Site icon Vistara News

ವಂಚಕನ ಜತೆ ಮಗನೂ ಪೊಲೀಸರಿಗೆ ಸಿಕ್ಕಿಬಿದ್ದ; ಮುಖ್ಯಮಂತ್ರಿ ಕಚೇರಿಯಲ್ಲಿ ಅಧಿಕಾರಿಯಾಗಿದ್ದ ಅಪ್ಪ ಕೆಲಸ ಕಳೆದುಕೊಂಡ

Senior Government Official Resigns After Conman kiran Patel Arrested

#image_title

ಪ್ರಧಾನಿ ಕಾರ್ಯಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಎಂದು ಹೇಳಿಕೊಂಡು, ವಂಚಿಸುತ್ತಿದ್ದ ಗುಜರಾತ್​​ ಮೂಲದ ಕಿರಣ್​ ಜೆ ಪಟೇಲ್​ (Conman Kiran Patel) ಎಂಬಾತನನ್ನು ಶ್ರೀನಗರದ ಪಂಚತಾರಾ ಹೋಟೆಲ್​​​ನಲ್ಲಿ ಪೊಲೀಸರು ವಾರದ ಹಿಂದೆ ಬಂಧಿಸಿದ್ದರು. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಈಗ ಮತ್ತೊಂದು ಬೆಳವಣಿಗೆಯಾಗಿದೆ. ಈ ಕಿರಣ್​ ಜೆ ಪಟೇಲ್​ ವಂಚನೆಯಲ್ಲಿ ಪಾಲುದಾರನಾದ ಅಮಿತ್​ ಪಾಂಡ್ಯಾ ಎಂಬಾತನ ತಂದೆ ಹಿತೇಶ್​ ಪಾಂಡ್ಯಾ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಯಾಗಿದ್ದ ಹಿತೇಶ್ ಪಾಂಡ್ಯಾ, ತಮ್ಮ ಪುತ್ರನ ವಂಚನೆಯ ಕಾರಣಕ್ಕೇ ಉದ್ಯೋಗಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿದೆ.

ಗುಜರಾತ್​​ನ ಕಿರಣ್​ ಜೆ ಪಟೇಲ್​ ಕಾಶ್ಮೀರದಲ್ಲಿರುವ ಹಲವು ಪ್ರವಾಸಿ ತಾಣಗಳಿಗೆ ಭೇಟಿಕೊಟ್ಟಿದ್ದ. ತಾನು ಪ್ರಧಾನಿ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದೇನೆ. ಕೇಂದ್ರ ಸರ್ಕಾರ ವತಿಯಿಂದ ಪ್ರವಾಸಿ ತಾಣಗಳ ಹೋಟೆಲ್​​ ವ್ಯವಸ್ಥೆಯನ್ನು ಪರಿಶೀಲಿಸಲು ಬಂದಿದ್ದೇನೆ ಎನ್ನುತ್ತಿದ್ದ. ಅದೆಷ್ಟರ ಮಟ್ಟಿಗೆ ವಂಚಿಸಿದ್ದ ಎಂದರೆ, ಈ ವ್ಯಕ್ತಿ ಜಮ್ಮು-ಕಾಶ್ಮೀರದ ಭೇಟಿ ವೇಳೆ ಝಡ್​ ಪ್ಲಸ್​ ಭದ್ರತೆ ಪಡೆದಿದ್ದ. ಬುಲೆಟ್​ಪ್ರೂಫ್​ ಎಸ್​ಯುವಿ ಮತ್ತು ಜಮ್ಮು-ಕಾಶ್ಮಿರದ ಫೈವ್​ ಸ್ಟಾರ್ ಹೋಟೆಲ್​​ನಲ್ಲಿ ವಸತಿ ವ್ಯವಸ್ಥೆ ಸಿಕ್ಕಿತ್ತು. ಸರ್ಕಾರದ ಹಣದಲ್ಲಿ ಭರ್ಜರಿ ಎಂಜಾಯ್​ ಮಾಡುತ್ತಿದ್ದ. ಇವನು ತಾನು ಹೋದ ಸ್ಥಳಗಳ ಫೋಟೋ ಹಾಕುತ್ತಿದ್ದ. ಅವನ ಅಕ್ಕಪಕ್ಕದಲ್ಲಿ ಭದ್ರತಾ ಸಿಬ್ಬಂದಿ ಇರುತ್ತಿದ್ದರು. ಟ್ವಿಟರ್​ ಅಕೌಂಟ್​ ಕೂಡ ವೆರಿಫಿಕೇಶನ್​ ಆಗಿತ್ತು. ಆದರೂ ಕೆಲವು ನಡೆಗಳು ಅನುಮಾನಾಸ್ಪದವಾಗಿ ಇದ್ದಿದ್ದರಿಂದ ಜಮ್ಮು-ಕಾಶ್ಮೀರ ಸಿಐಡಿ ತನಿಖೆ ಕೈಗೆತ್ತಿಕೊಂಡು, ಅಂತಿಮವಾಗಿ ವಂಚಕನನ್ನು ಬಂಧಿಸಲಾಗಿತ್ತು. ಹೀಗೆ ಕಿರಣ್​​ ಪಟೇಲ್​ ತನ್ನದೇ ಆದ ಒಂದು ನಕಲಿ ಅಧಿಕಾರಿಗಳ ತಂಡವನ್ನು ರಚಿಸಿಕೊಂಡಿದ್ದ. ಆ ನಕಲಿ ಅಧಿಕಾರಿಗಳ ತಂಡದಲ್ಲಿ ಅಮಿತ್​ ಪಾಂಡ್ಯಾ ಕೂಡ ಇದ್ದ. ಈಗ ಮಗ ಮಾಡಿದ ತಪ್ಪಿಗೆ ಅಪ್ಪ ಹಿತೇಶ್ ಪಾಂಡ್ಯಾ ಬೆಲೆ ತೆತ್ತಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಕಾರ್ಯಾಲಯದ ಅಧಿಕಾರಿಯೆಂದು ಕಾಶ್ಮೀರದಲ್ಲಿ ಝಡ್​ ಪ್ಲಸ್​ ಭದ್ರತೆ ಪಡೆದಿದ್ದವ ಅರೆಸ್ಟ್​; ಇವನೆಂಥಾ ಸ್ಮಾರ್ಟ್​ ವಂಚಕ!

