Site icon Vistara News

Parakram Diwas 2023: ಅಂಡಮಾನ್​-ನಿಕೋಬಾರ್​​ನ 21 ದ್ವೀಪಗಳಿಗೆ ಪ್ರಧಾನಿಯಿಂದ ನಾಮಕರಣ; ಯಾರೆಲ್ಲರ ಹೆಸರಿಡಲಾಗಿದೆ?

PM Modi names 21 islands Of Andaman And Nicobar ahead of Parakram Diwas

ನವ ದೆಹಲಿ: ಇಂದು ನೇತಾಜಿ ಸುಭಾಷ್​ ಚಂದ್ರ ಬೋಸ್​ ಜನ್ಮದಿನದ ನಿಮಿತ್ತ, ಅವರಿಗೆ ಗೌರವಾರ್ಥವಾಗಿ ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪಗಳಲ್ಲಿನ 21 ದೊಡ್ಡದೊಡ್ಡ ದ್ವೀಪಗಳಿಗೆ ಪ್ರಧಾನಿ ನರೇಂದ್ರ ಮೋದಿ ನಾಮಕರಣ ಮಾಡಿದರು. ಸುಭಾಷ್​ ಚಂದ್ರ ಬೋಸ್​ ಜನ್ಮದಿನವನ್ನು 2021ರಿಂದ ಪರಾಕ್ರಮ ದಿವಸ್​ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಲದ ಪರಾಕ್ರಮ ದಿವಸ್​ (Parakram Diwas 2023)ನಿಮಿತ್ತ ಅಂಡಮಾನ್​-ನಿಕೋಬಾರ್​ನಲ್ಲಿನ 21 ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ನಾಮಕರಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ವರ್ಚ್ಯುವಲ್​ ಆಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಅಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್​ ದ್ವೀಪ (ಈ ಹಿಂದಿನ ರಾಸ್​ ದ್ವೀಪಗಳು)ದಲ್ಲಿ ನಿರ್ಮಿಸಲಾಗಿರುವ ಸುಭಾಷ್​ ಚಂದ್ರ ಬೋಸ್​ ಅವರ ರಾಷ್ಟ್ರೀಯ ಸ್ಮಾರಕದ ಮಾದರಿ ಪ್ರತಿಮೆಯನ್ನೂ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರನ್ನು ಜನಮಾನಸದಿಂದ ಮರೆಯಾಗಿಸುವ ಪ್ರಯತ್ನವೂ ನಡೆಯಿತು. ಆದರೆ ಅದು ಸಾಧ್ಯವಾಗಲಿಲ್ಲ. ಈ 21ನೇ ಶತಮಾನದಲ್ಲೂ ಜನರು ನೇತಾಜಿ ಸುಭಾಷ್​ ಚಂದ್ರ ಬೋಸ್​​ರನ್ನು ಜನ ಪ್ರತಿಕ್ಷಣ ಸ್ಮರಿಸುತ್ತಿದ್ದಾರೆ’ ಎಂದು ಹೇಳಿದರು. ‘ನೇತಾಜಿ ಅವರಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ದೇಶದ ಎದುರು ಬಹಿರಂಗಪಡಿಸಬೇಕು ಎಂಬ ಬೇಡಿಕೆ ದಶಕಗಳಿಂದಲೂ ಇತ್ತು. ಅದನ್ನು ನಾವು ಅತ್ಯಂತ ಶ್ರದ್ಧೆಯಿಂದ ಮಾಡಿದ್ದೇವೆ ಮತ್ತು ಈ ವಿಚಾರವಾಗಿ ಇನ್ನಷ್ಟು ಕೆಲಸ ಮುಂದುವರಿದಿದೆ ಎಂದೂ ಪ್ರಧಾನಿ ತಿಳಿಸಿದರು. 21 ದ್ವೀಪಗಳಿಗೆ ನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್​ ಶಾ ಕೂಡ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಅಂಡಮಾನ್​-ನಿಕೋಬಾರ್​ನ 21 ದ್ವೀಪಗಳಿಗೆ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರು; ಜ.23ರಂದು ಪ್ರಧಾನಿಯಿಂದ ನಾಮಕರಣ

