Site icon Vistara News

PM CARES Fund | ಪಿಎಂ ಕೇರ್ಸ್​​ ಫಂಡ್​​ಗೆ ಟ್ರಸ್ಟಿಗಳಾಗಿ ನೇಮಕಗೊಂಡ ರತನ್​ ಟಾಟಾ, ಕರಿಯಾ ಮುಂಡಾ

PM CARES Fund

ನವ ದೆಹಲಿ: ಪಿಎಂ ಕೇರ್ಸ್​ ನಿಧಿ (PM CARES Fund)ಗೆ ಟ್ರಸ್ಟಿಗಳನ್ನಾಗಿ ಟಾಟಾ ಸನ್ಸ್​ ಮಾಜಿ ಅಧ್ಯಕ್ಷ, ಹಿರಿಯ ಉದ್ಯಮಿ ರತನ್​ ಟಾಟಾ, ಸುಪ್ರೀಂಕೋರ್ಟ್ ಮಾಜಿ ನ್ಯಾಯಮೂರ್ತಿ ಕೆ.ಟಿ.ಥೋಮಸ್​, ಲೋಕಸಭಾ ಮಾಜಿ ಸ್ಪೀಕರ್​ ಕರಿಯಾ ಮುಂಡಾ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ. ಹಾಗೇ, ಮಾಜಿ ಕಂಟ್ರೋಲರ್​ ಮತ್ತು ಆಡಿಟರ್​ ಜನರಲ್​ ರಾಜೀವ್​ ಮಹರ್ಷಿ, ಇನ್​ಫೋಸಿಸ್​ ಫೌಂಡೇಶನ್​​ ಮಾಜಿ ಅಧ್ಯಕ್ಷೆ ಸುಧಾಮೂರ್ತಿ, ಟೆಕ್​ ಫಾರ್ ಇಂಡಿಯಾದ ಸಹ ಸಂಸ್ಥಾಪಕ ಆನಂದ್​ ಶಾ ಅವರನ್ನು ಪಿಎಂ ಕೇರ್ಸ್​​ನ ಸಲಹಾ ಮಂಡಳಿಗೆ ನಾಮನಿರ್ದೇಶನ ಮಾಡಿದ್ದಾಗ್ಯೂ ಸರ್ಕಾರ ಮಾಹಿತಿ ನೀಡಿದೆ.

ಪಿಎಂ ಕೇರ್ಸ್​ ಫಂಡ್​​ನ ಟ್ರಸ್ಟಿಗಳ ಮಂಡಳಿ ಸಭೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದಿತ್ತು. ಅದರ ಬೆನ್ನಲ್ಲೇ ಸರ್ಕಾರ ಹೊಸ ಟ್ರಸ್ಟಿಗಳ ನೇಮಕಾತಿ ಬಗ್ಗೆ ಪ್ರಕಟಣೆ ಹೊರಡಿಸಿದೆ. ಹೊಸದಾಗಿ ನಾಮನಿರ್ದೇಶನಗೊಂಡ ಟ್ರಸ್ಟಿಗಳೂ ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಅವರನ್ನು ಪ್ರಧಾನಿ ಮೋದಿ ಆದರದಿಂದ ಸ್ವಾಗತಿಸಿದರು ಎಂದು ಹೇಳಲಾಗಿದೆ.

ಪಿಎಂ ಕೇರ್ಸ್​ (PM CARES- Prime Minister’s Citizen Assistance and Relief in Emergency Situations Fund) ಎಂಬುದು ತುರ್ತು ಸಂದರ್ಭಗಳಲ್ಲಿ ನಾಗರಿಕರಿಗೆ ಹಣದ ನೆರವು ಮತ್ತು ಪರಿಹಾರ ನೀಡುವ ಸಲುವಾಗಿ ಪ್ರಾರಂಭವಾದ ಒಂದು ನಿಧಿ. 2020ರಲ್ಲಿ ಮಾರ್ಚ್​ 27ರಂದು ಇದು ಸ್ಥಾಪಿತವಾಗಿದೆ. ಕೊವಿಡ್​ 19 ಸಾಂಕ್ರಾಮಿಕ ರೋಗ ಪ್ರಾರಂಭವಾದ ಸಂದರ್ಭದಲ್ಲಿ ಪಿಎಂ ಕೇರ್ಸ್​ ಶುರು ಮಾಡಲಾಗಿದೆ. ಈಗಿರುವ ಕೊರೊನಾ ವಿರುದ್ಧದ ಮತ್ತು ಮುಂದಿನ ದಿನಗಳಲ್ಲಿ ಬರಬಹುದಾದ ಇಂಥ ಸಾಂಕ್ರಾಮಿಕಗಳ ವಿರುದ್ಧದ ಹೋರಾಟ, ಇದರ ಮಧ್ಯೆ ಬರಬಹುದಾದ ತುರ್ತು ಸನ್ನಿವೇಶಗಳನ್ನು ನಿಭಾಯಿಸಲು ಈ ನಿಧಿ ಸಹಾಯಕ್ಕೆ ಬರಲಿದೆ. ಹಾಗೇ, ಇದರಡಿ ಮಕ್ಕಳ ಶಿಕ್ಷಣಕ್ಕಾಗಿಯೂ ಯೋಜನೆ ರೂಪಿಸಲಾಗಿದೆ.

ಪಿಎಂ ಕೇರ್ಸ್​ ಫಂಡ್​​ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷರಾಗಿದ್ದು, ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್​, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸದಸ್ಯರಾಗಿದ್ದಾರೆ. ವ್ಯಕ್ತಿಗಳು, ವಿವಿಧ ಸಂಸ್ಥೆಗಳು ಈ ನಿಧಿಗೆ ಕೊಡುಗೆ ಕೊಡುತ್ತಿದ್ದಾರೆಯೇ ಹೊರತು ಕೇಂದ್ರ ಸರ್ಕಾರ ಬಜೆಟ್​​ನಲ್ಲಿ ಹಣ ಮೀಸಲಿಡುವುದಿಲ್ಲ.

ಇದನ್ನೂ ಓದಿ: PM Cares : ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಆರೈಕೆಗೆ, ಪಿಎಂ ಕೇರ್ಸ್‌ ಯೋಜನೆಯ ಸೌಲಭ್ಯ ವಿತರಣೆ

Exit mobile version