Site icon Vistara News

‘ನಾವು ಸಂಕಷ್ಟ ಹೇಳುತ್ತಿದ್ದೇವೆ, ರಾಜ ಕೇಳಬೇಕಷ್ಟೇ’; ಇಟಲಿಯಿಂದ ಬಂದ ರಾಹುಲ್​ ಗಾಂಧಿ ಟ್ವೀಟ್​

Rahul Gandhi

ನವ ದೆಹಲಿ: ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್​ನಿಂದ ಮೆಹಂಗಾಯ್​ ಪರ್​ ಹಲ್ಲಾ ಬೋಲ್​ (Mehangai Par Halla Bol- ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ) ಬೃಹತ್​ ಮಟ್ಟದ ಱಲಿ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಧರಣಿ ಪ್ರಾರಂಭವಾಗಿದೆ. ಕಾಂಗ್ರೆಸ್​ ನಾಯಕರು-ಕಾರ್ಯಕರ್ತರು ರಾಮಲೀಲಾ ಮೈದಾನದಲ್ಲಿ ಸೇರಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಭಾಷಣ ಕೂಡ ಮಾಡಲಿದ್ದಾರೆ. ಅದಕ್ಕೂ ಮೊದಲು ರಾಹುಲ್ ಗಾಂಧಿ ಟ್ವೀಟ್​ ಮಾಡಿದ್ದು, ‘ಜನರೆಲ್ಲ ಹಣದುಬ್ಬರ, ನಿತ್ಯವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಆದರೆ ರಾಜ ಸ್ನೇಹಿತರನ್ನು ಸಂಪಾದಿಸುವುದರಲ್ಲೇ ನಿರತನಾಗಿದ್ದಾನೆ. ಈ ಎಲ್ಲ ಅವ್ಯವಸ್ಥೆಗಳಿಗೆ ಪ್ರಧಾನಮಂತ್ರಿಯೇ ಹೊಣೆ. ನಾವು ಹಣದುಬ್ಬರದ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ..ರಾಜ ಕೇಳಬೇಕು’ ಎಂದು ಹೇಳಿದ್ದಾರೆ.

ರಾಹುಲ್​ ಗಾಂಧಿ ತನ್ನ ತಾಯಿ ಸೋನಿಯಾ ಗಾಂಧಿ ಮತ್ತು ಸೋದರಿ ಪ್ರಿಯಾಂಕಾ ಗಾಂಧಿ ಜತೆ ಆಗಸ್ಟ್​ ಕೊನೇ ವಾರದಲ್ಲಿ ಇಟಲಿಗೆ ಹೋಗಿದ್ದರು. ಆಗಸ್ಟ್​ 27ರಂದು ಸೋನಿಯಾ ಗಾಂಧಿ ತಾಯಿ ಪಾವೊಲಾ ಮೈನೋ ನಿಧನರಾಗಿದ್ದಾರೆ. ಇದೀಗ ರಾಹುಲ್ ಗಾಂಧಿ ಮಾತ್ರ ಭಾರತಕ್ಕೆ ವಾಪಸ್ ಆಗಿದ್ದು, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇನ್ನೂ ಇಟಲಿಯಲ್ಲೇ ಇದ್ದಾರೆ. ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್​ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಕೇಂದ್ರೀಯ ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಂಚಾರ ನಿಯಂತ್ರಣಕ್ಕೆ ದೆಹಲಿ ಪೊಲೀಸರು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್​ ಪ್ರತಿಭಟನೆ ಇಂದು; ರಾಮಲೀಲಾ ಮೈದಾನದಲ್ಲಿ ರಾಹುಲ್ ಗಾಂಧಿ ಕಟೌಟ್​

Exit mobile version