Site icon Vistara News

ಕೇಂದ್ರ ಸಚಿವರ ಸೋದರಳಿಯ ಅನುಮಾನಾಸ್ಪದವಾಗಿ ಸಾವು; ಕೇಸ್​ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪೊಲೀಸ್​

Union Minister Nephew

ನವ ದೆಹಲಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸಹಾಯಕ ಸಚಿವ ಕೌಶಲ್​ ಕಿಶೋರ್​ ಅವರ ಸೋದರಳಿಯ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಲಖನೌದ ದುಬಗ್ಗದಲ್ಲಿರುವ ಬಿಗ್ಗಾರಿಯಾ ಎಂಬ ಏರಿಯಾದಲ್ಲಿರುವ ಅವರ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ಆದರೂ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಶುರುಮಾಡಿಕೊಂಡಿದ್ದಾರೆ.

ನಂದ ಕಿಶೋರ್​ ರಿಯಲ್​ ಎಸ್ಟೇಟ್​ ಉದ್ಯಮಿಯಾಗಿದ್ದು, ಆಸ್ತಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಲಾಗಿದೆ. ಇವರ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ದುಬಗ್ಗ ಪೊಲೀಸ್ ಅಧಿಕಾರಿ, ‘ನಂದ ಕಿಶೋರ್​ ನೇಣು ಹಾಕಿಕೊಂಡಿದ್ದಾರೆ ಎಂದು ಆತನ ಸಹೋದರ ನಮಗೆ ಮಾಹಿತಿ ನೀಡಿದ್ದರು. ಅವರು ಅಷ್ಟರಲ್ಲಿ ನಂದ ಕಿಶೋರ್​ರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣ ಹೋಗಿತ್ತು. ನಾವೀಗ ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

ಕೌಶಲ್​ ಕಿಶೋರ್​ ಅವರು ಉತ್ತರ ಪ್ರದೇಶದ ಮೋಹನ್​ಲಾಲ್​ ಗಂಜ್ ಕ್ಷೇತ್ರದ ಸಂಸದ. 2021ರ ಮಾರ್ಚ್​​ನಲ್ಲಿ ಇವರ ಸೊಸೆ ಅಂಕಿತಾ (ಮಗ ಆಯುಷ್​ ಪತ್ನಿ) ಆತ್ಮಹತ್ಯೆಗೆ ಯತ್ನಿಸಿದ್ದರು. ಕೌಟುಂಬಿಕ ಕಲಹದ ಕಾರಣಕ್ಕೆ ಈಕೆ ಕೌಶಲ್​ ಕಿಶೋರ್ ಮನೆಯ ಎದುರು ನಿಂತು, ತನ್ನ ಕೈ ನರ ಕತ್ತರಿಸಿಕೊಂಡು ಸಾಯಲು ಪ್ರಯತ್ನಿಸಿದ್ದರು. ಅದಕ್ಕೆ ಪ್ರತಿಯಾಗಿ ಆಯುಷ್​ ಒಂದು ವಿಡಿಯೊ ಬಿಡುಗಡೆ ಮಾಡಿ, ತನ್ನದೇನೂ ತಪ್ಪಿಲ್ಲ ಎಂಬುದನ್ನು ಹೇಳಿದ್ದರು. ಈ ವಿಚಾರವಾಗಿ ಕೊನೆಗೂ ಕೌಶಲ್​ ಕಿಶೋರ್ ಏನೂ ಮಾತನಾಡಿರಲಿಲ್ಲ.

ಇನ್ನು ಇತ್ತೀಚೆಗೆ ಕೌಶಲ್​ ಕಿಶೋರ್​ ಶ್ರದ್ಧಾ ವಾಳ್ಕರ್ ಹತ್ಯೆಯ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದರು. ಲಿವ್​ ಇನ್​ ರಿಲೇಶನ್​ಶಿಪ್​ಗಳು ಅಪರಾಧಗಳಿಗೆ ಕಾರಣವಾಗುತ್ತವೆ. ಅದು ಗೊತ್ತಿದ್ದೂ ಹೋಗಿ ಹುಡುಗಿಯರು ಅದರಲ್ಲಿ ಸಿಲುಕಿಕೊಳ್ಳುತ್ತಾರೆ. ಅದರಲ್ಲೂ ಇಂಥದ್ದರಲ್ಲೆಲ್ಲ ಸಿಲುಕುತ್ತಿರುವುದು ಶಿಕ್ಷಣವಂತ, ಸುಶಿಕ್ಷಿತ ಹುಡುಗಿಯರೇ ಆಗಿದ್ದಾರೆ ಎಂದು ಹೇಳಿದ್ದರು. ಅವರ ಈ ಮಾತುಗಳು ಟೀಕೆಗೆ ಗುರಿಯಾಗಿದ್ದವು.

ಇದನ್ನೂ ಓದಿ: Delhi Murder | ಶಿಕ್ಷಣವಂತ ಹೆಣ್ಣುಮಕ್ಕಳಿಂದಲೇ ಇಂಥ ಅಪರಾಧ ಹೆಚ್ಚಳ; ಶ್ರದ್ಧಾ ಹತ್ಯೆ ಬಳಿಕ ಕೇಂದ್ರ ಸಚಿವರಿಂದ ವಿವಾದಾತ್ಮಕ ಹೇಳಿಕೆ

Exit mobile version