Site icon Vistara News

ಸಿಬಿಐ ಕಸ್ಟಡಿಯಲ್ಲೇ ಮೃತಪಟ್ಟ ಬಿರ್​ಭೂಮ್​​ ಸಜೀವ ದಹನದ ಮುಖ್ಯ ಆರೋಪಿ ಲಲನ್​​; ಅರೆಬೆತ್ತಲೆಯಾಗಿ ನೇಣು ಬಿಗಿದುಕೊಂಡ!

CBI

ಕೋಲ್ಕತ್ತ: ಪಶ್ಚಿಮ ಬಂಗಾಳದ ಬೀರ್​ಭೂಮ್​ ಜಿಲ್ಲೆಯ ಬೊಗ್ಟುಯಿಯಲ್ಲಿ ಮಾರ್ಚ್​ ತಿಂಗಳಲ್ಲಿ ನಡೆದಿದ್ದ ಹತ್ಯಾಕಾಂಡದ ಪ್ರಮುಖ ಆರೋಪಿ ಲಲನ್ ಶೇಖ್​ ಸಿಬಿಐ ಕಸ್ಟಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೊಗ್ಟುಯಿಯಲ್ಲಿ 8 ಮಂದಿ ಸಜೀವ ದಹನ ಸೇರಿ ಒಟ್ಟು 10ಮಂದಿಯ ಹತ್ಯೆ ನಡೆದು ಎಂಟು ತಿಂಗಳುಗಳೇ ಕಳೆದಿವೆ. ಈ ಕೇಸ್​ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡು, ವಾರಗಳ ಹಿಂದಷ್ಟೇ ಆರೋಪಿ ಲಲನ್​ ಶೇಖ್​ನನ್ನು ಜಾರ್ಖಂಡ್​​ನ ಪಾಕುರ್​​ನಲ್ಲಿ ಬಂಧಿಸಿತ್ತು. ಆತನನ್ನು ಬಿರ್​ಭೂಮ್​​ನ ರಾಂಪುರ್ಹತ್​ನಲ್ಲಿರುವ ಸಿಬಿಐ ಕ್ಯಾಂಪ್​ ಕಚೇರಿಯಲ್ಲಿ ಇಟ್ಟು ವಿಚಾರಣೆ ನಡೆಸಲಾಗುತ್ತಿತ್ತು. ಡಿ.12ರಂದು ಸಂಜೆ 4.30ರ ಹೊತ್ತಿಗೆ ಈತನ ಶವ ಸಿಬಿಐ ಕಚೇರಿಯ ಟಾಯ್ಲೆಟ್​​ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದೂ ಆತ ಅರೆಬೆತ್ತಲೆಯಾಗಿ ನೇಣು ಹಾಕಿಕೊಂಡಿದ್ದಾನೆ.

ಮಾರ್ಚ್​ ತಿಂಗಳಲ್ಲಿ ಬೀರ್​ಭೂಮ್​​ನ ಬೊಗ್ಟುಯಿ ಹಳ್ಳಿಯಲ್ಲಿ ಸ್ಥಳೀಯ ಪ್ರಭಾವಿ ತೃಣಮೂಲ ಕಾಂಗ್ರೆಸ್​ ನಾಯಕ ಭದು ಶೇಖ್​ ಎಂಬಾತನ ಹತ್ಯೆಯಾಗಿತ್ತು. ಈ ಹತ್ಯೆಯ ಬೆನ್ನಲ್ಲೇ ಸಿಟ್ಟಿಗೆದ್ದಿದ್ದ ಆತನ ಬೆಂಬಲಿಗರು ದೊಡ್ಡಮಟ್ಟದ ದಾಂಧಲೆ ಎಬ್ಬಿಸಿದ್ದರು. ಭದು ಶೇಖ್​​ನೊಂದಿಗೆ ಶತ್ರುತ್ವ ಹೊಂದಿದ್ದ ಅದೇ ಹಳ್ಳಿಯ ಸೋನಾ ಶೇಖ್​ ಎಂಬಾತನ ಮನೆ ಮೇಲೆ ಮುಗಿಬಿದ್ದಿದ್ದರು. ಭದು ಹತ್ಯೆ ಮಾಡಿಸಿದ್ದೇ ಸೋನಾ ಎಂದು ಭಾವಿಸಿದ್ದ ಅವರು ಆತನ ಮನೆಗೆ ಬೆಂಕಿ ಹಚ್ಚಿದ್ದರು. ಸೋನಾ ಮನೆಯಲ್ಲಿ 8 ಮೃತದೇಹಗಳು ಸಿಕ್ಕಿದ್ದವು. ಒಟ್ಟಾರೆ 10 ಮಂದಿ ಈ ದುರ್ಘಟನೆಯಲ್ಲಿ ಮೃತರಾಗಿದ್ದರು. ಅದೇ ಕೇಸ್​ನ್ನು ಸಿಬಿಐ ತನಿಖೆ ನಡೆಸುತ್ತಿದೆ. ಸೋನಾನನ್ನೂ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಒಟ್ಟಾರೆ ಸಜೀವ ದಹನದ ಮುಖ್ಯ ಆರೋಪಿ ಲಲನ್​ ಸಿಂಗ್​ ಎನ್ನಲಾಗಿದ್ದು, ಈತ ಹತ್ಯೆಯಾದ ಭದುವಿನ ಅತ್ಯಾಪ್ತ ಆಗಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಬಿರ್‌ಭೂಮ್‌ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಕೋಲ್ಕತ್ತಾ ಹೈಕೋರ್ಟ್‌ ಆದೇಶ

Exit mobile version