Site icon Vistara News

Vande Bharat Express: ದೇಶದ 7ನೇ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿನ ಮೇಲೆ ಮತ್ತು ಕಲ್ಲು ತೂರಾಟ; ಪುಡಿಯಾಯ್ತು ಗಾಜು

Stones pelted On Vande Bharat Express Train

ಭಾರತದ ಏಳನೇ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿನ (Vande Bharat Express) ಮೇಲೆ ಈಗ ಮೂರನೇ ಬಾರಿಗೆ ಕಲ್ಲು ತೂರಾಟವಾಗಿದೆ. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಹೌರಾಹ್​ ರೈಲ್ವೆ ಸ್ಟೇಶನ್​​ನಲ್ಲಿ ಈ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚ್ಯುವಲ್​ ಆಗಿ ಚಾಲನೆ ಕೊಟ್ಟಿದ್ದಾರೆ. ಉದ್ಘಾಟನೆಗೊಂಡ ನಾಲ್ಕು ದಿನಕ್ಕೇ ಈ ರೈಲಿಗೆ ಮಾಲ್ಡಾದ ಕುಮಾರ್​ಗಂಜ್​ ಬಳಿ ದುಷ್ಕರ್ಮಿಗಳು ಕಲ್ಲು ಎಸೆದಿದ್ದರು. ತತ್ಪರಿಣಾಮ ರೈಲಿನ 3ನೇ ಕೋಚ್​​ನ ಬಾಗಿಲಿನ ಗಾಜು ಒಡೆದಿತ್ತು. ಅದಾಗಿ ಎರಡೇ ದಿನಕ್ಕೆ ಮತ್ತೆ ಕಿಶನ್​ಗಂಜ್​ ಬಳಿ ಇದೇ ರೈಲಿನ ಮೇಲೆ ಕಲ್ಲು ಎಸೆಯಲಾಗಿತ್ತು.

ಹೌರಾಹ್​ ಮತ್ತು ನ್ಯೂ ಜಲಪೈಗುರಿ ನಡುವೆ ಸಂಚಾರ ಮಾಡುತ್ತಿರುವ ಈ ರೈಲಿನ ಮೇಲೆ ಈಗ ಮತ್ತೆ 3ನೇ ಸಲ ಕಲ್ಲು ತೂರಾಟವಾಗಿದೆ. ಬಿಹಾರದ ಕಠಿಹಾರದಲ್ಲಿ ಕಿಡಿಗೇಡಿಗಳು ರೈಲಿಗೆ ಕಲ್ಲು ಎಸೆದಿದ್ದು, ಕೋಚ್​ ನಂಬರ್​ 6ರ ಕಿಟಕಿ ಗಾಜು ಒಡೆದಿದೆ. ರೈಲು ಡಾಲ್ಕೋಲಾ ರೈಲ್ವೆ ಸ್ಟೇಶನ್​​ ದಾಟಿ ಹೋಗಿ, ಬಿಹಾರದ ಕಠಿಹಾರದ ಬಲರಾಮ್​ಪುರ ಸಮೀಪ ಹೋಗುತ್ತಿದ್ದಾಗ ಕಲ್ಲು ಎಸೆಯಲಾಗಿದೆ. ಕಲ್ಲು ಬಂದು ಬಡಿದ ಪರಿಣಾಮ ಕಿಟಕಿ ಗಾಜುಗಳು ಒಡೆದಿದ್ದಾಗಿ ಕೋಚ್​ ನಂಬರ್​ 6ರ 70ನೇ ಬರ್ತ್​​​ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರೇ ತಿಳಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟಕ್ಕೆ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.

ಆಂಧ್ರದಲ್ಲೂ ಕಲ್ಲು ಎಸೆಯಲಾಗಿತ್ತು
ಆಂಧ್ರಪ್ರದೇಶದಲ್ಲೂ ವಂದೇ ಭಾರತ್​ ರೈಲಿನ ಮೇಲೆ ಕಲ್ಲು ತೂರಾಟ ಆಗಿದೆ. ಜನವರಿ 19ರಂದು ಪ್ರಧಾನಿ ಮೋದಿ ಚಾಲನೆ ನೀಡಬೇಕಿದ್ದ ರೈಲಿಗೆ ಜನವರಿ 11ರಂದು ದುಷ್ಕರ್ಮಿಗಳು ಕಲ್ಲು ಎಸೆದಿದ್ದರು. ವಿಶಾಖಪಟ್ಟಣಂನ ಕಂಚಾರಪಲೇಂನಲ್ಲಿ ಈ ರೈಲನ್ನು ಸಿಬ್ಬಂದಿ ಪರಿಶೀಲನೆ ಮಾಡುತ್ತಿದ್ದರು. ಆಗಲೇ ಕಲ್ಲು ಎಸೆಯಲಾಗಿತ್ತು. ಇದರಿಂದಾಗಿ ಎರಡು ಕಡೆ ಕಿಟಕಿ ಗಾಜುಗಳು ಒಡೆದಿದ್ದವು.

ಇದನ್ನೂ ಓದಿ: Vande Bharat Express | ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್​ ರೈಲಿನ ಮೇಲೆ ಕಲ್ಲು ತೂರಾಟ; ಹೊಸ ಟ್ರೇನ್​ ಗಾಜು ಪುಡಿಪುಡಿ

Exit mobile version