Site icon Vistara News

Supreme Court: ರೈತರು, ಸರ್ಕಾರದ ಮಧ್ಯೆ ‘ತಟಸ್ಥ ಅಂಪೈರ್’‌ ಬೇಕು; ಸುಪ್ರೀಂ ಕೋರ್ಟ್‌ ಮಹತ್ವದ ಸಲಹೆ

Supreme Court

Supreme Court suggests 'neutral umpires' to bridge government-farmers trust deficit

ನವದೆಹಲಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP Law) ನೀಡುವ ಕುರಿತು ಕಾನೂನು ಜಾರಿಗೊಳಿಸಬೇಕು ಎಂದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಐದಾರು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾತುಕತೆಗೆ ಮುಂದಾಗಿದ್ದ ಕೇಂದ್ರ ಸರ್ಕಾರವು, ಐದು ವರ್ಷಗಳಿಗೆ ಎಂಎಸ್‌ಪಿ ಖಾತರಿ ನೀಡಲಾಗುವುದು ಎಂದಿದೆ. ಆದರೆ, ಇದಕ್ಕೆ ಒಪ್ಪದ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಇನ್ನು, ಆಗಸ್ಟ್‌ 15ರಂದು ದೇಶಾದ್ಯಂತ ಟ್ರ್ಯಾಕ್ಟರ್‌ ರ‍್ಯಾಲಿ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಇದರ ಮಧ್ಯೇಯೇ, “ಸರ್ಕಾರ ಹಾಗೂ ರೈತರ ನಡುವೆ ಇರುವ ನಂಬಿಕೆಯ ಸಮಸ್ಯೆಯನ್ನು ಬಗೆಹರಿಸಲು ತಟಸ್ಥ ಅಂಪೈರ್‌ಗಳು (ನಿರ್ಣಾಯಕರು) ಬೇಕಾಗಿದ್ದಾರೆ” ಎಂದು ಸಲಹೆ ನೀಡಿದೆ.

ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಯಿಂದಾಗಿ ಗಡಿ ಬಂದ್‌ ಆಗಿದ್ದು, ಇದನ್ನು ಓಪನ್‌ ಮಾಡಬೇಕು ಎಂಬುದಾಗಿ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ನೀಡಿದ ನಿರ್ದೇಶನ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿತು. “ರೈತರ ಜತೆ ಸಂಧಾನ ಮಾಡಿಕೊಳ್ಳಲು ಸರ್ಕಾರ ಪ್ರಯತ್ನಿಸಿದೆಯೇ? ಯಾವುದಾದರೂ ಕ್ರಮ ತೆಗೆದುಕೊಂಡಿದೆಯೇ? ಸಚಿವರು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದಾರೆಯೇ? ಸರ್ಕಾರ ಹಾಗೂ ರೈತರ ಮಧ್ಯೆ ನಂಬಿಕೆಯ ಸಮಸ್ಯೆ ಇದೆ. ಇದಕ್ಕಾಗಿ ಕೆಲ ತಟಸ್ಥ ನಿರ್ಣಾಯಕರು ಬೇಕಾಗಿದ್ದಾರೆ” ಎಂದು ಕೋರ್ಟ್‌ ತಿಳಿಸಿತು. ಹಾಗೆಯೇ, ಗಡಿಯಲ್ಲಿ ಯಥಾಸ್ಥಿತಿ ಮುಂದುವರಿಸಬೇಕು ಎಂಬುದಾಗಿ ಪಂಜಾಬ್‌ ಹಾಗೂ ಹರಿಯಾಣ ರಾಜ್ಯ ಸರ್ಕಾರಗಳಿಗೆ ಸೂಚಿಸಿತು. ತಟಸ್ಥ ತೀರ್ಪುಗಾರರು ಇದ್ದರೆ ಹೆಸರು ಸೂಚಿಸಿ ಎಂಬುದಾಗಿಯೂ ಸರ್ಕಾರಗಳಿಗೆ ತಿಳಿಸಿತು.

farmers protest shabhu

ಆಗಸ್ಟ್‌ 15ರಂದು ದೇಶಾದ್ಯಂತ ರ‍್ಯಾಲಿ

ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಆಗಸ್ಟ್‌ 15ರಂದು ದೇಶಾದ್ಯಂತ ಟ್ರ್ಯಾಕ್ಟರ್‌ ರ‍್ಯಾಲಿ ಕೈಗೊಳ್ಳಲಾಗುವುದು ಎಂದು ರಾಹುಲ್‌ ಗಾಂಧಿ ಜತೆ ಮಾತುಕತೆ ನಡೆಸಿದ ಬಳಿಕ ರೈತ ಸಂಘಟನೆಗಳ ನಾಯಕರು ತಿಳಿಸಿದ್ದಾರೆ. ರೈತರು ಕೈಗೊಂಡ ದೆಹಲಿ ಚಲೋ ಹೋರಾಟವು ಆಗಸ್ಟ್‌ 31ಕ್ಕೆ 200 ದಿನ ಪೂರೈಸುತ್ತದೆ. ಹಾಗಾಗಿ, ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೇರಲು ತೀರ್ಮಾನಿಸಲಾಗಿದೆ. ಪಂಜಾಬ್‌ ಹಾಗೂ ಹರಿಯಾಣದ ಗಡಿಗೆ ರೈತರು ಆಗಮಿಸಿ, ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂಬುದಾಗಿ ರೈತ ಸಂಘಟನೆಗಳು ಮನವಿ ಮಾಡಿದವು.

ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಜಾರಿಗೆ ತರಬೇಕು ಎಂಬುದಾಗಿ ರೈತರು ಪಟ್ಟು ಹಿಡಿದಿದ್ದಾರೆ. ಇದರ ಮಧ್ಯೆಯೇ, ದ್ವಿದಳ ಧಾನ್ಯಗಳು, ಜೋಳ, ಹತ್ತಿ ಸೇರಿ ಹಲವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಕುರಿತು ಹೊಸ ಸಮಿತಿ ರಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು. ಹಾಗೆಯೇ, ರೈತರಿಂದ ಕೃಷಿ ಉತ್ಪನ್ನಗಳ ಖರೀದಿಗೆ ಯಾವುದೇ ಮಿತಿ ಇರುವುದಿಲ್ಲ ಹಾಗೂ ಖರೀದಿಗಾಗಿ ವೆಬ್‌ ಪೋರ್ಟಲ್‌ ಅಭಿವೃದ್ಧಿಪಡಿಸಲಾಗುತ್ತದೆ ಎಂಬುದು ಸೇರಿ ಕೇಂದ್ರ ಸರ್ಕಾರವು ರೈತರಿಗೆ ಹಲವು ಆಫರ್‌ ನೀಡಿತ್ತು.

ಮುಂದಿನ ಐದು ವರ್ಷಗಳಿಗೆ ಕನಿಷ್ಠ ಬೆಂಬಲ ಬೆಲೆಯ ಖಾತ್ರಿಯೂ ಕೇಂದ್ರದ ಆಫರ್‌ಗಳಲ್ಲಿ ಸೇರಿತ್ತು. ಆದರೆ, ಕೇಂದ್ರ ಸರ್ಕಾರದ ಆಫರ್‌ ತಿರಸ್ಕರಿಸಿದ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: Assembly Session 2024: ಕಾಲುವೆಗಳ ಕೊನೇ ಭಾಗದ ರೈತರಿಗೆ ನೀರು ಖಾತರಿ; ನೀರಾವರಿ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ

Exit mobile version