Site icon Vistara News

ಭದ್ರತಾ ವೈಫಲ್ಯ ಆಗಿದ್ದಲ್ಲ, ರಾಹುಲ್​ ಗಾಂಧಿಯೇ ನಿಯಮ ಉಲ್ಲಂಘಿಸಿದ್ದಾರೆ; ಪ್ರತಿಕ್ರಿಯಾ ಪತ್ರ ಬರೆದ ಸಿಆರ್​ಪಿಎಫ್​​

Rahul Gandhi @ RSS and Varun Gandhi

ನವ ದೆಹಲಿ: ಭಾರತ್​ ಜೋಡೋ ಯಾತ್ರೆ ದೆಹಲಿಗೆ ಪ್ರವೇಶ ಮಾಡಿದಾಗಿನಿಂದಲೂ ಹಲವು ಬಾರಿ ಅವರ ಭದ್ರತೆಯಲ್ಲಿ ವೈಫಲ್ಯ ಉಂಟಾಗಿದೆ. ಅವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಗೃಹ ಸಚಿವ ಅಮಿತ್​ ಶಾ ಅವರಿಗೆ ಕಾಂಗ್ರೆಸ್​ ಪತ್ರ ಬರೆದಿತ್ತು. ಈ ಪತ್ರಕ್ಕೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಆರ್​ಪಿಎಫ್​​) ಪ್ರತಿಕ್ರಿಯಿಸಿದೆ. ‘ಭದ್ರತಾ ವೈಫಲ್ಯ ಆಗಿಲ್ಲ. ರಾಹುಲ್​ ಗಾಂಧಿಯವರೇ ಹಲವು ಸಂದರ್ಭಗಳಲ್ಲಿ ಭದ್ರತಾ ಮಾರ್ಗಸೂಚಿಗಳನ್ನು ಮತ್ತು ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಸಿಆರ್​ಪಿಎಫ್​ ಹೇಳಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ರಾಹುಲ್​ ಗಾಂಧಿಯವರಿಗೆ ಸಿಆರ್​ಪಿಎಫ್​​ನಿಂದ ಝಡ್​ ಪ್ಲಸ್​ ಭದ್ರತೆ ಒದಗಿಸಲಾಗಿದೆ. ರಾಹುಲ್ ಗಾಂಧಿಯವರಿಗೆ ಇರುವ ಬೆದರಿಕೆಯ ಪ್ರಮಾಣವನ್ನಾಧರಿಸಿ, ಗೃಹ ಸಚಿವಾಲಯ ನೀಡಿರುವ ಮಾರ್ಗಸೂಚಿಯಂತೆಯೇ ರಕ್ಷಣೆ ಒದಗಿಸಿದ್ದೇವೆ. ದೆಹಲಿ ಸೇರಿ ಎಲ್ಲ ಕಡೆಗಳಲ್ಲೂ ರಾಹುಲ್ ಗಾಂಧಿ ಬರುವುದಕ್ಕಿಂತ ಮುಂಚೆಯೇ ಅಗತ್ಯ ಭದ್ರತೆ ಕಲ್ಪಿಸಲಾಗಿತ್ತು ಎಂದು ಸಿಆರ್​ಪಿಎಫ್​ ಪತ್ರದಲ್ಲಿ ಉಲ್ಲೇಖಿಸಿದೆ.

‘ರಾಹುಲ್​ ಗಾಂಧಿಯವರು ಹಲವು ಸಂದರ್ಭಗಳಲ್ಲಿ ಭದ್ರತಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ನಾವು ಅವರಿಗೆ ಅದನ್ನು ಸೂಕ್ಷ್ಮವಾಗಿಯೇ ಹಲವು ಬಾರಿ ತಿಳಿಸಿದ್ದೇವೆ. ಅವರು ಹಲವು ಬಾರಿ ಭದ್ರತಾ ವಲಯಗಳನ್ನು ಮೀರಿ ಹೋಗಿದ್ದಾರೆ. 2020ರಿಂದ ಇಲ್ಲಿಯವರೆಗೆ ರಾಹುಲ್​ ಗಾಂಧಿ 113 ಬಾರಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ’ ಎಂದೂ ಸಿಆರ್​ಪಿಎಫ್​ ಪತ್ರದಲ್ಲಿ ಉಲ್ಲೇಖಿಸಿದೆ.

ಕಾಂಗ್ರೆಸ್​​ನ ಭಾರತ್​ ಜೋಡೋ ಯಾತ್ರೆ ಡಿಸೆಂಬರ್​ 24ರಂದು ದೆಹಲಿ ಪ್ರವೇಶಿಸಿದೆ. ಆಗಿನಿಂದಲೂ ರಾಹುಲ್​ ಗಾಂಧಿ ಭದ್ರತೆ ವಿಷಯದಲ್ಲಿ ನಾವು ಹಲವು ಬಾರಿ ರಾಜಿಯಾಗಿದ್ದೇವೆ. ರಾಹುಲ್​ ಗಾಂಧಿಗೆ Z ಪ್ಲಸ್​ ಕೆಟೆಗರಿ ಭದ್ರತೆ ಇದ್ದಾಗ್ಯೂ, ಅವರಿಗೆ ಸೂಕ್ತ ರಕ್ಷಣೆ ಸಿಗಲಿಲ್ಲ. ರಾಹುಲ್​ ಗಾಂಧಿ ಯಾತ್ರೆ ನಡೆಯುತ್ತಿದ್ದಾಗ ಉಂಟಾದ ಜನದಟ್ಟಣೆಯನ್ನು ತಡೆಯಲು ದೆಹಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಆ ಜನಸಂದಣಿ ಮಧ್ಯೆ ಯಾತ್ರೆಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರೇ ರಾಹುಲ್ ಗಾಂಧಿ ಸುತ್ತ ಭದ್ರತಾ ವಲಯ ಸೃಷ್ಟಿಸಿದರು. ಈ ಮೂಲಕ ಅವರಿಗೆ ರಕ್ಷಣೆ ಒದಗಿಸಿದರು. ಅದೆಲ್ಲವನ್ನೂ ದೆಹಲಿ ಪೊಲೀಸರು ಸುಮ್ಮನೆ ನಿಂತು ನೋಡುತ್ತಿದ್ದರು. ಇಷ್ಟೆಲ್ಲದರ ಮಧ್ಯೆ ಪಾದಯಾತ್ರೆಯಲ್ಲಿ ಪಾಲ್ಗೊಂಡವರನ್ನೇ ಗುಪ್ತಚರ ಇಲಾಖೆ ವಿಚಾರಣೆ ನಡೆಸಿದೆ ಎಂದು ಕಾಂಗ್ರೆಸ್​ ನಾಯಕ ವೇಣುಗೋಪಾಲ್​ ಅವರು ಅಮಿತ್​ ಶಾರಿಗೆ ಪತ್ರ ಬರೆದು, ದೂರಿದ್ದರು.

ಇದನ್ನೂ ಓದಿ: ಭಾರತ್​ ಜೋಡೋ ಯಾತ್ರೆ ದೆಹಲಿಗೆ ಕಾಲಿಟ್ಟಾಗಿನಿಂದಲೂ ರಾಹುಲ್​ ಗಾಂಧಿ ಭದ್ರತೆಯಲ್ಲಿ ವೈಫಲ್ಯ; ಅಮಿತ್​ ಶಾಗೆ ಕಾಂಗ್ರೆಸ್​ ಪತ್ರ

Exit mobile version