ಯಾರೆಲ್ಲರ ಹೆಸರು ಇಡಲಾಗಿದೆ?
ಮಿಲಿಟರಿ ಕ್ಷೇತ್ರದ ಅತ್ಯುನ್ನತ ಪುರಸ್ಕಾರವಾದ ಪರಮವೀರ ಚಕ್ರ ಪ್ರಶಸ್ತಿಗೆ ಭಾಜನರಾದ ಯೋಧರ ಹೆಸರನ್ನೇ ಅಂಡಮಾನ್​-ನಿಕೋಬಾರ್​ನಲ್ಲಿದ್ದ ಎಲ್ಲ 21 ದ್ವೀಪಗಳಿಗೆ ಇಡಲಾಗಿದೆ. ಈ 21 ದ್ವೀಪಗಳಲ್ಲೇ ಅತ್ಯಂತ ದೊಡ್ಡ ದ್ವೀಪಕ್ಕೆ ಮೇಜರ್​ ಸೋಮನಾಥ್ ಶರ್ಮಾ ಹೆಸರು ಇಡಲಾಗಿದೆ. ಇವರು ಮೊಟ್ಟಮೊದಲು ಈ ಪುರಸ್ಕಾರ ಪಡೆದವರು. . 1947ರ ನವೆಂಬರ್​ 3ರಂದು ಶ್ರೀನಗರ ವಿಮಾನ ನಿಲ್ದಾಣದ ಬಳಿ ಪಾಕಿಸ್ತಾನಿ ನುಸುಳುಕೋರರನ್ನು ಹಿಮ್ಮೆಟ್ಟಿಸುವಾಗ ಅವರು ಹುತಾತ್ಮರಾದರು. ಹಾಗೇ, ಇನ್ನುಳಿದಂತೆ, ‘ಸುಬೇದಾರ್​ ಮತ್ತು ಲ್ಯಾನ್ಸ್ ನಾಯಕ್​ ಕರಮ್​ ಸಿಂಗ್​, ಲೆಫ್ಟಿನೆಂಟ್​ ರಾಮಾ ರಘೋಬಾ ರಾಣೆ, ನಾಯಕ್​ ಜಡುನಾಥ್​ ಸಿಂಗ್​, ಕಂಪನಿ ಹವಿಲ್ದಾರ್​ ಮೇಜರ್​ ಪಿರು ಸಿಂಗ್​, ಕ್ಯಾಪ್ಟನ್​ ಜಿ.ಎಸ್​.ಸಲಾರಿಯಾ, ಲೆಫ್ಟಿನೆಂಟ್ ಕರ್ನಲ್​ ಧನ್​ ಸಿಂಗ್​ ಥಾಪಾ, ಸುಬೇದಾರ್​ ಜೋಗಿಂದರ್​ ಸಿಂಗ್​, ಮೇಜರ್​ ಶೈತಾನ್ ಸಿಂಗ್, ಸಿಕ್ಯೂಎಂಎಚ್​ ಅಬ್ದುಲ್​ ಹಮೀದ್​, ಲೆಫ್ಟಿನೆಂಟ್​ ಕರ್ನಲ್​ ಅರ್ದೇಶಿರ್ ಬುರ್ಜೋರ್ಜಿ ತಾರಾಪೋರ್, ಲ್ಯಾನ್ಸ್​ ನಾಯಕ್​ ಅಲ್ಬರ್ಟ್​ ಎಕ್ಕಾ, ಮೇಜರ್​ ಹೋಶಿಯಾರ್​ ಸಿಂಗ್​, ಲೆಫ್ಟಿನೆಂಟ್​ ಅರುಣ್​ ಕ್ಷೇತ್ರಪಾಲ್​, ಫ್ಲೈಯಿಂಗ್​ ಆಫೀಸರ್​ ನಿರ್ಮಲ್​​ಜಿತ್​ ಸಿಂಗ್​ ಸೇಖೋನ್​, ಮೇಜರ್​ ರಾಮಸ್ವಾಮಿ ಪರಮೇಶ್ವರನ್​, ನಾಯಬ್ ಸುಬೇದಾರ್ ಬನಾ ಸಿಂಗ್ ಬಾನಾ ಸಿಂಗ್​, ಕ್ಯಾಪ್ಟನ್​ ವಿಕ್ರಮ್​ ಭಾತ್ರಾ, ಲೆಫ್ಟಿನೆಂಟ್​ ಮನೋಜ್​ ಕುಮಾರ್​ ಪಾಂಡೆ, ಸುಬೇದಾರ್​ ಮೇಜರ್​ ಸಂಜಯ್​ ಕುಮಾರ್​, ಸುಬೇದಾರ್​ ಮೇಜರ್​ ಯೋಗೇಂದ್ರ ಸಿಂಗ್​ ಯಾದವ್​ ಅವರ ಹೆಸರುಗಳನ್ನು ಇಡಲಾಗಿದೆ.

ರಾಷ್ಟ್ರಮಟ್ಟದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Exit mobile version