Site icon Vistara News

ಹಿಂದುಗಳೇ ಇರುವ ಇಡೀ ಹಳ್ಳಿಯನ್ನು ಕಬಳಿಸಿದ ವಕ್ಫ್​ ಬೋರ್ಡ್​; ಸಂಪೂರ್ಣ ಆಸ್ತಿಯ ಮಾಲೀಕತ್ವ ಅದರದ್ದೇ !

Waqf Board claims ownership of Hindu majority village In Tamil Nadu

ಚೆನ್ನೈ: ಇಡೀ ಹಳ್ಳಿಗೆ ಹಳ್ಳಿಯ ಆಸ್ತಿಯನ್ನೇ ವಕ್ಫ್​ ಮಂಡಳಿ ಕಬಳಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇಲ್ಲಿನ ತಿರುಚ್ಚಿ ಸಮೀಪದ ತಿರುಚೆಂಥುರೈ ಎಂಬ ಗ್ರಾಮ ಹಿಂದು ಬಾಹುಳ್ಯವಿರುವ ಹಳ್ಳಿ. ಆದರೆ ಆ ಗ್ರಾಮದ ಆಸ್ತಿಯನ್ನು ತಮಿಳುನಾಡು ವಕ್ಫ್​ ಬೋರ್ಡ್​ ಇದೀಗ ಸಂಪೂರ್ಣವಾಗಿ ತನ್ನದಾಗಿಸಿಕೊಂಡಿದೆ. ಇದು ಹಳ್ಳಿಗರ ಪಾಲಿಗೆ ದೊಡ್ಡ ಶಾಕ್​ ಕೊಟ್ಟಿದೆ. ವರ್ಷಾನುಗಟ್ಟಲೆ ಇಲ್ಲೇ ಇದ್ದು, ಈ ಭೂಮಿ, ಪ್ರದೇಶವೆಲ್ಲ ತಮ್ಮದೇ ಎಂದು ಬದುಕುತ್ತಿದ್ದ ಸ್ಥಳೀಯರು ಈಗ ಈ ನೆಲ ನಮ್ಮದಲ್ಲ ಎಂಬ ನೋವಿನಲ್ಲಿ ಇದ್ದಾರೆ.

ಇತ್ತೀಚೆಗೆ ಹಳ್ಳಿಯ ರಾಜಗೋಪಾಲ್​ ಎಂಬುವರು ತಮ್ಮ 1 ಎಕರೆ 2ಸೆಂಟ್ಸ್​ ಭೂಮಿಯನ್ನು ರಾಜರಾಜೇಶ್ವರಿ ಎಂಬುವರಿಗೆ ಮಾರಲು ಹೊರಟಿದ್ದರು. ಅದರ ಮಾರಾಟ ಪ್ರಕ್ರಿಯೆ ನಡೆಸುವ ಸಲುವಾಗಿ ರಾಜಗೋಪಾಲ್ ರಿಜಸ್ಟ್ರಾರ್​ ಕಚೇರಿಗೆ ಹೋಗಿದ್ದರು. ಆದರೆ ಅಲ್ಲಿ ಹೋದಾಗ ಅಧಿಕಾರಿಗಳು ಹೇಳಿದ ಮಾತು ಕೇಳಿ ಅಕ್ಷರಶಃ ದಂಗಾಗಿ ಹೋಗಿದ್ದಾರೆ. ‘ತಾನು ತನ್ನದೆಂದುಕೊಂಡು ಮಾರಲು ಹೊರಟಿದ್ದ ಭೂಮಿ ​ತನ್ನದಲ್ಲ. ಅದು ವಕ್ಫ್​​ ಬೋರ್ಡ್​​ಗೆ ಸೇರಿದ್ದು ಎಂಬುದನ್ನು ತಿಳಿದು ಬೇಸರ ಪಟ್ಟಿದ್ದಾರೆ’.

ನನ್ನ ಒಂದು ಎಕರೆ 2 ಸೆಂಟ್ಸ್​ ಭೂಮಿಯನ್ನು ಮಾರಾಟ ಮಾಡಬೇಕು ಎಂದುಕೊಂಡಿದ್ದೇನೆ ಎಂದು ರಾಜಗೋಪಾಲ್​ ಹೇಳಿದಾಗ ಅಲ್ಲಿನ ರಿಜಿಸ್ಟ್ರಾರ್​, ‘ಅದು ಸಾಧ್ಯವಿಲ್ಲ. ಈ ಭೂಮಿಯ ಮಾಲೀಕತ್ವ ವಕ್ಫ್​ ಬೋರ್ಡ್​ಗೆ ಸೇರಿದೆ. ಹೀಗಾಗಿ ನೀವು ಮಾರಲು ಆಗುವುದಿಲ್ಲ. ಚೆನ್ನೈನಲ್ಲಿರುವ ವಕ್ಫ್​ ಬೋರ್ಡ್​ ಗೆ ಹೋಗಿ ನೀವು ಅಗತ್ಯ ದಾಖಲೆಗಳು, ನಿರಾಕ್ಷೇಪಣ ಪತ್ರವನ್ನು ತರಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ. ಆದರೆ ರಾಜಗೋಪಾಲ್​ , ‘1992ರಲ್ಲಿ ನಾನೇ ಖರೀದಿಸಿದ ಆಸ್ತಿಯನ್ನು ಮಾರಾಟ ಮಾಡಲು ವಕ್ಫ್​ ಬೋರ್ಡ್​ ಅನುಮತಿ ಯಾಕೆ’? ಎಂದು ವಾದಿಸುತ್ತಿದ್ದಾರೆ. ಅಷ್ಟೇ ಅಲ್ಲ, ಆಸ್ತಿ ವಕ್ಫ್​ ಬೋರ್ಡ್​ ಪಾಲಾಗಿದ್ದು ಯಾವಾಗ? ಹೇಗೆ? ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ.

