Site icon Vistara News

Video | ರಾಷ್ಟ್ರಪತಿ ದ್ರೌಪದಿ ಮುರ್ಮು ರೂಪದ ಬಗ್ಗೆ ಟಿಎಂಸಿ ಸಚಿವನ ಆಕ್ಷೇಪಣೀಯ ಹೇಳಿಕೆ

West Bengal TMC minister objectionable remarks On President Droupadi Murmu

ನವ ದೆಹಲಿ: ರಾಜಕಾರಣಿಗಳು ಮಾತನಾಡುವ ಭರದಲ್ಲಿ ವಿವಾದ ಸೃಷ್ಟಿಸುವುದು, ಬಳಿಕ ತಮ್ಮ ಹೇಳಿಕೆ ತಿರುಚಿದ್ದಾರೆ ಎನ್ನುವುದು, ವಿರೋಧ ಜಾಸ್ತಿಯಾಗುತ್ತಿದ್ದಂತೆ ಹೇಳಿಕೆ ವಾಪಸ್​ ಪಡೆದು ವಿಷಾದ ವ್ಯಕ್ತಪಡಿಸುವುದೆಲ್ಲ ನಡೆಯುತ್ತಿರುತ್ತದೆ. ಈಗ ಹೀಗೆ ವಿವಾದವನ್ನೊಂದು ಸೃಷ್ಟಿಸಿ, ಟೀಕೆಗೆ ಗುರಿಯಾದವರ ಸಾಲಿಗೆ ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್ ಸಚಿವ ಅಖಿಲ್​ ಗಿರಿ ಸೇರಿದ್ದಾರೆ. ಇವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ರೂಪದ ಬಗ್ಗೆ ಮಾತನಾಡಿದ ವಿಡಿಯೊ ವೈರಲ್ ಆಗುತ್ತಿದೆ. ಬಿಜೆಪಿ ಪಕ್ಷವಷ್ಟೇ ಅಲ್ಲ, ವಿಡಿಯೊ ನೋಡಿದ ಜನಸಾಮಾನ್ಯರೂ ಅಖಿಲ್​ ಗಿರಿ ವಿರುದ್ಧ ತಿರುಗಿಬಿದ್ದಿದ್ದಾರೆ.

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅಖಿಲ್​ ಗಿರಿ, ಬಿಜೆಪಿ ನಾಯಕ ಸುವೇಂದು ಅಧಿಕಾರಿಯನ್ನು ವ್ಯಂಗ್ಯ ಮಾಡಲು ಹೋಗಿ, ದ್ರೌಪದಿ ಮುರ್ಮುರನ್ನು ಅಣುಕಿಸಿದ್ದಾರೆ. ‘ನಾನು ನೋಡಲು ಚೆನ್ನಾಗಿಲ್ಲ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳುತ್ತಾರೆ. ನನ್ನ ಬಿಡಿ, ಸುವೇಂದು ಅಧಿಕಾರಿ ಏನು ಸೌಂದರ್ಯವಂತರಾ? ನಾವು ಯಾವತ್ತೂ ಒಬ್ಬರ ಅಂದ-ಚೆಂದ ನೋಡಿ ಅವರ ಸಾಮರ್ಥ್ಯವನ್ನು ಅಳೆಯಬಾರದು. ನಮ್ಮ ರಾಷ್ಟ್ರಪತಿಯವರನ್ನು ನೋಡಿ? ಅವರು ಹೇಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಅಖಿಲ್​ ಗಿರಿ ಹೇಳುವುದನ್ನು ವಿಡಿಯೊದಲ್ಲಿ ಕೇಳಬಹುದು.

ಅಖಿಲ್ ಗಿರಿ ವಿಡಿಯೊವನ್ನು ಶೇರ್​ ಮಾಡಿಕೊಂಡಿರುವ ಪಶ್ಚಿಮ ಬಂಗಾಳ ಬಿಜೆಪಿ ಘಟಕ, ‘ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಇಡೀ ಪಕ್ಷ ಬುಡಕಟ್ಟು ಜನಾಂಗದ ವಿರೋಧಿಗಳು. ದ್ರೌಪದಿ ಮುರ್ಮು ಅವರು ಬುಡಕಟ್ಟು ಜನಾಂಗದಿಂದ ಬಂದವರು. ಅವರ ಬಗ್ಗೆ ತೃಣಮೂಲ ಸಚಿವ ಟೀಕಾತ್ಮಕ ಮಾತುಗಳನ್ನಾಡುತ್ತಾರೆ. ಆ ಕಾರ್ಯಕ್ರಮದಲ್ಲಿ ರಾಜ್ಯದ ಮಹಿಳಾ ಕಲ್ಯಾಣ ಸಚಿವೆ ಶಶಿ ಪಂಕ ಉಪಸ್ಥಿತರಿದ್ದರು. ಅವರ ಎದುರೇ ಒಬ್ಬ ಬುಡಕಟ್ಟು ಮಹಿಳೆಯ ಸೌಂದರ್ಯ, ರೂಪವನ್ನು ಟಿಎಂಸಿ ಸಚಿವ ಟೀಕಿಸಿದ್ದಾರೆ’ ಎಂದು ಹೇಳಿದೆ. ವಿಡಿಯೊ ನೋಡಿದ ಜನಸಾಮಾನ್ಯರೂ ಕೂಡ ಅಖಿಲ್ ಗಿರಿ ಮಾತುಗಳನ್ನು ವಿರೋಧಿಸಿದ್ದಾರೆ.

ಇದನ್ನೂ ಓದಿ: ಕಲಿತ ಶಾಲೆ, ಉಳಿದುಕೊಂಡಿದ್ದ ಹಾಸ್ಟೆಲ್‌ಗೆ ಭೇಟಿ ನೀಡಿ, ಭಾವುಕರಾಗಿ ಕಣ್ಣೀರು ಹಾಕಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Exit mobile version