Site icon Vistara News

Bihar Politics | ಸಿಎಂ ನಿತೀಶ್​ ಕುಮಾರ್​ ಬಹುಮತ ಸಾಬೀತು ಆಗಸ್ಟ್​ 24ಕ್ಕೆ; ಯಾಕಿಷ್ಟು ವಿಳಂಬ?

Nitish Kumar

ಪಟನಾ: ಬಿಹಾರದಲ್ಲಿ ನೂತನವಾಗಿ ಮಹಾ ಘಟ್​ ಬಂಧನ್​ ರಚಿಸಿ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ನಿತೀಶ್​ ಕುಮಾರ್​ ಆಗಸ್ಟ್​ 24ರಂದು ಬಹುಮತ ಸಾಬೀತುಪಡಿಸಬೇಕಾಗಿದೆ. ಬಿಜೆಪಿ ಮೈತ್ರಿಯಿಂದ ಹೊರಬಿದ್ದು, ಆರ್​ಜೆಡಿ-ಕಾಂಗ್ರೆಸ್​​ನೊಟ್ಟಿಗೆ ಸೇರಿದ್ದ ನಿತೀಶ್​ ಕುಮಾರ್​ ತಮಗೆ 164 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಈ ಸರ್ಕಾರದ ಮೊದಲ ವಿಧಾನಸಭಾ ಅಧಿವೇಶನ ಆಗಸ್ಟ್​ 24ರಿಂದ ಪ್ರಾರಂಭವಾಗಲಿದ್ದು, ಅಂದು ನಿತೀಶ್​ ಕುಮಾರ್ ಬಹುಮತ ಸಾಬೀತುಪಡಿಸಬೇಕು.

ಈ ಮಧ್ಯೆ ಬಿಹಾರ ವಿಧಾನಸಭೆ ಸ್ಪೀಕರ್ ಸ್ಥಾನದಿಂದ ಕೆಳಗೆ ಇಳಿಯಲು ನಿರಾಕರಿಸಿದ ವಿಜಯ್​ ಕುಮಾರ್ ಸಿನ್ಹಾ ವಿರುದ್ಧ ಈಗಾಗಲೇ 55 ಶಾಸಕರು ಅವಿಶ್ವಾಸ ಗೊತ್ತುವಳಿ ಮಂಡಿಸಿ, ಸಹಿ ಹಾಕಿದ ಪತ್ರವನ್ನು ವಿಧಾನಸಭೆ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. ಹೀಗೆ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಎರಡು ವಾರಗಳ ಬಳಿಕವೇ ಅದನ್ನು ಸದನದಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕು ಎಂಬ ನಿಯಮವಿದೆ. ಆಗಸ್ಟ್​ 24ಕ್ಕೆ ಈ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿ 2 ವಾರ ಕಳೆಯುತ್ತದೆ ಮತ್ತು ಅಂದು ಸ್ಪೀಕರ್​ ಕೂಡ ಬಹುಮತ ಸಾಬೀತುಪಡಿಸಬೇಕಾಗುತ್ತದೆ. ಅದಾಗದೆ ಇದ್ದರೆ, ಮೊದಲು ಅವರನ್ನು ಸ್ಪೀಕರ್​ ಹುದ್ದೆಯಿಂದ ಕೆಳಗಿಳಿಸಿ, ಬೇರೊಬ್ಬ ಸ್ಪೀಕರ್​​ರನ್ನು ನೇಮಕ ಮಾಡಲಾಗುತ್ತದೆ. ನಂತರ ಮಹಾ ಘಟ್​ ಬಂಧನ್​ ಸರ್ಕಾರ ಬಹುಮತ ಸಾಬೀತು ಪಡಿಸುತ್ತದೆ. ಈ ಎಲ್ಲ ಪ್ರಕ್ರಿಯೆಗಳ ಕಾರಣಕ್ಕೆ ಬಹುಮತ ಸಾಬೀತು ವಿಳಂಬವಾಗಲಿದೆ.

ಬಿಹಾರ 243 ಸದಸ್ಯ ಬಲದ ಸಾಮರ್ಥ್ಯ ಇರುವ ವಿಧಾನಸಭೆ. ಯಾವುದೇ ಪಕ್ಷ ಸರ್ಕಾರ ರಚನೆ ಮಾಡಬೇಕು ಎಂದರೆ 122 ಶಾಸಕ ಬಲ ಬೇಕು. ಇದೀಗ ಜೆಡಿಯು-ಆರ್​ಜೆಡಿ-ಕಾಂಗ್ರೆಸ್​ ಮೈತ್ರಿಯ ಮಹಾ ಘಟ್​ ಬಂಧನಕ್ಕೆ 163 ಶಾಸಕರ ಬಲ ಇದೆ ಎಂದೇ ಹೇಳಲಾಗಿದೆ. ಆಗಸ್ಟ್​ 9ರಂದು ಬಿಜೆಪಿ ಜತೆ ಮೈತ್ರಿಯನ್ನು ಅಧಿಕೃತವಾಗಿ ಮುರಿದುಕೊಂಡ ನಿತೀಶ್​ ಕುಮಾರ್​, ಆಗಸ್ಟ್​ 10ರಂದು ಆರ್​ಜೆಡಿ ಮತ್ತು ಕಾಂಗ್ರೆಸ್ ಜತೆಗೆ ಸೇರಿ ಸರ್ಕಾರ ರಚಿಸಿದ್ದಾರೆ. ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆಯೂ ಆಗಬೇಕಿದೆ.

ಇದನ್ನೂ ಓದಿ: ನಿರ್ಜನ ಪ್ರದೇಶದಲ್ಲಿ Mobile ಲೂಟಿ ಮಾಡುತ್ತಿದ್ದ ಗ್ಯಾಂಗ್‌ ಅರೆಸ್ಟ್‌, 78 ಲಕ್ಷ ಮೌಲ್ಯದ 515 ಮೊಬೈಲ್‌ಗಳು ವಶಕ್ಕೆ

Exit mobile version