ನವದೆಹಲಿ: ದೆಹಲಿ ಅಬಕಾರಿ ನೀತಿ ಅಕ್ರಮ ಹಗರಣಕ್ಕೆ (Delhi Excise Policy)ಸಂಬಂಧಪಟ್ಟಂತೆ ಇಂದು ತೆಲಂಗಾಣ ಮುಖ್ಯಮಂತ್ರಿ, ಭಾರತ್ ರಾಷ್ಟ್ರ ಸಮಿತಿ ಪಕ್ಷದ ನಾಯಕ ಕೆ.ಚಂದ್ರಶೇಖರ್ ಪುತ್ರಿ ಕೆ. ಕವಿತಾ ಅವರು ಇ.ಡಿ.ವಿಚಾರಣೆಗೆ (K Kavitha ED Interrogation) ಒಳಪಡಲಿದ್ದಾರೆ. ಇ.ಡಿ.ವಿಚಾರಣೆ ಎದುರಿಸಲು ಕೆ.ಕವಿತಾ ಅವರು ದೆಹಲಿಗೆ ಹೋಗಿದ್ದಾರೆ.
ಇತ್ತ ಹೈದರಾಬಾದ್ನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ವಾಂಟೆಡ್ ಕ್ರಿಮಿನಲ್ ಎಂಬಂತೆ ಬಿಂಬಿಸಿ ಪೋಸ್ಟರ್ ಹಾಕಲಾಗಿದೆ. ಅಂದರೆ ‘ವಾಂಟೆಡ್ ಎಂದು ದೊಡ್ಡದಾಗಿ ಬರೆದು, ಅದರ ಕೆಳಗಡೆ ಬಿ.ಎಲ್.ಸಂತೋಷ್ ಫೋಟೋ ಹಾಕಲಾಗಿದೆ. ಹಾಗೇ, ‘ಕುದುರೆ ವ್ಯಾಪಾರದಲ್ಲಿ ಪರಿಣತರು’ ಎಂದು ಒಂದು ಲೈನ್ ಬರೆದು, ಹುಡುಕಿಕೊಟ್ಟವರಿಗೆ, ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ 15 ಲಕ್ಷ ರೂಪಾಯಿ ನೀಡಲಾಗುವುದು ಎಂದು ಬರೆಯಲಾಗಿದೆ. ಇಂಗ್ಲಿಷ್ ಮತ್ತು ತೆಲುಗು ಭಾಷೆಯಲ್ಲಿ ಪೋಸ್ಟರ್ ಮಾಡಿಸಲಾಗಿದ್ದು, ಹೈದರಾಬಾದ್ನ ಎರಡು ಕಡೆಗಳಲ್ಲಿ ಹಾಕಲಾಗಿದೆ. ಇನ್ನೊಂದೆಡೆ ದೆಹಲಿಯಲ್ಲಿ ಬಿಆರ್ಎಸ್ ಪಕ್ಷದ ಕಾರ್ಯಕರ್ತರು, ಸಚಿವರು, ಪ್ರಮುಖ ನಾಯಕರೆಲ್ಲ ಸೇರಿ ದೊಡ್ಡಮಟ್ಟದಲ್ಲಿ ತಮ್ಮ ಬಲಪ್ರದರ್ಶನ ಮಾಡುವ ಮೂಲಕ, ಕೆ. ಕವಿತಾರಿಗೆ ಬೆಂಬಲ ಸೂಚಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೀಗಾಗಿ ರಾಷ್ಟ್ರರಾಜಧಾನಿಯಲ್ಲಿ, ಇ.ಡಿ. ಕಚೇರಿ ಸಮೀಪವೆಲ್ಲ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ದೆಹಲಿ ಅಬಕಾರಿ ನೀತಿ ಅಕ್ರಮದಲ್ಲಿ ಕೆ.ಕವಿತಾ ಪಾಲೂ ಇದೆ ಎಂದು ಇ.ಡಿ. ಚಾರ್ಜ್ಶೀಟ್ ಸಲ್ಲಿಸಿದೆ. ಮಾರ್ಚ್ 11ರಂದು ಇ.ಡಿ. ಅವರನ್ನು ಕೆಲವು ತಾಸುಗಳ ಕಾಲ ವಿಚಾರಣೆಗೆ ಒಳಪಡಿಸಿತ್ತು. ಇಂದು ಮತ್ತೆ ವಿಚಾರಣೆಗೆ ಕರೆದಿದೆ. ಈ ಹಿಂದೆ ಸಿಬಿಐ ಕೂಡ ಕವಿತಾರನ್ನು ವಿಚಾರಣೆ ನಡೆಸಿತ್ತು. ಇ.ಡಿ. ವಿಚಾರಣೆಗೆ ತಡೆ ನೀಡಬೇಕು ಎಂದು ಈಗಾಗಲೇ ಕೆ.ಕವಿತಾ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ತನ್ನ ಫೋನ್ ಜಪ್ತಿ ಮಾಡಿದ್ದರ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮಾರ್ಚ್ 24ರಂದು, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಪಿ.ಎಸ್.ನರಸಿಂಹ ಅವರು ಕೈಗೆತ್ತಿಕೊಳ್ಳಲಿದ್ದಾರೆ.