Site icon Vistara News

ರಕ್ಷಾ ಬಂಧನ ವಿಶೇಷ; ಮಹಿಳೆಯರಿಗೆ ಬಂಪರ್​ ಉಡುಗೊರೆ ಘೋಷಿಸಿದ ಸಿಎಂ ಯೋಗಿ ಆದಿತ್ಯನಾಥ್​

YOGI ADITYANATH

ಲಖನೌ: ರಕ್ಷಾ ಬಂಧನ ಹಬ್ಬದ ನಿಮಿತ್ತ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ರಾಜ್ಯದ ಮಹಿಳೆಯರಿಗಾಗಿ ಒಂದು ವಿಶೇಷ ಉಡುಗೊರೆ ಕೊಟ್ಟಿದ್ದಾರೆ. ಈ ಗಿಫ್ಟ್​​ನ ಅವಧಿ 48ಗಂಟೆಗಳು ಎಂದೂ ಹೇಳಿದ್ದಾರೆ. ಆಗಸ್ಟ್​ 11ರಂದು ರಾಕಿ ಹಬ್ಬ ನಡೆಯಲಿದ್ದು, ಅದರ ನಿಮಿತ್ತ ಎರಡು ದಿನಗಳ ಕಾಲ ರಾಜ್ಯದ ಎಲ್ಲ ಮಹಿಳೆಯರು ಸರ್ಕಾರಿ ಬಸ್​​ಗಳಲ್ಲಿ ಉಚಿತವಾಗಿ ಸಂಚಾರ ಮಾಡಬಹುದು. ಇದು ಆಜಾದಿ ಕಾ ಅಮೃತ್​ ಮಹೋತ್ಸವದ ಉಪಕ್ರಮ ಎಂದು ಯೋಗಿ ಟ್ವೀಟ್​ ಮಾಡಿದ್ದಾರೆ. ಅಂದಹಾಗೇ, ಆಗಸ್ಟ್​ 10ರ ಮಧ್ಯರಾತ್ರಿಯಿಂದ ಆಗಸ್ಟ್​ 12ನೇ ತಾರೀಖಿನ ಮಧ್ಯರಾತ್ರಿವರಗೆ ಈ ವಿಶೇಷ ಉಡುಗೊರೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಮಹಿಳೆಯರು ರಾಜ್ಯ ಸರ್ಕಾರಿ ಬಸ್​​ನಲ್ಲಿ ರಾಜ್ಯದಲ್ಲಿ ಎಲ್ಲಿಗೇ ಹೋದರೂ, ಎಷ್ಟೇ ಸಮಯ ಪ್ರಯಾಣ ಮಾಡಿದರೂ ದುಡ್ಡು ಕೊಡುವ ಅಗತ್ಯ ಇರುವುದಿಲ್ಲ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸಾಮಾನ್ಯವಾಗಿ ಪ್ರತಿವರ್ಷವೂ ರಕ್ಷಾ ಬಂಧನದಂದು ಮಹಿಳೆಯರಿಗಾಗಿ ಉಚಿತ ಬಸ್​ ಸಂಚಾರ ವ್ಯವಸ್ಥೆ ಕಲ್ಪಿಸುತ್ತಾರೆ. ಆದರೆ ಇಷ್ಟು ವರ್ಷ 24 ತಾಸುಗಳ ಕಾಲ ಅಂದರೆ ಒಂದೇ ದಿನ ಈ ವಿಶೇಷ ಯೋಜನೆ ಇರುತ್ತಿತ್ತು. ಪ್ರಸಕ್ತ ಬಾರಿ ಎರಡು ದಿನ ಸರ್ಕಾರಿ ಬಸ್​​ನಲ್ಲಿ ಮಹಿಳೆಯರು ಉಚಿತವಾಗಿ ಸಂಚಾರ ಮಾಡಬಹುದು. ಅಂದಹಾಗೇ, ಕಳೆದ ವರ್ಷ 3.5 ಲಕ್ಷ ಮಹಿಳೆಯರು ಈ ಸೌಲಭ್ಯ ಪಡೆದುಕೊಂಡಿದ್ದರು.

ಉತ್ತರ ಪ್ರದೇಶದಲ್ಲಿ ರಕ್ಷಾ ಬಂಧನ ನಿಮಿತ್ತ ಸಕಲ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರಿ ಬಸ್​​ಗಳನ್ನೆಲ್ಲ ಸ್ವಚ್ಛಗೊಳಿಸಲಾಗುತ್ತಿದೆ. ಆಗಸ್ಟ್​ 10-12ರವರೆಗೆ ಮೀರತ್​, ಸಹರಾನ್​​ಪುರ, ಬರೇಲಿ, ಲಖನೌ, ಕಾನ್ಪುರ, ಗೋರಖ್​​ಪುರ, ಪ್ರಯಾಗ್​ರಾಜ್​ ಮತ್ತು ವಾರಾಣಸಿಗಳಿಗೆ ಹೆಚ್ಚುವರಿ ಬಸ್​ ವ್ಯವಸ್ಥೆಯನ್ನೂ ಮಾಡಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಪತ್ತೆಯಾದ ಈ ತೇಲುವ ಕಲ್ಲು ರಾಮಸೇತುವಿನದ್ದೇ?: ಹೆಚ್ಚಿದ ಕುತೂಹಲ

Exit mobile version