Site icon Vistara News

ಸುಪ್ರೀಂಕೋರ್ಟ್​ ಮುಂದಿನ ಮುಖ್ಯ ನ್ಯಾಯಮೂರ್ತಿ ಉದಯ್ ಯು ಲಲಿತ್; ಸಿಜೆಐ ರಮಣ ಶಿಫಾರಸು

UU Lalit Next CJI

ನವ ದೆಹಲಿ: ಸುಪ್ರೀಂಕೋರ್ಟ್​​ನ ಈಗಿನ ಮುಖ್ಯ ನ್ಯಾಯಮೂರ್ತಿ (CJI) ಎನ್​.ವಿ.ರಮಣ ಅಧಿಕಾರ ಅವಧಿ ಆಗಸ್ಟ್​ 26ರಕ್ಕೆ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ, ಅವರು ತಮ್ಮ ಉತ್ತರಾಧಿಕಾರಿ ಹೆಸರನ್ನು ಶಿಫಾರಸು ಮಾಡಿದ್ದಾರೆ. ಸಿಜೆಐ ನಿವೃತ್ತರಾಗುವಾಗ ಮುಂದಿನ ಸಿಜೆಐ ಹೆಸರನ್ನು ಶಿಫಾರಸು ಮಾಡುವುದು ನಿಯಮ. ಅದರಂತೆ ಈಗ ಎನ್​. ವಿ.ರಮಣ ಅವರು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸ್ಥಾನಕ್ಕೆ ಹಿರಿಯ ನ್ಯಾಯಮೂರ್ತಿ ಉದಯ್​ ಉಮೇಶ್​ ಲಲಿತ್​ ಹೆಸರನ್ನು ಸೂಚಿಸಿದ್ದಾರೆ. ಇವರ ಹೆಸರನ್ನು ಬರೆದು, ತಮ್ಮ ಸಹಿ ಹಾಕಿ ಮುಚ್ಚಿದ ಲಕೋಟೆಯಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅದರಂತೆ ಯು.ಯು. ಲಲಿತ್​ ಅವರು ಆಗಸ್ಟ್​ 27ರಂದು, ಸುಪ್ರೀಂಕೋರ್ಟ್​ನ 49ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಸುಪ್ರೀಂಕೋರ್ಟ್​​ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆ ಭರ್ತಿ, ಹೈಕೋರ್ಟ್​ ಜಡ್ಜ್​ಗಳ ನೇಮಕಾತಿ ಮತ್ತು ವರ್ಗಾವಣೆಗೆ ಸಂಬಂಧಪಟ್ಟಂತೆ ಆಗಸ್ಟ್​ 2ರಂದು ಸುಪ್ರೀಂಕೋರ್ಟ್ ಕೊಲಿಜಿಯಂ ಸಭೆ ನಡೆದಿತ್ತು. ಸುಮಾರು 75 ನಿಮಿಷ ನಡೆದಿದ್ದ ಈ ಸಭೆಯಲ್ಲಿ ಅಂತಿಮ ನಿರ್ಣಯ ಯಾವುದೂ ಹೊರಬಿದ್ದಿರಲಿಲ್ಲ. ಇದರ ಬೆನ್ನಲ್ಲೇ ಕೇಂದ್ರ ಕಾನೂನು ಸಚಿವ ಕಿರಣ್​ ರಿಜಿಜು ಅವರು ಸಿಜೆಐ ಎನ್​ ವಿ ರಮಣರಿಗೆ ಆಗಸ್ಟ್​ 3ರಂದು ಪತ್ರ ಬರೆದು, ‘ನಿಮ್ಮ ಉತ್ತರಾಧಿಕಾರಿ ಹೆಸರನ್ನು ಶೀಘ್ರವೇ ಶಿಫಾರಸು ಮಾಡಿ’ ಎಂದು ಹೇಳಿದ್ದರು.

ಸದ್ಯ ಸುಪ್ರೀಂಕೋರ್ಟ್​​ನಲ್ಲಿ ಸಿಜೆಐ ಎನ್​.ವಿ.ರಮಣರನ್ನು ಬಿಟ್ಟರೆ ಎರಡನೇ ಹಿರಿಯ ನ್ಯಾಯಮೂರ್ತಿ ಉದಯ್​ ಉಮೇಶ್​ ಲಲಿತ್ . ಇವರು ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭ ಮಾಡಿದ್ದು 1983ರಲ್ಲಿ. 1985ರವರೆಗೂ ಬಾಂಬೆ ಹೈಕೋರ್ಟ್​​ನಲ್ಲಿ ಕಾನೂನು ಅಭ್ಯಾಸ ಮಾಡಿದರು. ಅದಾಗಿ ಒಂದು ವರ್ಷದಲ್ಲಿ 1986ರಿಂದ ದೆಹಲಿ ಕೋರ್ಟ್​​ನಲ್ಲಿ ಪ್ರ್ಯಾಕ್ಟೀಸ್​ ಪ್ರಾರಂಭಿಸಿದರು. 2004ರಲ್ಲಿ ಸುಪ್ರೀಂಕೋರ್ಟ್​ನಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ಹಲವು ಗಣ್ಯರ, ಪ್ರಮುಖ ಸಂಸ್ಥೆಗಳ ಕಾನೂನು ಸಲಹೆಗಾರರಾಗಿಯೂ ಜವಾಬ್ದಾರಿ ನಿಭಾಯಿಸಿದ್ದಾರೆ. ಸುಪ್ರೀಂಕೋರ್ಟ್​ನ ಕಾನೂನು ಸೇವಾ ಸಮಿತಿಗೆ ಎರಡು ಅವಧಿಗೆ ಸದಸ್ಯರಾಗಿದ್ದರು. ಅಂದಹಾಗೇ, ಇವರು ಸುಪ್ರೀಂಕೋರ್ಟ್​​ ಮುಖ್ಯ ನ್ಯಾಯಮೂರ್ತಿಯಾಗಿ ಮೂರು ತಿಂಗಳ ಕಾಲವಷ್ಟೇ ಕಾರ್ಯನಿರ್ವಹಿಸಲಿದ್ದಾರೆ. 2022ರ ನವೆಂಬರ್​ 8ರಂದು ನಿವೃತ್ತಿಯಾಗಲಿದ್ದಾರೆ.

ಇದನ್ನೂ ಓದಿ: ಉತ್ತರಾಧಿಕಾರಿಯನ್ನು ಶಿಫಾರಸು ಮಾಡಿ ಎಂದು ಸಿಜೆಐ ರಮಣಗೆ ಪತ್ರ ಬರೆದ ಕೇಂದ್ರ ಕಾನೂನು ಸಚಿವ

Exit mobile version