Site icon Vistara News

6 ಜನರಿಗೆ ಜೀವದಾನ ಮಾಡಿದ್ದ ಎಸ್​ಎಸ್​ಎಲ್​ಸಿ ಹುಡುಗ; ಆತನ ಪರೀಕ್ಷೆ ರಿಸಲ್ಟ್​​ ಹೇಳುವಾಗ ಕಣ್ಣೀರು ಹಾಕಿದ ಸಚಿವ

Sarang Who Died in Road Accident In Kerala scores full A Plus in SSLC

#image_title

ಕೇರಳದಲ್ಲಿ ಇತ್ತೀಚೆಗಷ್ಟೇ ರಸ್ತೆ ಅಪಘಾತದಲ್ಲಿ ಮೃತಪಟ್ಟು, ಸಾವಿನ ಬಳಿಕ ಅಂಗಾಂಗ ದಾನ (Organ Donation) ಮಾಡಿದ್ದ 16ವರ್ಷದ ಹುಡುಗ ಸಾರಂಗ್​​ ಅವರ ಎಸ್​ಎಸ್ಎಲ್​ಸಿ ಫಲಿತಾಂಶ (Kerala SSLC Boy) ಹೊರಬಿದ್ದಿದ್ದು, ಎಲ್ಲ ವಿಷಯಗಳಲ್ಲೂ ಆತ ಎ ಪ್ಲಸ್​ ಪಡೆದಿದ್ದಾನೆ. ಈ ಮೃತ ವಿದ್ಯಾರ್ಥಿಯ ಎಸ್​ಎಸ್​ಎಲ್​ಸಿ ಫಲಿತಾಂಶವನ್ನು ಕೇರಳದ ಸಾಮಾನ್ಯ ಶಿಕ್ಷಣ ಸಚಿವ ವಿ.ಶಿವಕುಟ್ಟಿ ಅವರು ಶುಕ್ರವಾರ ಕಣ್ಣೀರು ಹಾಕುತ್ತ ಪ್ರಕಟಿಸಿದ್ದಾರೆ.

ಸಾರಂಗ್​ ಚೆನ್ನಾಗಿ ಓದಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದ. ಆದರೆ ರಿಸಲ್ಟ್ ಬರುವುದಕ್ಕೂ ಮುನ್ನ ಜೀವನ ಮುಗಿಸಿದ್ದ. ಅಂದಹಾಗೇ ಇವನು ಅತ್ತಿಂಗಲ್​ ಹುಡುಗರ ಶಾಲೆಯಲ್ಲಿ ಓದುತ್ತಿದ್ದು, ಪ್ರತಿಭಾವಂತ ಎನ್ನಿಸಿಕೊಂಡಿದ್ದ. ಮೇ 6ರಂದು ಅಮ್ಮನೊಂದಿಗೆ ತೊಟ್ಟಕಾಡ್ ವಡಕೊಟ್ಟುಕಾವುನಲ್ಲಿರುವ ಕುನ್ನತುಕೋಣಂ ಬಳಿ ಆಟೋರಿಕ್ಷಾದಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿತ್ತು. ಆಟೋ ರಿಕ್ಷಾ ಉರುಳಿಬಿದ್ದಿತ್ತು. ಅದರಲ್ಲಿದ್ದವರಲ್ಲಿ ಸಾರಂಗ್​ ಹೆಚ್ಚು ಗಾಯಗೊಂಡಿದ್ದ. ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು. ಆದರೆ ಮಿದುಳು ನಿಷ್ಕ್ರಿಯಗೊಂಡಿತ್ತು. ಕುಟುಂಬದವರು ಒಪ್ಪಿ ಅವನ ಅಂಗಾಂಗ ದಾನ ಮಾಡಿದ್ದರು. ಆರು ಮಂದಿಗೆ ಅವನು ಜೀವ ಕೊಟ್ಟಿದ್ದ.

ಇದನ್ನೂ ಓದಿ: SSLC Result: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ; ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

ಶುಕ್ರವಾರ ಸಾರಂಗ್​​ನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಹೇಳುವಾಗ ಸಚಿವರು ಕಣ್ಣಲ್ಲಿ ನೀರು ಹಾಕಿದ್ದಾರೆ. ತುಂಬ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ‘ಸಾರಂಗ್​ ಅತ್ಯುತ್ತಮ ಫೂಟ್​ಬಾಲ್ ಆಟಗಾರನೂ ಆಗಿದ್ದ. ಅವನು ರಿಕ್ಷಾದಲ್ಲಿ ಹೋಗುತ್ತಿದ್ದಾಗ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಜೀವ ಹೋದ ಮೇಲೆ ಕೂಡ ಅದ್ಭುತ ಕೆಲಸ ಮಾಡಿದ್ದಾನೆ. ಅವನು 6 ಮಂದಿಗೆ ಅಂಗಾಂಗ ದಾನ ಮಾಡಿದ್ದಾನೆ. ಇಂಥದ್ದೊಂದು ನಿರ್ಧಾರ ತೆಗೆದುಕೊಂಡ ಬಾಲಕನ ಕುಟುಂಬಕ್ಕೆ ನನ್ನ ಧನ್ಯವಾದ, ಮೆಚ್ಚುಗೆ ಸೂಚಿಸುತ್ತೇನೆ’ ಎಂದಿದ್ದಾರೆ.

ಸಾರಂಗ್​ನ ಹುಟ್ಟೂರು ನಿಕುಂಜಮ್​. ಅಪಘಾತದಲ್ಲಿ ಗಾಯಗೊಂಡು, ಮಿದುಳು ನಿಷ್ಕ್ರಿಯಗೊಂಡಿದ್ದ ಅವನನ್ನು ಮೇ 6ರಂದು ಮೃತ ಎಂದು ಘೋಷಿಸಲಾಯಿತು. ಅಪ್ಪ-ಅಮ್ಮನ ಒಪ್ಪಿಗೆ ಮೇರೆಗೆ ಯಾವೆಲ್ಲ ಅಂಗ ದಾನ ಮಾಡಲು ಸಾಧ್ಯವಾಗುತ್ತಿತ್ತೋ, ಅದನ್ನೆಲ್ಲ ದಾನ ಮಾಡಲಾಯಿತು. ಈತನ ಪುಟ್ಟ ಹೃದಯ, ಕೊಟ್ಟಾಯಂನ ಒಂದು ಪುಟ್ಟ ಮಗುವಿನ ದೇಹವನ್ನು ಸೇರಿದೆ. ಫುಟ್​ಬಾಲ್​​ನಲ್ಲಿ ಪಳಗಿದ್ದ ಈತ ಅದರ ಕೋಚಿಂಗ್​ ಕೂಡ ಪಡೆಯುತ್ತಿದ್ದ. ಕಣ್ಣಲ್ಲಿ ನೂರು ಕನಸಿದ್ದು, ಅದರ ಸಾಕಾರಕ್ಕೆ ಅಗತ್ಯ ಪ್ರತಿಭೆಯಿದ್ದರೂ ವಿಧಿ ಎದುರು ಸೋತಿದ್ದ ಈ ಹುಡುಗ.

Exit mobile version