Site icon Vistara News

ಅದಾನಿ-ಅಂಬಾನಿ ವಿಷಯಕ್ಕೆ ಕೇಂದ್ರ ಸರ್ಕಾರವನ್ನು ಟೀಕಿಸಬೇಡಿ ಎಂದ ಶರದ್​ ಪವಾರ್​; ಆಸೆಬುರುಕ ಎಂದ ಕಾಂಗ್ರೆಸ್ ನಾಯಕಿ

Sharad Pawar takes back his resignation as the national president of NCP.

ಶರದ್‌ ಪವಾರ್

ನವದೆಹಲಿ: ಕಾಂಗ್ರೆಸ್​​ನಲ್ಲಿ ರಾಹುಲ್ ಗಾಂಧಿ (Rahul Gandhi) ಸೇರಿ ಇನ್ನಿತರ ಹಲವು ನಾಯಕರು ಕೇಂದ್ರ ಸರ್ಕಾರವನ್ನು ಟೀಕಿಸಲು ಉದ್ಯಮಿಗಳಾದ ಗೌತಮ್​ ಅದಾನಿ, ಮುಕೇಶ್ ಅಂಬಾನಿಯವರ ಹೆಸರನ್ನು ಬಳಸಿಕೊಳ್ಳುವುದು ಹೊಸದಲ್ಲ. ಇಂಥ ಉದ್ಯಮಿಗಳಿಗೆ ಮಾತ್ರ ಕೇಂದ್ರ ಸರ್ಕಾರ ಸಹಾಯ ಮಾಡುತ್ತಿದೆ ಎಂಬಲ್ಲಿಂದ ಹಿಡಿದು, ಇತ್ತೀಚೆಗೆ ಅದಾನಿ ಷೇರು ಕುಸಿತವಾದರೂ ಪ್ರಧಾನಿ ಮೋದಿಯವರು ಆ ಬಗ್ಗೆ ಮಾತನಾಡುತ್ತಿಲ್ಲ ಎಂಬಲ್ಲಿವರೆಗೆ ನಿರಂತರವಾಗಿ ಆ ಪಕ್ಷ ವಾಗ್ದಾಳಿ ನಡೆಸುತ್ತಲೇ ಇದೆ.

ಹೀಗೆ ಕಾಂಗ್ರೆಸ್ಸಿಗರು ಸದಾ ಉದ್ಯಮಿಗಳ ಹೆಸರಿನ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿರುವ ಬೆನ್ನಲ್ಲೇ ನ್ಯಾಷನಲಿಸ್ಟ್​ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷ ಶರದ್​ ಪವಾರ್​ ಅವರು ಪ್ರತಿಕ್ರಿಯೆ ನೀಡಿ ‘ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಲು ಅಂಬಾನಿ-ಅದಾನಿ ಹೆಸರುಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ನಾವು ಅವರು ಈ ದೇಶಕ್ಕೆ ನೀಡಿರುವ ಕೊಡುಗೆಗಳನ್ನೂ ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಿರುದ್ಯೋಗ, ಬೆಲೆ ಏರಿಕೆ ಮತ್ತು ರೈತರ ಸಮಸ್ಯೆಗಳಂಥ ಮಹತ್ವದ ವಿಷಯಗಳನ್ನು ಇಟ್ಟುಕೊಂಡು ಪ್ರತಿಪಕ್ಷಗಳು ಆಡಳಿತದಲ್ಲಿರುವ ಸರ್ಕಾರವನ್ನು ಹಣಿಯಬೇಕು’ ಎಂದು ಹೇಳಿದ್ದರು.

ಶರದ್ ಪವಾರ್​ ಅವರ ಈ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್​​ನ ವಕ್ತಾರೆ ಅಲ್ಕಾ ಲಂಬಾ ಅವರು ಟ್ವೀಟ್​ ಮಾಡಿದ್ದಾರೆ. ‘ಇಂದು ಭಯಭೀತರಾದ, ಆಸೆಬುರುಕ ಜನರು, ತಮ್ಮ ಹಿತಾಸಕ್ತಿಗಾಗಿ ದೇಶದ ಸರ್ವಾಧಿಕಾರಿಯನ್ನು ಹಾಡಿ ಹೊಗಳುತ್ತಿದ್ದಾರೆ. ರಾಹುಲ್ ಗಾಂಧಿಯೊಬ್ಬರೇ ಈ ದೇಶದ ಜನರಿಗಾಗಿ ದುಡಿಯುತ್ತಿದ್ದಾರೆ. ಬಂಡವಾಳಶಾಹಿ ಕಳ್ಳರು ಮತ್ತು ಅವರನ್ನು ರಕ್ಷಣೆ ಮಾಡುತ್ತಿರುವ ವಾಚ್​​ಮನ್​ಗಳ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗೇ, ಅದಾನಿ ಮತ್ತು ಶರದ್​ ಪವಾರ್​ ಜತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಅಲ್ಕಾ ಲಂಬಾ ಅವರ ಟ್ವೀಟ್​​ಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​​ ತಿರುಗೇಟು ಕೊಟ್ಟಿದ್ದಾರೆ. ‘ರಾಜಕೀಯ ಇಂದಿರುತ್ತದೆ, ನಾಳೆ ಹೋಗುತ್ತದೆ. ಆದರೆ 35ವರ್ಷಗಳಿಂದಲೂ ಕಾಂಗ್ರೆಸ್​ಗೆ ಬೆಂಬಲಿಸುತ್ತಿರುವ, ಭಾರತದ ಅತ್ಯಂತ ಹಿರಿಯ ರಾಜಕೀಯ ನಾಯಕರಲ್ಲಿ ಒಬ್ಬರಾಗಿರುವ, ಮಹಾರಾಷ್ಟ್ರದಲ್ಲಿ 4 ಬಾರಿ ಮುಖ್ಯಮಂತ್ರಿಯಾಗಿದ್ದ ಶರದ್​ಪವಾರ್​ ಬಗ್ಗೆ ಕಾಂಗ್ರೆಸ್​ನವರು ಇಂಥ ಟ್ವೀಟ್ ಮಾಡಿದ್ದು ನಿಜಕ್ಕೂ ಆಘಾತಕಾರಿಯಾಗಿದೆ. ರಾಹುಲ್ ಗಾಂಧಿಯವರು ಭಾರತದ ರಾಜಕಾರಣದ ಸಂಸ್ಕೃತಿಯನ್ನು ವಿಕೃತಿಗೊಳಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

Exit mobile version