Site icon Vistara News

ಭಾರತ-ಚೀನಾ ಗಡಿ ಸಂಘರ್ಷ; ಅರುಣಾಚಲ ಪ್ರದೇಶ ಬಾರ್ಡರ್​​ನಲ್ಲಿ ಪರಿಸ್ಥಿತಿ ಸ್ಥಿರವಾಗಿದೆ ಎಂದ ಚೀನಾ

China Army

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್​ ಸೆಕ್ಟರ್​​ನ ವಾಸ್ತವಿಕ ಗಡಿ ನಿಯಂತ್ರಣಾ ರೇಖೆ ಬಳಿ ಸದ್ಯ ಪರಿಸ್ಥಿತಿ ಸ್ಥಿರ-ಸಮತೋಲಿತವಾಗಿದೆ ಎಂದು ಚೀನಾ ಹೇಳಿದ್ದಾಗಿ ಎಪಿಎಫ್​ ವರದಿ ಮಾಡಿದೆ. ತವಾಂಗ್​​ ಸೆಕ್ಟರ್​​ನ ಯಾಂಗ್​ಟ್ಸ ಎಂಬಲ್ಲಿ ಡಿಸೆಂಬರ್​ 9ರಂದು ಭಾರತ-ಚೀನಾ ಸೈನಿಕರ ನಡುವೆ ಭಾರಿ ಹೊಡೆದಾಟ ಆಗಿದೆ. ಅಂದು ಚೀನಾ ಸೈನಿಕರು ಭಾರತ ಭೂಭಾಗ ಅತಿಕ್ರಮಿಸಲು ಮುಂದಾದಾಗ ಭಾರತೀಯ ಯೋಧರು ಅವರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಇಂದು ಲೋಕಸಭೆಯಲ್ಲಿ ಹೇಳಿದ್ದಾರೆ.

ಇನ್ನೊಂದೆಡೆ ಚೀನಾದಿಂದಲೂ ಈ ಬಗ್ಗೆ ಪ್ರತಿಕ್ರಿಯೆ ಬಂದಿದ್ದು, ‘ಭಾರತ-ಚೀನಾ ಗಡಿಯಲ್ಲೀಗ ಪರಿಸ್ಥಿತಿ ಸ್ಥಿರವಾಗಿದೆ. ಭಾರತ ಮತ್ತು ಚೀನಾ ದೇಶಗಳು ಈ ಗಡಿ ಸಮಸ್ಯೆ ಬಗ್ಗೆ ರಾಜತಾಂತ್ರಿಕವಾಗಿ ಮತ್ತು ಸೇನಾ ಮಟ್ಟದಲ್ಲಿ ಮಾತುಕತೆ ನಡೆಸಿದ್ದಾವೆ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ವಾಂಗ್​ ವೆನ್​ಬಿನ್​ ತಿಳಿಸಿದ್ದಾರೆ.

ಡಿಸೆಂಬರ್ 9ರಂದು ಅರುಣಾಚಲದ ವಾಸ್ತವ ಗಡಿ ರೇಖೆ(ಎಲ್ಎಸಿ) ಬಳಿಯ ತವಾಂಗ್‌ ಪ್ರದೇಶದ ಯಾಂಗತ್ಸೆ ಎಂಬಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ)ಯ 300ರಿಂದ 400 ಸೈನಿಕರು ಮತ್ತು ಭಾರತದ ಸೈನಿಕರು ಗಡಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ಸಂಘರ್ಷದಲ್ಲಿ ಎರಡೂ ಕಡೆ ಯೋಧರಿಗೂ ಸಣ್ಣಮಟ್ಟದ ಗಾಯಗಳಾಗಿವೆ. ಯಾರದ್ದೂ ಜೀವ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಈಗಾಗಲೇ ತಾವಂಗ್​ ವಲಯದಲ್ಲಿರುವ ಎರಡೂ ಸೇನೆಗಳ ನಡುವೆ ಮಿಲಿಟರಿ ಮಟ್ಟದ ಮಾತುಕತೆ ನಡೆದಿದೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: ವಿಸ್ತಾರ Explainer | ಭಾರತದ ಜತೆ ಚೀನಾ ಗಡಿ ಕಿರಿಕ್‌; ಏನಿದರ ಹಿನ್ನೆಲೆ?

Exit mobile version