Site icon Vistara News

ದ್ರೌಪದಿ ಮುರ್ಮು ಭಾಷಣದ ಮಧ್ಯೆ ಕಡಿತಗೊಂಡ ವಿದ್ಯುತ್​; ಸೌಮ್ಯವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ರಾಷ್ಟ್ರಪತಿ

Power Cut during President Droupadi Speech In Odisha

#image_title

ರಾಷ್ಟ್ರಪತಿ-ಪ್ರಧಾನಮಂತ್ರಿ-ಸಚಿವರು ಮತ್ತು ಇತರ ವಿಐಪಿಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ಏನೂ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ವೇದಿಕೆ, ಕುರ್ಚಿ, ಮೈಕ್​-ವಿದ್ಯುತ್​ ಹೀಗೆ ಎಲ್ಲವೂ ಸರಿಯಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಅದರಲ್ಲೂ ರಾಷ್ಟ್ರಪತಿ/ಪ್ರಧಾನಮಂತ್ರಿ ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ತುಸು ಜಾಸ್ತಿಯೇ ಕಟ್ಟೆಚ್ಚರ ಇರುತ್ತದೆ. ಆದರೆ ಒಡಿಶಾ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಕಾರ್ಯಕ್ರಮವೊಂದರಲ್ಲಿ ಎಡವಟ್ಟಾಗಿದೆ. ಇಲ್ಲಿನ ಮಯೂರ್​ಬಂಜ್​​ನ ಬರಿಪಾಡಾದಲ್ಲಿರುವ ಮಹಾರಾಜಾ ಶ್ರೀರಾಮ್​ ಚಂದ್ರ ಭಂಜಾ ದೇವ್​ ವಿಶ್ವ ವಿದ್ಯಾನಿಲಯದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡುತ್ತಿದ್ದಾಗಲೇ ಕರೆಂಟ್ ಹೋಗಿದೆ.

ಬೆಳಗ್ಗೆ ಹೊತ್ತಲ್ಲಿ ಸಮಾರಂಭ ನಡೆಯುತ್ತಿತ್ತು. ದ್ರೌಪದಿ ಮುರ್ಮು ಅವರು ಭಾಷಣ ಮಾಡುತ್ತಿದ್ದರು. ಆದರೆ ಏಕಾಏಕಿ ವಿದ್ಯುತ್ ಕಡಿತಗೊಂಡು ಯೂನಿವರ್ಸಿಟಿಯ ಅಡಿಟೋರಿಯಮ್​​ನಲ್ಲಿ ಕತ್ತಲಾವರಿಸಿತು. ಸುಮಾರು 9 ನಿಮಿಷಗಳ ಕಾಲ ಇದೇ ಸ್ಥಿತಿಯಿತ್ತು. ಕರೆಂಟ್ ಹೋದ ತಕ್ಷಣ ದ್ರೌಪದಿ ಮುರ್ಮು ಅವರೇನೂ ಭಾಷಣ ನಿಲ್ಲಿಸಲಿಲ್ಲ. ಕತ್ತಲಲ್ಲೇ ತಮ್ಮ ಭಾಷಣ ಮುಂದುವರಿಸಿದರು. ಆ ಅಡಿಟೋರಿಯಂಗೆ ಹೊರಗಿನಿಂದ ಸ್ವಲ್ಪ ಬೆಳಕು ಬರುತ್ತಿತ್ತು. ಆದರೆ ಕರೆಂಟ್ ಹೋಗಿದ್ದಕ್ಕೆ ದ್ರೌಪದಿ ಮುರ್ಮು ಸ್ವಲ್ಪ ಕಿರಿಕಿರಿಗೊಂಡರೂ, ಅತ್ಯಂತ ಸೌಮ್ಯವಾಗಿಯೇ ಅದನ್ನು ಹೊರಹಾಕಿದರು. ಈ ವಿಶ್ವವಿದ್ಯಾನಿಲಯವು ಅದೆಷ್ಟು ಸೌಂದರ್ಯ ಹೊಂದಿದೆಯೊ, ಅಷ್ಟೇ ಕತ್ತಲಲ್ಲಿ ಇದೆ’ ಎಂದು ಹೇಳಿದರು.

ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಪಾದ ಮುಟ್ಟಿ ನಮಿಸಲು ಮುಂದಾಗಿದ್ದ ಸರ್ಕಾರಿ ಎಂಜಿನಿಯರ್​ ಅಮಾನತು

ಹೀಗೆ ದ್ರೌಪದಿ ಮುರ್ಮು ಕಾರ್ಯಕ್ರಮದ ಮಧ್ಯೆ ಕರೆಂಟ್ ಹೋಗಿದ್ದನ್ನು ಒಡಿಶಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ದೃಢಪಡಿಸಿದೆ. ಬೆಳಗ್ಗೆ 11.56ರಿಂದ 12.05ರವರೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಅಡಿಟೋರಿಯಂ ಸಂಪೂರ್ಣವಾಗಿ ಕತ್ತಲಾಗಿತ್ತು ಎಂದು ಹೇಳಿದೆ. ಹಾಗೇ, ಈ ಬಗ್ಗೆ ವಿಷಾದವನ್ನೂ ವ್ಯಕ್ತಪಡಿಸಿದೆ. ಹೀಗೆ ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಮಧ್ಯೆ ಕರೆಂಟ್ ಹೋಗುವುದು ಭದ್ರತೆ ದೃಷ್ಟಿಯಿಂದಲೂ ಪ್ರಮಾದವಾಗಿದೆ. ಒಡಿಶಾದ ಹಲವು ರಾಜಕಾರಣಿಗಳು, ನಿವೃತ್ತ ಭದ್ರತಾ ಸಿಬ್ಬಂದಿ ಇದನ್ನು ಟೀಕಿಸುತ್ತಿದ್ದಾರೆ.

Exit mobile version