ಹಿತೇಶ್ ಪಾಂಡ್ಯಾ ಅವರು ಗುಜರಾತ್​ ಮುಖ್ಯಮಂತ್ರಿ ಕಾರ್ಯಾಲಯದಲ್ಲಿ 2001ರಿಂದಲೂ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO)ಆಗಿ ಕೆಲಸ ಮಾಡುತ್ತಿದ್ದರು. ಮಾ.24ರಂದು ಸಂಜೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ‘ಕಿರಣ್​ ಪಟೇಲ್​ ವಂಚನೆ ಪ್ರಕರಣದಲ್ಲಿ ನನ್ನ ಮಗ ಖಂಡಿತವಾಗಿಯೂ ತಪ್ಪು ಮಾಡಿಲ್ಲ. ಅವನೊಬ್ಬ ಅಮಾಯಕ. ಹಾಗಿದ್ದಾಗ್ಯೂ ಅವನ ಹೆಸರು ಕೇಳಿಬಂದಿದೆ. ಪ್ರಧಾನಿ ಕಾರ್ಯಾಲಯ ಮತ್ತು ಗುಜರಾತ್ ಮುಖ್ಯಮಂತ್ರಿ ಕಚೇರಿಗೆ ಕಳಂಕ ತರಲು ನನಗೆ ಇಷ್ಟವಿಲ್ಲ. ಹೀಗಾಗಿ ರಾಜೀನಾಮೆ ಕೊಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಕಿರಣ್​ ಪಟೇಲ್​​ ಜಮ್ಮು-ಕಾಶ್ಮೀರಕ್ಕೆ ಹೋಗಿದ್ದಾಗ ಪಂಚತಾರಾ ಹೋಟೆಲ್​​ನಲ್ಲಿ ಉಳಿದು, ಐಷಾರಾಮಿ ಸೌಕರ್ಯ ಪಡೆದಿದ್ದ. ಅವನೊಂದಿಗೆ ಈ ಅಮಿತ್​ ಹಿತೇಶ್ ಪಾಂಡ್ಯಾ, ಜಯ ಸೀತಾಪಾರಾ ಮತ್ತು ರಾಜಸ್ಥಾನದ ತ್ರಿಲೋಕ್​ ಸಿಂಗ್​ ಕೂಡ ಇದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇವರನ್ನೂ ಕೂಡ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

Exit mobile version