ಆಗ ರಿಜಿಸ್ಟ್ರಾರ್​ ಮುರಳಿ ಸುಮಾರು 250 ಪೇಜ್​​ಗಳ ಪತ್ರವೊಂದನ್ನು ರಾಜ್​ಗೋಪಾಲ್​ಗೆ ತೋರಿಸಿ, ‘ಬರೀ ನಿಮ್ಮ ಭೂಮಿಯಷ್ಟೇ ಅಲ್ಲ, ಇಡೀ ತಿರುಚೆಂಥುರೈ ಗ್ರಾಮದ ಪೂರ್ಣ ಆಸ್ತಿಯೇ ವಕ್ಫ್​ ಬೋರ್ಡ್ ಹೆಸರಿನಲ್ಲಿದೆ. ಯಾರೇ ಅದನ್ನು ಮಾರಾಟ ಮಾಡಬೇಕಾದರೂ ಅಲ್ಲಿಂದ ನಿರಾಕ್ಷೇಪಣ ಪತ್ರ ತರಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ. ಅದಾದ ಬಳಿಕ ರಾಜಗೋಪಾಲ್​ ಸೀದಾ ಹೋಗಿ ಹಳ್ಳಿಗರಿಗೆ ಈ ವಿಷಯ ತಿಳಿಸಿದ್ದಾರೆ. ಅದನ್ನು ಕೇಳಿದ ಎಲ್ಲರೂ ಶಾಕ್ ಆಗಿದ್ದಾರೆ. ‘ನಮ್ಮನಮ್ಮ ಭೂಮಿ, ಆಸ್ತಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳೂ ನಮ್ಮ ಬಳಿಯೇ ಇರುವಾಗ ಅದು ಹೇಗೆ ವಕ್ಫ್​ ಬೋರ್ಡ್ ಅದನ್ನು ಸ್ವಂತದ್ದು ಮಾಡಿಕೊಂಡಿತು’ ಎಂಬುದೇ ಹಳ್ಳಿಗರ ಬಹುದೊಡ್ಡ ಪ್ರಶ್ನೆಯಾಗಿದೆ.

ಸದ್ಯ ಹಳ್ಳಿಗರೆಲ್ಲ ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತೆಗೆದುಕೊಂಡು ಹೋಗಿದ್ದಾರೆ ಮತ್ತು ಅವರು ಸೂಕ್ತ ತನಿಖೆ ನಡೆಸುವುದಾಗಿ ಭರವಸೆಯನ್ನೂ ಕೊಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಿರುಚ್ಚಿ ಜಿಲ್ಲಾ ಬಿಜೆಪಿ ನಾಯಕ ಅಲ್ಲೂರು ಪ್ರಕಾಶ್​, ‘ತಿರುಚೆಂಥುರೈ ಗ್ರಾಮದಲ್ಲಿ ಹಿಂದುಗಳೇ ಹೆಚ್ಚಾಗಿದ್ದಾರೆ. ಇದೊಂದು ಕೃಷಿಕರೇ ಇರುವ ಹಳ್ಳಿ. ಇಲ್ಲಿಗೆ ವಕ್ಫ್​ ಬೋರ್ಡ್​ಗೆ ಏನು ಸಂಬಂಧ?’ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ‘ಇಲ್ಲೊಂದು 1500 ವರ್ಷ ಹಳೇ ದೇವಸ್ಥಾನವಿದೆ. ಅದರ ಆಸ್ತಿ 369 ಎಕರೆಗಳಷ್ಟಿದೆ. ಅದೂ ಕೂಡ ವಕ್ಫ್​ ಬೋರ್ಡ್ ಪಾಲಾಗಿದೆಯಾ?. ಒಟ್ಟಾರೆ ಇದೆಲ್ಲ ಆಗಿದ್ದು ಹೇಗೆ? ಎಂಬುದು ಸಮಗ್ರವಾಗಿ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Bharat Jodo Yatra | ರಾಹುಲ್​ ಗಾಂಧಿಗೆ ಮದುವೆ ಮಾಡಿಸಲು ಸಿದ್ಧರಾದ ತಮಿಳುನಾಡು ಮಹಿಳೆಯರು !

Exit mobile version