Site icon Vistara News

ವಾಜಪೇಯಿ ಬ್ರಿಟಿಷರಿಗೆ ಮಾಹಿತಿ ನೀಡುತ್ತಿದ್ದರು ಎಂದು ವಿವಾದ ಸೃಷ್ಟಿಸಿದ ಕಾಂಗ್ರೆಸ್​ ಮುಖಂಡ; ಅಟಲ್​​ ಸಮಾಧಿಗೆ ನಮಿಸಿದ ರಾಹುಲ್ ಗಾಂಧಿ

Atal Bihari Vajpayee

ನವ ದೆಹಲಿ: ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಪದಾಧಿಕಾರಿ ಗೌರವ್ ಪಾಂಡಿ ಅವರು, ಮಾಜಿ ಪ್ರಧಾನಮಂತ್ರಿ ಅಟಲ್​ ಬಿಹಾರಿ ವಾಜಪೇಯಿ ಬಗ್ಗೆ ವಿವಾದಾತ್ಮಕವಾಗಿ ಟ್ವೀಟ್ ಮಾಡಿ, ಬಳಿಕ ಡಿಲೀಟ್​ ಮಾಡಿದ್ದಾರೆ. ಅದರ ಬೆನ್ನಲ್ಲೇ ಇಂದು ರಾಹುಲ್ ಗಾಂಧಿ ಸದೈವ್​ ಅಟಲ್​​ಗೆ ಭೇಟಿ ಕೊಟ್ಟು ವಾಜಪೇಯಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ.

ಡಿ.25ರಂದು ಅಟಲ್​ ಬಿಹಾರಿ ವಾಜಪೇಯಿ ಜನ್ಮದಿನ ಇತ್ತು. ದೇಶಕಂಡ ಮುತ್ಸದ್ದಿ ನಾಯಕ, ಅಜಾತ ಶತ್ರು ವಾಜಪೇಯಿ ಅವರಿಗೆ ಪಕ್ಷಾತೀತವಾಗಿ ಅಭಿಮಾನಿಗಳು, ಅನುಯಾಯಿಗಳು ಇದ್ದಾರೆ. ಈ ಮಧ್ಯೆ ಕಾಂಗ್ರೆಸ್​ ನಾಯಕ ಗೌರವ್​ ಪಾಂಡಿ ಟ್ವೀಟ್ ಮಾಡಿ ‘1942ರಲ್ಲಿ ನಡೆದ ಕ್ವಿಟ್​ ಇಂಡಿಯಾ ಚಳವಳಿಯನ್ನು ಅಂದು ಆರ್​​ಎಸ್​​ಎಸ್​​ನ ಎಲ್ಲ ಸದಸ್ಯರ ಜತೆ ಅಟಲ್​ ಬಿಹಾರಿ ವಾಜಪೇಯಿ ಅವರೂ ಬಹಿಷ್ಕರಿಸಿದ್ದರು ಮತ್ತು ಬ್ರಿಟಿಷ್​​​ರಿಗೆ ಮಾಹಿತಿ ಕೊಡುವವರಾಗಿ ಕೆಲಸ ಮಾಡಿದ್ದರು. ಕ್ವಿಟ್​ ಇಂಡಿಯಾ ಆಂದೋಲನದಲ್ಲಿ ಪಾಲ್ಗೊಂಡವರ ಬಗ್ಗೆ ಬ್ರಿಟಿಷರಿಗೆ ಮಾಹಿತಿ ಕೊಡುತ್ತಿದ್ದರು. ನೆಲ್ಲಿ ಹತ್ಯಾಕಾಂಡ (1983) ಮತ್ತು ಬಾಬರಿ ಮಸೀದಿ ಧ್ವಂಸ(1992)ದ ಸಂದರ್ಭದಲ್ಲಿ ಗುಂಪುಗಳನ್ನು ಪ್ರಚೋದಿಸುವಲ್ಲಿ ವಾಜಪೇಯಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವತ್ತು ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿಯವರನ್ನು ಗಾಂಧಿಗೆ, ಸರ್ದಾರ್​ ವಲ್ಲಭಭಾಯಿ ಪಟೇಲ್​ಗೆ ಹೋಲಿಸುತ್ತಾರೆಯೇ ಹೊರತು ಸಾವರ್ಕರ್​​, ವಾಜಪೇಯಿ ಮತ್ತು ಎಂ.ಎಸ್.ಗೋಳ್ವಾಲ್ಕರ್ ಅವರ ಜತೆ ಹೋಲಿಕೆ ಮಾಡುವುದಿಲ್ಲ. ಯಾಕೆಂದರೆ ಬಿಜೆಪಿ ನಾಯಕರಿಗೂ ಸತ್ಯ ಗೊತ್ತು’ ಎಂದು ಹೇಳಿದ್ದರು.

