Site icon Vistara News

Poonch Terror Attack: ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಕಂಬನಿ ಮಿಡಿದ ರಾಜಕೀಯ ನಾಯಕರು

Political leaders condoled death of 5 soldiers in Poonch terror Attack

ನವದೆಹಲಿ: ಪೂಂಚ್ ಉಗ್ರ ದಾಳಿಯಲ್ಲಿ (Poonch terror attack) ಹುತಾತ್ಮರಾದ ಐವರು ಯೋಧರಿಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆಪ್ ಮುಖ್ಯಸ್ಥ ಹಾಗೂ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ. ಭಯೋತ್ಪಾದನೆ ವಿರುದ್ದ ನಾವೆಲ್ಲಾ ಒಂದಾಗಿದ್ದೇವೆ ಎಂದು ಸಂತಾಪ ಸೂಚಿಸಿದ್ದಾರೆ.

ಉಗ್ರರ ದಾಳಿಯಲ್ಲಿ ಐವರು ಯೋಧರ ಹುತಾತ್ಮರಾದ ಸುದ್ದಿಯು ತುಂಬ ದುಃಖದಾಯಕವಾಗಿದೆ. ಈ ವೀರ ಯೋಧರಿಗೆ ನನ್ನ ವಿನಮ್ರ ಶೃದ್ಧಾಂಜಲಿ ಸಲ್ಲಿಸುತ್ತೇನೆ ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ. ಇದೇ ವೇಳೆ, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಯೋಧರ ಸಾವಿನ ಸುದ್ದಿ ಕೇಳಿ ಶಾಕ್ ಆಗಿದೆ. ಈ ಹೇಡಿತನದ ಕೃತ್ಯ ಹಿಂದಿರುವವರಿಗೆ ಗರಿಷ್ಠ ಶಿಕ್ಷೆಯನ್ನು ಕೊಡಿಸುವ ಕೆಲಸವಾಗಬೇಕು ಎಂದು ಹೇಳಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್

ಪಿಡಿಪಿ ಮುಖ್ಯಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಕೂಡ ಟ್ವೀಟ್ ಮಾಡಿ, ಪೂಂಚ್‌ನಲ್ಲಾದ ಹೀನ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತೇನೆ. ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಪೂಂಜ್ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಭಯೋತ್ಪಾದನೆ ವಿರುದ್ಧ ಇಡೀ ದೇಶವೇ ಒಗ್ಗಟ್ಟಾಗಿದೆ. ಈ ದಾಳಿಯಲ್ಲಿ ಮೃತಪಟ್ಟ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸುತ್ತೇನೆ. ಹುತಾತ್ಮ ಯೋಧರ ಋಣದಲ್ಲಿ ದೇಶ ಯಾವಾಗಲೂ ಇದೆ ಎಂದು ಹೇಳಿದ್ದಾರೆ.

ಸೇನಾ ವಾಹನಕ್ಕೆ ಬೆಂಕಿ ಆಕಸ್ಮಿಕವಲ್ಲ, ಅದು ಉಗ್ರರ ಕೃತ್ಯ! ಐವರು ಯೋಧರು ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಪೂಂಚ್​ ವಲಯದಲ್ಲಿ ಭಾರತೀಯ ಸೇನೆಯ ವಾಹನವೊಂದಕ್ಕೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದು, ಅದರಲ್ಲಿದ್ದ ಯೋಧರ ಪೈಕಿ ಐವರು ದುರ್ಮರಣಕ್ಕೀಡಾಗಿದ್ದರು(Army Jawans Killed). ಈ ಘಟನೆಯು ಆಕಸ್ಮಿಕವಾಗಿರದೇ, ಭಯೋತ್ಪಾದನಾ ಕೃತ್ಯವಾಗಿದ್ದು, ಗ್ರೆನೇಡ್ ಎಸೆದಿದ್ದರಿಂದ ಸೇನಾವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ (Terror Attack) ಎಂದು ಸೇನೆ ಹೇಳಿದೆ. ಮತ್ತೊಬ್ಬ ಯೋಧ ತೀವ್ರವಾಗಿ ಗಾಯಗೊಂಡಿದ್ದಾನೆ(Army Jawans Killed).

ಪೂಂಚ್​ ಪಟ್ಟಣದ ಬಿಜಿ ಸೆಕ್ಟರ್​​ನಲ್ಲಿರುವ ಭಟ್ಟಾ ಡುರಿಯಾನ್​ ಅರಣ್ಯದ ಬಳಿಯೇ ಈ ಘಟನೆ ನಡೆದಿದೆ. ಭಾರತೀಯ ಸೇನೆಯು ಈ ಸಂಬಂಧ ತನಿಖೆಯನ್ನು ಕೈಗೊಂಡಿದೆ. ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಸೇನಾ ವಾಹನದ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಗ್ರೆನೇಡ್ ದಾಳಿಯಿಂದಾಗಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಭಟ್ಟಾ ಡುರಿಯಾನ್​ ಅರಣ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಈ ಪರಿಸ್ಥಿತಿಯ ಲಾಭ ಪಡೆದುಕೊಂಡ ಉಗ್ರರು ಸೇನಾ ವಾಹನದ ಮೇಲೆ ದಾಳಿ ಮಾಡಿದ್ದಾರೆ ಎಂದು ನಾರ್ದರ್ನ್ ಕಮಾಂಡ್ ಸೇನಾ ಮುಖ್ಯ ಕಚೇರಿಯು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಉಗ್ರರು ಗ್ರೆನೇಡ್ಸ್ ಬಳಸಿದ್ದರಿಂದ ವಾಹನಕ್ಕೆ ಬೆಂಕಿ ತಗುಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: 26/11 Mumbai Attacks| ಮುಂಬಯಿ ಉಗ್ರ ದಾಳಿಗೆ 14 ವರ್ಷ; ದೇಶದ ಇತಿಹಾಸದಲ್ಲಿ ಇದು ಕರಾಳ ದಿನ

ಉಗ್ರ ಕೃತ್ಯದಲ್ಲಿ ಮೃತಪಟ್ಟ ಐದು ಯೋಧರನ್ನು ಭಟ್ಟಾ ಡುರಿಯಾನ್ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕೆಲಸಕ್ಕೆ ನಿಯೋಜಿಸಲಾಗಿತ್ತು ಎಂದು ಸೇನೆ ಹೇಳಿದೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮತ್ತೊಬ್ಬ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸೇನಾ ವಾಹನದ ಮೇಲೆ ದಾಳಿ ನಡೆಸಿದ ಉಗ್ರರ ಹುಡುಕಾಟ ನಡೆದಿದೆ ಎಂದು ಹೇಳಿಕೆಯಲ್ಲಿ ಸೇನೆ ತಿಳಿಸಿದೆ.

Exit mobile version