Site icon Vistara News

Noida Politician Case | ಮಹಿಳೆಯನ್ನು ನಿಂದಿಸಿ ಪರಾರಿಯಾಗಿದ್ದ ಬಿಜೆಪಿ ಮುಖಂಡ ​ತ್ಯಾಗಿ ಅರೆಸ್ಟ್​

Shrikant Tyagi

ನೊಯ್ಡಾ: ಮಹಿಳೆಯನ್ನು ನಿಂದಿಸಿ, ಹಲ್ಲೆ ನಡೆಸಿದ ಆರೋಪ (Noida Politician Case) ಹೊತ್ತು ಮೂರು ದಿನಗಳ ಹಿಂದೆ ಉತ್ತರ ಪ್ರದೇಶದಿಂದ ಪರಾರಿಯಾಗಿದ್ದ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಮೀರತ್​ನಲ್ಲಿ ಇಂದು ಬಂಧಿತರಾಗಿದ್ದಾರೆ. ಇವರು ತಮ್ಮನ್ನು ತಾವು ಬಿಜೆಪಿಯ ಕಿಸಾನ್​ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಂಬುದಾಗಿ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್​​ಗಳಲ್ಲಿ ಪರಿಚಯ ಬರೆದುಕೊಂಡಿದ್ದಾರೆ. ನೊಯ್ಡಾದ 93 ಬಿನಲ್ಲಿರುವ ಗ್ರ್ಯಾಂಡ್ ಒಮ್ಯಾಕ್ಸ್​ ಹೌಸಿಂಗ್ ಸೊಸೈಟಿ ಬಳಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ, ಆಕೆಯನ್ನು ನಿಂದಿಸಿದ ಆರೋಪದಡಿ ಇವರ ವಿರುದ್ಧ ಕೇಸ್​ ದಾಖಲಾಗಿದೆ. ಈ ವಿಡಿಯೋ ಕೂಡ ಎಲ್ಲ ಕಡೆ ವೈರಲ್ ಆಗಿತ್ತು. ಇಂದು ಶ್ರೀಕಾಂತ್ ತ್ಯಾಗಿ ಜತೆ ಇನ್ನೂ ಮೂವರು ಅರೆಸ್ಟ್ ಆಗಿದ್ದಾರೆ.

ಇಂದು ಮುಂಜಾನೆ ಶ್ರೀಕಾಂತ್​ ತ್ಯಾಗಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು, ಕರೆದುಕೊಂಡು ಹೋಗಿದ್ದರು. ಶ್ರೀಕಾಂತ್​ ತ್ಯಾಗಿ ನಾಪತ್ತೆಯಾಗಿದ್ದರೂ ತನ್ನ ಪತ್ನಿ ಮತ್ತು ವಕೀಲರೊಂದಿಗೆ ಸಂಪರ್ಕ ಸಾಧಿಸಲು ಸದಾ ಪ್ರಯತ್ನಿಸುತ್ತಲೇ ಇದ್ದ. ಈ ಬಗ್ಗೆ ಖಚಿತ ಮಾಹಿತಿ ಇದ್ದುದರಿಂದಲೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದರು. ಅದಕ್ಕೂ ಮೊದಲು ನೊಯ್ಡಾ ಪೊಲೀಸರು ಶುಕ್ರವಾರ ತ್ಯಾಗಿ ಪತ್ನಿಯನ್ನು ಸುಮಾರು 24 ತಾಸುಗಳ ಕಾಲ ವಿಚಾರಣೆ ನಡೆಸಿದ್ದರು. ಆತನ ಇನ್ನೊಬ್ಬ ಸಂಬಂಧಿಯನ್ನೂ ಪೊಲೀಸರು ಕರೆದುಕೊಂಡುಹೋಗಿದ್ದರು.

ಗ್ರ್ಯಾಂಡ್ ಒಮ್ಯಾಕ್ಸ್​ ಹೌಸಿಂಗ್ ಸೊಸೈಟಿಗೆ ಸೇರಿದ ಪಾರ್ಕನ್ನು ಶ್ರೀಕಾಂತ್​ ತ್ಯಾಗಿ ಅಕ್ರಮವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಹಿಂದಿನಿಂದಲೂ ಇದೆ. ಈ ಮಧ್ಯೆ ಅವರು ಈ ಪಾರ್ಕ್​​ನಲ್ಲಿ ಸಸಿಗಳನ್ನು ನೆಡಲು ಮುಂದಾಗಿದ್ದರು. ಹೀಗೆ ಮಾಡಿದರೆ ಇಲ್ಲಿ ಕಟ್ಟಡದಲ್ಲಿರುವ ಜನರಿಗೆ ತೊಂದರೆ ಆಗುತ್ತದೆ ಎಂದು ಮಹಿಳೆ ವಿರೋಧಿಸಿದ್ದರು. ಹಾಗಾಗಿ ಶ್ರೀಕಾಂತ್​ ತ್ಯಾಗಿ ಆಕೆಯನ್ನು ನಿಂದಿಸಿ, ತಳ್ಳಿದ್ದಾರೆ. ಈ ಬಗ್ಗೆ ಮಹಿಳೆಯೇ ಹೋಗಿ ಡಿಜಿಪಿಗೆ ದೂರು ಕೊಟ್ಟಿದ್ದರು. ಆದರೆ ದೂರು ದಾಖಲಾಗುತ್ತಿದ್ದಂತೆ ಶ್ರೀಕಾಂತ್ ತ್ಯಾಗಿ ಪರಾರಿಯಾಗಿದ್ದರು. ಅವರ ಸುಳಿವುಕೊಟ್ಟವರಿಗೆ 25 ಸಾವಿರ ಬಹುಮಾನ ಕೊಡುವುದಾಗಿ ಉತ್ತರ ಪ್ರದೇಶ ಪೊಲೀಸರು ಘೋಷಿಸಿದ್ದರು.

ಇದನ್ನೂ ಓದಿ:Shreekant Tyagi | ಇನ್ನೂ ಬಾರದ ತ್ಯಾಗಿ; ಆತನ ಪತ್ನಿಯನ್ನು ವಶಕ್ಕೆ ಪಡೆದ ಉತ್ತರ ಪ್ರದೇಶ ಪೊಲೀಸ್​

Exit mobile version