ಗೌರವ್​ ಪಾಂಡಿ ಟ್ವೀಟ್​ಗೆ ಬಿಜೆಪಿಯ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿಯೇ ಭಾರತ್​ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್​ ಗಾಂಧಿ ತಾವು ಡಿ.26ರಂದು ವಾಜಪೇಯಿ ಸಮಾಧಿಗೆ ಭೇಟಿ ನೀಡುವುದಾಗಿಯೂ ಹೇಳಿದ್ದರು. ಈ ಮಧ್ಯೆ ವಿವಾದ ಹೆಚ್ಚಿದ ಬೆನ್ನಲ್ಲೇ ಗೌರವ್​ ಪಾಂಡಿ ತಮ್ಮ ಟ್ವೀಟ್​ನ್ನು ಡಿಲೀಟ್​​ ಮಾಡಿದ್ದಾರೆ.

ಇಂದು ಬೆಳಗ್ಗೆ ರಾಹುಲ್ ಗಾಂಧಿ ಅವರು ಸದೈವ್ ಅಟಲ್​​ಗೆ ಭೇಟಿ ಕೊಟ್ಟ ನಂತರ ಟ್ವೀಟ್ ಮಾಡಿದ ಬಿಜೆಪಿ ವಕ್ತಾರ ಶೆಹಜಾದ್​ ಪೂನಾವಾಲಾ ‘ಒಂದು ಕಡೆ ರಾಹುಲ್ ಗಾಂಧಿಯವರು ತಮಗೆ ವಾಜಪೇಯಿ ಮೇಲೆ ಅಪಾರ ಗೌರವ ಇರುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಅವರದ್ದೇ ಪಕ್ಷದ ನಾಯಕ ಗೌರವ್​ ಪಾಂಡಿ ಅವರು ವಾಜಪೇಯಿ ಅವರನ್ನು ಅವಮಾನಿಸುತ್ತಿದ್ದಾರೆ. ರಾಹುಲ್​ ಗಾಂಧಿ ಮತ್ತು ಅವರ ಪಕ್ಷದ ಬೂಟಾಟಿಕೆ ಬಯಲಾಗಿದೆ. ನಿಜಕ್ಕೂ ರಾಹುಲ್​ ಗಾಂಧಿಗೆ ವಾಜಪೇಯಿ ಮೇಲೆ ಗೌರವ ಇದ್ದಿದ್ದೇ ಆದರೆ, ಕೂಡಲೇ ಗೌರವ್​​ರನ್ನು ಪಕ್ಷದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಅಂದಹಾಗೇ, ಗೌರವ್​ ಪಾಂಡಿ ವಾಜಪೇಯಿ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡುವುದಕ್ಕೂ ಮೊದಲೇ ರಾಹುಲ್​ ಗಾಂಧಿಯವರು, ತಾವು ಡಿ.26ರಂದು ಸದೈವ್​ ಅಟಲ್​​ಗೆ ಭೇಟಿ ಕೊಡುವುದಾಗಿ ಹೇಳಿದ್ದರು. ಮೊದಲಿನಿಂದಲೂ ಕಾಂಗ್ರೆಸ್​ ನಾಯಕರೂ ಅಟಲ್​ ಬಿಹಾರಿ ವಾಜಪೇಯಿ ಅವರ ಬಗ್ಗೆ ಟೀಕೆ ಮಾಡುವುದು ತೀರ ಕಡಿಮೆ. ರಾಹುಲ್​ ಗಾಂಧಿ, ಸೋನಿಯಾ ಗಾಂಧಿ ಸೇರಿ ಹಿರಿಯ ನಾಯಕರು ಯಾರೂ ವಾಜಪೇಯಿ ವಿರುದ್ಧ ಮಾತನಾಡುವುದಿಲ್ಲ. ಆದರೀಗ ಗೌರವ್​ ಪಾಂಡಿ ಅಟಲ್​​ಜಿ ಮೇಲೆ ಗಂಭೀರ ಸ್ವರೂಪದ ಆರೋಪ ಮಾಡಿ ವಿವಾದ ಉಂಟು ಮಾಡಿದ್ದಾರೆ.

ಇದನ್ನೂ ಓದಿ: ರಾಹುಲ್​ ಗಾಂಧಿ ಮಾತುಗಳು ಇಡೀ ದೇಶದಲ್ಲಿ ಕಂಪನ ಸೃಷ್ಟಿಸುತ್ತಿವೆ; ಕೈ ನಾಯಕನನ್ನು ಹೊಗಳಿದ ತಮಿಳುನಾಡು ಮುಖ್ಯಮಂತ್ರಿ

Exit mobile version