರಿಸಿ, ಆ ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆಯಿತು. ಇದರಿಂದಾಗಿ ಎರಡೂ ರೈಲುಗಳ ಬೋಗಿಗಳು ಕಳಚಿ, ಉರುಳಿ ಪಕ್ಕದ ಹಳಿಗೆ ಬಿದ್ದವು. ಅದೇ ಸಂದರ್ಭದಲ್ಲಿ ಆ ಹಳಿಯ ಮೇಲೆ ಬೆಂಗಳೂರು-ಹೌರಾ ಸೂಪರ್​ಪಾಸ್ಟ್​ ರೈಲು ವೇಗವಾಗಿ ಸಾಗುತ್ತಿತ್ತು. ಈಚೆ ಹಳಿಯಲ್ಲಿ ಅಪಘಾತಕ್ಕೀಡಾದ ರೈಲುಗಳ ಬೋಗಿಗಳು ಬೆಂಗಳೂರು-ಹೌರಾ ರೈಲಿಗೆ ಬಲವಾಗಿ ಡಿಕ್ಕಿ ಹೊಡದು, ಅದರ ಮೂರ್ನಾಲ್ಕು ಬೋಗಿಗಳೂ ಕಳಚಿ ಬಿದ್ದಿವೆ. ಒಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲೇ ಭಯಾನಕವಾದ ಅಪಘಾತ ಇದಾಗಿದೆ. 1100 ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Odisha Train Accident: ರೈಲ್ವೆ ಅಪಘಾತದ ಕಾರಣ ಮತ್ತು ಅದರ ಹಿಂದಿರುವ ವ್ಯಕ್ತಿಗಳು ಯಾರೆಂದು ಗೊತ್ತಾಯ್ತು, ಇನ್ನು ಕ್ರಮವಷ್ಟೇ ಬಾಕಿ!

ಎನ್​ಡಿಆರ್​ಎಫ್​ ಯೋಧ ಎನ್​.ಕೆ.ವೆಂಕಟೇಶ್ ಅವರು ಕರ್ತವ್ಯಕ್ಕೆ ರಜಾ ಹಾಕಿ, ಹೌರಾದಿಂದ ತಮಿಳುನಾಡಿಗೆ ಪ್ರಯಾಣ ಮಾಡುತ್ತಿದ್ದರು. ಇವರಿದ್ದ ಕೋಚ್​ ಬಿ-7ಆಗಿತ್ತು. ಇದೊಂದು ಎಸಿ ಕೋಚ್​ ಆಗಿದ್ದು, ಸೀಟ್​ ನಂಬರ್​ 58ರಲ್ಲಿ ಕುಳಿತಿದ್ದರು. ಅದೃಷ್ಟಕ್ಕೆ ಅಪಘಾತದಲ್ಲಿ ಇವರಿದ್ದ ಬೋಗಿ ಕಳಚಿ ಬಿದ್ದಿರಲಿಲ್ಲ. 39ವರ್ಷದ ಇವರು ಎನ್​ಡಿಆರ್​ಎಫ್​​ ಕೊಲ್ಕತ್ತ 2ನೇ ಬೆಟಾಲಿಯನ್​​ನಲ್ಲಿ ಕೆಲಸ ಮಾಡುತ್ತಿದ್ದಾರೆ. ರೈಲು ಅಪಘಾತವಾಗುತ್ತಿದ್ದಂತೆ ಅದೆಷ್ಟ ಕ್ವಿಕ್ ಆಗಿ ಬುದ್ಧಿ ಓಡಿಸಿದ್ದಾರೆಂದರೆ, ತಕ್ಷಣವೇ ಮೊಬೈಲ್​ನಿಂದ ಎನ್​ಡಿಆರ್​ಎಫ್​ಗೆ ಕರೆ ಮಾಡಿದ್ದಾರೆ. ಬಳಿಕ ಅದರ ಕಂಟ್ರೋಲ್​ ರೂಮ್​ಗೆ ಅಪಘಾತವಾದ ಸ್ಥಳದ ಫೋಟೋ ಕಳಿಸಿದ್ದಾರೆ. ಲೈವ್ ಲೊಕೇಶನ್ ಕೂಡ ಹಾಕಿದ್ದಾರೆ. ಇವರ ಮಾಹಿತಿ ಪಡೆಯುತ್ತಿದ್ದಂತೆ ಎನ್​ಡಿಆರ್​ಎಫ್​ನ ಮೊದಲ ತಂಡ ಕ್ಷಿಪ್ರವಾಗಿ ಓಡಿಬಂದಿದೆ. ಅಷ್ಟರಲ್ಲಿ ಸ್ಥಳೀಯರೂ ಅಲ್ಲಿಗೆ ಆಗಮಿಸಿ ತಮಗೆ ಎಷ್ಟಾಗತ್ತೋ ಅಷ್ಟು ಜನರನ್ನು ರಕ್ಷಿಸಿದ್ದಾರೆ.

Exit mobile version