Site icon Vistara News

ಭಾರತ್​ ಜೋಡೋ ಯಾತ್ರೆಗೆ ಆರ್​ಬಿಐ ಮಾಜಿ ಗವರ್ನರ್​ ರಘುರಾಮ್​ ರಾಜನ್​ ಸಾಥ್; ರಾಹುಲ್​ ಗಾಂಧಿಯೊಂದಿಗೆ ಕಾಲ್ನಡಿಗೆ

RBI ex Governor Joins Bharat Jodo Yatra In Rajasthan

ಜೈಪುರ: ಆರ್​ಬಿಐ (ಭಾರತೀಯ ರಿಸರ್ವ್​ ಬ್ಯಾಂಕ್​) ಮಾಜಿ ಗವರ್ನರ್​ ರಘುರಾಮ್​ ರಾಜನ್​​ ಅವರು ಇಂದು ಬೆಳಗ್ಗೆ ಭಾರತ್​ ಜೋಡೋ ಯಾತ್ರೆಯಲ್ಲಿ, ರಾಹುಲ್​ ಗಾಂಧಿಯವರೊಂದಿಗೆ ಪಾದಯಾತ್ರೆ ನಡೆಸಿದರು. ಕಾಂಗ್ರೆಸ್​​ನ ಭಾರತ್​ ಜೋಡೋ ಯಾತ್ರೆ ಸದ್ಯ ರಾಜಸ್ಥಾನದ ಸವಾಯಿ ಮಾಧೋಪುರದ ಭಡೋತಿ ಎಂಬಲ್ಲಿ ನಡೆಯುತ್ತಿದೆ. ಇಂದು ಮುಂಜಾನೆ ರಾಹುಲ್​ ಗಾಂಧಿ ನೇತೃತ್ವದಲ್ಲಿ ಕಾಲ್ನಡಿಗೆ ಪ್ರಾರಂಭವಾದ ಕೆಲವೇ ಹೊತ್ತಲ್ಲಿ, ರಘುರಾಮ್​ ರಾಜನ್ ಯಾತ್ರೆಯನ್ನು ಕೂಡಿಕೊಂಡಿದ್ದಾರೆ.

ರಾಹುಲ್ ಗಾಂಧಿ ಮತ್ತು ರಘುರಾಮ್​ ರಾಜನ್​ ಅವರಿಬ್ಬರೂ ಒಟ್ಟಿಗೇ ನಡೆಯುತ್ತಿರುವ ಫೋಟೋ ಶೇರ್​ ಮಾಡಿದ ಕಾಂಗ್ರೆಸ್​ ‘ದ್ವೇಷದ ವಿರುದ್ಧ ದೇಶವನ್ನು ಒಗ್ಗೂಡಿಸುವವರ ಜತೆ ಬೆಂಬಲವಾಗಿ ನಿಲ್ಲುವವರ ಸಂಖ್ಯೆ ಹೆಚ್ಚುತ್ತಿದೆ. ಅಂದರೆ ನಾವು ನಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತಿದ್ದೇವೆ ಎಂದೇ ಅರ್ಥ’ ಎಂದು ಕ್ಯಾಪ್ಷನ್​ ಬರೆದಿದೆ. ರಘುರಾಮ್ ರಾಜನ್​ ಅವರು 2013ರಿಂದ 2016ರವರೆಗೆ ಭಾರತೀಯ ರಿಸರ್ವ್​ ಬ್ಯಾಂಕ್​​ನ ಗವರ್ನರ್​ ಆಗಿದ್ದರು. 2016ರಲ್ಲಿ ಹಲವು ಆರೋಪಗಳನ್ನು ಹೊತ್ತು ಅವರು ತಮ್ಮ ಸ್ಥಾನದಿಂದ ನಿರ್ಗಮಿಸಿದ್ದರು. ಬಿಜೆಪಿ ನಾಯಕ ಸುಬ್ರಹ್ಮಣಿಯನ್​ ಸ್ವಾಮಿ ಅವರು ರಘುರಾಮ್​ ರಾಜನ್​ ವಿರುದ್ಧ ‘ಗೌಪ್ಯ ಮಾಹಿಸಿ ಸೋರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳಿಗೆ ಬಡ್ಡಿದರ ಹೆಚ್ಚಳ’ ಇತ್ಯಾದಿ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ರಘುರಾಮ್​ ರಾಜನ್​ ಗವರ್ನರ್​ ಹುದ್ದೆ ತ್ಯಜಿಸಿದ ಬಳಿಕವೂ ಹಲವು ಬಾರಿ ಕೇಂದ್ರ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರೀಗ ಕಾಂಗ್ರೆಸ್​ನ ಭಾರತ್ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ.

ಭಾರತ್​ ಜೋಡೋ ಯಾತ್ರೆ ರಾಜಸ್ಥಾನದಲ್ಲಿ 10ದಿನಗಳಿಂದ ನಡೆಯುತ್ತಿದೆ. ಕಾಂಗ್ರೆಸ್​ ಸರ್ಕಾರವೇ ಇರುವ ರಾಜಸ್ಥಾನದಲ್ಲಿ ಯಾತ್ರೆಗೆ ದೊಡ್ಡಮಟ್ಟದ ಬೆಂಬಲವೂ ವ್ಯಕ್ತವಾಗುತ್ತಿದೆ. ಭಡೋತಿಯಲ್ಲಿ ಇಂದು 25 ಕಿಮೀ ದೂರ ಕ್ರಮಿಸಲಿರುವ ಭಾರತ್​ ಜೋಡೋ ಯಾತ್ರೆ, ನಾಳೆ ದೌಸಾ ಜಿಲ್ಲೆ ಪ್ರವೇಶ ಮಾಡಲಿದೆ. ಪ್ರಮುಖ ನಾಯಕರಾದ ಗೋವಿಂದ್ ದೋಟಸಾರಾ, ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಮತ್ತಿತರರು ರಾಹುಲ್​ ಗಾಂಧಿಯವರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.

ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆ ಸೇರಿಕೊಂಡ ಆದಿತ್ಯ ಠಾಕ್ರೆ; ರಾಹುಲ್​ ಗಾಂಧಿ ಪಕ್ಕದಲ್ಲಿ ಹೆಜ್ಜೆಹಾಕಿದ ಉದ್ಧವ್​ ಪುತ್ರ

Exit mobile version