Site icon Vistara News

NITI Aayog Meet | ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ; ನಿತೀಶ್​ ಕುಮಾರ್​, ಬೊಮ್ಮಾಯಿ ಗೈರು

Niti Ayoga

ನವ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನೀತಿ ಆಯೋಗದ ಆಡಳಿತ ಮಂಡಳಿಯ ಏಳನೇ ಸಭೆ (NITI Aayog Meet) ನಡೆಯುತ್ತಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಮತ್ತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಗೆ ಗೈರಾಗಿದ್ದಾರೆ. ಕೊವಿಡ್​ 19 ಕಾರಣದಿಂದ 2019ರಿಂದ ಇಲ್ಲಿಯವರೆಗೆ ನೀತಿ ಆಯೋಗದ ಸಭೆಗಳು ವರ್ಚ್ಯುವಲ್​ ಆಗಿಯೇ ನಡೆಯುತ್ತಿದ್ದವು. ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭೌತಿಕವಾಗಿ ಸಭೆ ನಡೆಯುತ್ತಿದ್ದು, ಸಂಜೆ 4ಗಂಟೆಗೆ ಮುಕ್ತಾಯಗೊಳ್ಳಲಿದೆ.

ಕೇಂದ್ರ ಸರ್ಕಾರ ತೆಲಂಗಾಣದ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಹಾಗಾಗಿ ಸಭೆಗೆ ಹಾಜರಾಗುವುದಿಲ್ಲ ಎಂದು ಕೆ.ಚಂದ್ರಶೇಖರ್​ ರಾವ್​ ಹೇಳಿದ್ದಾರೆ. ಹಾಗೇ, ನಿತೀಶ್​ ಕುಮಾರ್​ ಈಗಷ್ಟೇ ಕೊರೊನಾದಿಂದ ಚೇತರಿಸಿಕೊಂಡಿರುವ ಕಾರಣ ಸಭೆಗೆ ಹಾಜರಾಗಲಿಲ್ಲ. ಇನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಆಗಸ್ಟ್​ 6ರಂದು ಕೊವಿಡ್​ 19 ದೃಢಪಟ್ಟಿದೆ. ಇನ್ನುಳಿದಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಪಂಜಾಬ್​ ಸಿಎಂ ಭಗವಂತ್ ಮಾನ್​,  ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​, ಛತ್ತೀಸ್​ಗಢ್​ ಸಿಎಂ ಭೂಪೇಶ್​ ಬಾಘೇಲ್​ , ಆಂಧ್ರಪ್ರದೇಶ ಸಿಎಂ ಜಗನ್​ ಮೋಹನ್​ ರೆಡ್ಡಿ ಸೇರಿ, ಬಹುತೇಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಪಾಲ್ಗೊಂಡಿದ್ದಾರೆ. ವಿವಿಧ ಕೇಂದ್ರ ಸಚಿವರೂ ಇದ್ದಾರೆ.

ಎಣ್ಣೆಕಾಳುಗಳು, ಕಾಳು-ದ್ವಿದಳಧಾನ್ಯಗಳ ಬೆಳೆಗಳಲ್ಲಿ ಸ್ವಾವಲಂಬನೆ ಸಾಧಿಸುವುದು, ಕೃಷಿ ಕ್ಷೇತ್ರ ಅಭಿವೃದ್ಧಿ, ಬೆಳೆ ವೈವಿಧ್ಯೀಕರಣ ಸಾಧಿಸುವುದು ಪ್ರಸಕ್ತ ಬಾರಿಯ ಸಭೆಯ ಅಜೆಂಡಾ ಆಗಿದೆ. ನೀತಿ ಆಯೋಗದ ಆಡಳಿತ ಮಂಡಳಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್​ ಗವರ್ನರ್​ಗಳು ಮತ್ತು ಹಲವು ಸಚಿವರನ್ನು ಒಳಗೊಂಡಿದೆ. ರಾಜ್ಯಗಳು ಹಾಗೂ ಕೇಂದ್ರದ ನಡುವಿನ ಸಹಯೋಗಕ್ಕೆ ಈ ಬಾರಿಯ ಸಭೆ ಹೊಸ ನಾಂದಿ ಹಾಡಲಿದೆ ಎಂದು ಪ್ರಧಾನಮಂತ್ರಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಾಳೆ ನೀತಿ ಆಯೋಗದ 7ನೇ ಸಭೆ

Exit mobile version