Site icon Vistara News

Himachal Pradesh Election | ಹಿಮಾಚಲ ಪ್ರದೇಶ ಚುನಾವಣೆಗೆ 4 ದಿನ ಬಾಕಿ ಇರುವಾಗ ಕಾಂಗ್ರೆಸ್​ಗೆ ಬಹುದೊಡ್ಡ ಆಘಾತ

Himachal Pradesh Election

ನವ ದೆಹಲಿ: ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ನವೆಂಬರ್​ 12ರಂದು ನಡೆಯಲಿದೆ. ಚುನಾವಣೆಗೆ ನಾಲ್ಕೇ ದಿನ ಬಾಕಿ ಇರುವಾಗ ಕಾಂಗ್ರೆಸ್​ಗೆ ಬಹುದೊಡ್ಡ ಹಿನ್ನಡೆಯಾಗಿದೆ. ಅಲ್ಲಿನ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್ ಠಾಕೂರ್​ ಖಾಂಡ್ ಸೇರಿ ಒಟ್ಟು 26 ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್​ ಠಾಕೂರ್ ಮತ್ತು ಶಿಮ್ಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜಯ್​ ಸೂದ್​, ಬಿಜೆಪಿ ನಾಯಕ ಸುಧಾನ್ ಸಿಂಗ್​ ಸಮ್ಮುಖದಲ್ಲಿ 26 ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿದ್ದಾರೆ.

ಒಂದೆಡೆ ಕಾಂಗ್ರೆಸ್​ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಪಕ್ಷಸಂಘಟನೆ, ತಳಮಟ್ಟದಿಂದ ಪಕ್ಷವನ್ನು ಬಲಪಡಿಸುವ ಸಲುವಾಗಿಯೇ ಈ ಯಾತ್ರೆ ನಡೆಯುತ್ತಿದೆ. ಆದರೆ ಆ ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇನ್ನು ಹಿಮಾಚಲ ಪ್ರದೇಶ ಚುನಾವಣೆಗೆ ಬಿಜೆಪಿ ಭರದಿಂದ ಸಿದ್ಧತೆ ನಡೆಸುತ್ತಿದೆ. ಹಾಗೇ, ಆಮ್​ ಆದ್ಮಿ ಪಕ್ಷವೂ ಚುನಾವಣಾ ಕಣಕ್ಕೆ ಧುಮುಕಿದೆ. ಈ ಮಧ್ಯೆ ಕಾಂಗ್ರೆಸ್​ನಿಂದ ಇಷ್ಟೊಂದು ಸಂಖ್ಯೆಯಲ್ಲಿ ಪ್ರಮುಖರು ಬಿಜೆಪಿ ಸೇರಿದ್ದು ಆ ಪಕ್ಷಕ್ಕೆ ಎದುರಾದ ದೊಡ್ಡ ಆಘಾತ ಎನ್ನಿಸಿದೆ.

ಇನ್ನು ಕಾಂಗ್ರೆಸ್ ನಾಯಕರನ್ನು ಬರಮಾಡಿಕೊಂಡ ಬಳಿಕ ಟ್ವೀಟ್ ಮಾಡಿದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್​ ಠಾಕೂರ್​ ‘ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ತಂದುಕೊಡಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ’ ಎಂದು ಹೇಳಿದರು.

ಇದನ್ನೂ ಓದಿ: Opinion Poll | ಗುಜರಾತ್‌, ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿಗೇ ಅಧಿಕಾರ? ಸಮೀಕ್ಷೆ ಹೇಳುವುದೇನು?

Exit mobile version