Site icon Vistara News

ಕಾರಾಗೃಹದ ಮೇಲೆ ದಾಳಿ ಮಾಡಿದ್ದ ಪೊಲೀಸ್​ ವೇಷಧಾರಿ ತಲೆಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ ಎನ್​ಐಎ

NIA Announces Rs 10 Lakh Reward On Khalistani Terrorist Kashmir Singh

#image_title

ಖಲಿಸ್ತಾನಿ ಪ್ರತ್ಯೇಕತಾವಾದಿ ಕಾಶ್ಮೀರ್​ ಸಿಂಗ್ (Khalistani Terrorist Kashmir Singh)​ ಗಲ್ವಾಡ್ಡಿ ಅಲಿಯಾಸ್​ ಬಲ್ಬೀರ್ ಸಿಂಗ್​ನ ಸುಳಿವು ಕೊಟ್ಟವರಿಗೆ, ಹಿಡಿಯಲು ಸಹಾಯ ಮಾಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಘೋಷಣೆ ಮಾಡಿದೆ. ದೇಶದ ಅನೇಕ ಭಾಗಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಉತ್ತೇಜಿಸಿದ ಆರೋಪದಡಿ ಕಾಶ್ಮೀರ್​ ಸಿಂಗ್​ ಎನ್​ಐಎ (National Investigation Agency) ಅಧಿಕಾರಿಗಳಿಗೆ ಬೇಕಾದವನು ಆಗಿದ್ದಾನೆ. ಈತನ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ತಡೆ ಕಾಯ್ದೆ ಸೇರಿ, ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಎನ್​ಐಎ ‘ಖಲಿಸ್ತಾನಿ ಉಗ್ರ ಕಾಶ್ಮೀರ್ ಸಿಂಗ್​ ತಲೆಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಈತನ ಬಗ್ಗೆ ಯಾರಿಗಾದರೂ ಮಾಹಿತಿ ಗೊತ್ತಿದ್ದಲ್ಲಿ, ಸುಳಿವು ಸಿಕ್ಕಲ್ಲಿ ನಮಗೆ ತಿಳಿಸಿ. ಯಾರಾದರೂ ಕೊಟ್ಟ ಮಾಹಿತಿಯಿಂದ ಅವನ ಬಂಧನಕ್ಕೆ ಸಹಾಯವಾಗಿದ್ದೇ ಆದರೆ, ಅಂಥವರಿಗೆ 10 ಲಕ್ಷ ರೂಪಾಯಿ ಕೊಡಲಾಗುವುದು ಎಂದು ಎನ್​ಐಎ ತಿಳಿಸಿದೆ. ಹಾಗೇ, ಸುಳಿವು/ಮಾಹಿತಿ ಕೊಟ್ಟವರ ಹೆಸರು/ಗುರುತನ್ನು ಗೌಪ್ಯವಾಗಿ ಇಡಲಾಗುವುದು ಎಂದೂ ಹೇಳಿದೆ.

ಇದನ್ನೂ ಓದಿ: ಖಲಿಸ್ತಾನಿಗಳು ತ್ರಿವರ್ಣ ಧ್ವಜ ತೆರವು ಮಾಡಿದ್ದ ಪ್ರಕರಣ; ತನಿಖೆಗಾಗಿ ಲಂಡನ್​ಗೆ ಹೊರಟ ಎನ್​ಐಎ ಅಧಿಕಾರಿಗಳು

ಈ ಕಾಶ್ಮೀರ್​ ಸಿಂಗ್ ಹಲವು ಕೇಸ್​ಗಳಲ್ಲಿ ಬೇಕಾದವನಾಗಿದ್ದಾನೆ. 2013ರಲ್ಲಿ ಗುರುದಾಸ್​ಪುರದಲ್ಲಿ ಹಿಂದು ಮುಖಂಡನೊಬ್ಬನ ಮೇಲೆ ದಾಳಿ ಮಾಡಿದ್ದ. ಅದಕ್ಕಿಂತಲೂ ಮುಖ್ಯವಾಗಿ, 2016ರಲ್ಲಿ, ಇನ್ನುಳಿದ 20 ಖಲಿಸ್ತಾನಿ ಕ್ರಿಮಿನಲ್​​ಗಳ ಜತೆ ಸೇರಿ ಪಂಜಾಬ್​ನ ನಭಾ ಜೈಲಿನ ಮೇಲೆ ದಾಳಿ ಮಾಡಿದ್ದ. ಆಗ ಇವರೆಲ್ಲ ಪೊಲೀಸ್​ ಡ್ರೆಸ್​ ಧರಿಸಿ ಜೈಲಿನ ಮೇಲೆ ಅಟ್ಯಾಕ್ ಮಾಡಿದ್ದರು. ಈ ಮೂಲಕ ಹಲವು ಖಲಿಸ್ತಾನಿಗಳು ಜೈಲಿಂದ ತಪ್ಪಿಸಿಕೊಂಡು ಹೋಗಲು ಕಾರಣರಾಗಿದ್ದರು. ಮೂಲತಃ ಲುಧಿಯಾನಾದವನಾದ ಇವನು ಹಲವು ವರ್ಷಗಳಿಂದಲೂ ಪೊಲೀಸರ ಕಣ್ತಪ್ಪಿಸಿ ಓಡಾಡಿಕೊಂಡಿದ್ದಾನೆ. ಇತ್ತೀಚೆಗೆ ಅಮೃತ್​ಪಾಲ್ ಸಿಂಗ್ ಬಂಧನದ ಬೆನ್ನಲ್ಲೇ ತನಿಖಾ ಏಜೆನ್ಸಿಗಳು ಖಲಿಸ್ತಾನಿಗಳ ವಿರುದ್ಧ ತೀಕ್ಷ್ಣ ಕಾರ್ಯಾಚರಣೆ ನಡೆಸುತ್ತಿವೆ. ಖಲಿಸ್ತಾನಿ ಪ್ರಮುಖ ನಾಯಕರ ಬಂಧನಕ್ಕೆ ಬಲೆ ಬೀಸಿದ್ದಾರೆ. ಹಾಗೇ, ಈಗ ಎನ್​​ಐಎಯ ದೆಹಲಿ ಪ್ರಧಾನ ಕಚೇರಿ ಮತ್ತು ಚಂಡಿಗಢ ಶಾಖೆಯ ವಾಟ್ಸ್​ಆ್ಯಪ್​, ಟೆಲಿಗ್ರಾಂ ನಂಬರ್​ಗಳನ್ನು, ಇಮೇಲ್​ ವಿಳಾಸಗಳನ್ನೂ ಕೊಟ್ಟಿದ್ದಾರೆ.

Exit mobile version