Site icon Vistara News

Khela Hobe ಎಂದಿದ್ದ ಬಾಹುಬಲಿ ಅರೆಸ್ಟ್​; ದೀದಿ ಆಪ್ತನದ್ದು ಮಿತಿಮೀರಿದ ಗುಂಡಾಗಿರಿಯಾಗಿತ್ತು!

Anubrata Mondal

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್​ ನಾಯಕ ಅನುಬ್ರತಾ ಮಂಡಲ್​ರನ್ನು ಇಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದಿಂದ ಬಾಂಗ್ಲಾದೇಶಕ್ಕೆ ಹಸುಗಳ ಕಳ್ಳಸಾಗಣೆ ಕೇಸ್​​ಗೆ ಸಂಬಂಧಪಟ್ಟು ಅವರು ಅರೆಸ್ಟ್​ ಆಗಿದ್ದಾರೆ. ವಿಚಾರಣೆಗೆ ಬನ್ನಿ ಎಂದು 9-10 ಬಾರಿ ಸಮನ್ಸ್​ ಕೊಟ್ಟರೂ, ನಿರ್ಲಕ್ಷ್ಯ ಮಾಡಿದ ಅನುಬ್ರತಾರನ್ನು ಸಿಬಿಐ ಅಧಿಕಾರಿಗಳು ಇಂದು ಅವರ ಮನೆಗೇ ಬಂದು ಕರೆದುಕೊಂಡು ಹೋಗಿದ್ದಾರೆ. ಇವರು ಟಿಎಂಸಿಯಲ್ಲಿ ಪ್ರಮುಖ ನಾಯಕ ಮತ್ತು ಮಮತಾ ಬ್ಯಾನರ್ಜಿಯ ಅತ್ಯಾಪ್ತರಲ್ಲಿ ಒಬ್ಬರು. ಯಾವುದೇ ಮಂತ್ರಿ, ಶಾಸಕ ಅಲ್ಲದೆ ಹೋದರೂ ಪಕ್ಷದಲ್ಲಿ ಪ್ರಬಲ ನಾಯಕ.

ಬೀರ್​ಭೂಮ್​​​ ಜಿಲ್ಲೆಯಲ್ಲಿ ಅದೆಷ್ಟರ ಮಟ್ಟಿಗೆ ಇವರ ಪ್ರಭಾವ ಇತ್ತು ಎಂದರೆ, ಸ್ಥಳೀಯವಾಗಿ ಬಾಹುಬಲಿ ನಾಯಕ ಎಂದೇ ಪ್ರಸಿದ್ಧರಾಗಿದ್ದರು. ಇವರ ಬೆಂಬಲಿಗರು ಪ್ರೀತಿಯಿಂದ ಕೇಷ್ತೋ ದಾ ಎಂದೇ ಕರೆಯುತ್ತಿದ್ದರು. (ಈ ಹೆಸರನ್ನು ಭಗವಾನ್ ಶ್ರೀಕೃಷ್ಣ, ಭಗವಾನ್​ ಹನುಮಾನ್​​ಗೆ ಉಲ್ಲೇಖಿಸಲಾಗುತ್ತದೆ). ಇಡೀ ಬೀರ್​ಭೂಮ್​ ಜಿಲ್ಲೆಯಲ್ಲಿ ಏನೇ ಕೆಲಸ ಆಗಬೇಕು ಎಂದರೂ ಅನುಬ್ರತಾ ಒಪ್ಪಿಗೆ ಬೇಕೇಬೇಕು ಎಂಬುದು ಅಲ್ಲಿನವರ ಹೇಳಿಕೆ. ಅಂದಹಾಗೇ, ಅನುಬ್ರತಾಗೆ ಹೈಪೋಕ್ಸಿಯಾ ಕಾಯಿಲೆ ಇದ್ದು, ಸದಾ ಆಕ್ಸಿಜನ್​​ನ್ನು ಜತೆಗೆ ಇಟ್ಟುಕೊಂಡೇ ಇರುತ್ತಾರೆ.

ವಿವಾದ ಬೆನ್ನಿಗೇ ಇದೆ !
ಅನುಬ್ರತಾ ಮಂಡಲ್​ ವಿವಾದಕ್ಕೆ ಪರ್ಯಾಯ ಎಂಬಂತೆ ಬದುಕಿದವರು. 2013ರ ಪಂಚಾಯತ್​ ಚುನಾವಣೆಯ ವೇಳೆ ಮಂಡಲ್​ ತಮ್ಮ ಕಾರ್ಯಕರ್ತರಿಗೆ ವಿಚಿತ್ರ ಆದೇಶ ಕೊಟ್ಟು ಸುದ್ದಿಯಾಗಿದ್ದರು. ಚುನಾವಣೆಯ ಸ್ವತಂತ್ರ ಅಭ್ಯರ್ಥಿಗಳ ಮನೆ ಮೇಲೆ ಮುಲಾಜಿಲ್ಲದೆ ಬಾಂಬ್​ ಹಾಕಿ ಎಂದು ಸೂಚಿಸಿದ್ದರು. ಅದೇ ಕೆಲಸವನ್ನೇ ಟಿಎಂಸಿ ಕಾರ್ಯಕರ್ತರು ಮಾಡಿ, ವ್ಯಕ್ತಿಯೊಬ್ಬರ ಜೀವ ಹೋಗಿತ್ತು. ಚುನಾವಣೆ ಸಂದರ್ಭ ಬಂತು ಎಂದರೆ ಸಾಕು ಈ ವ್ಯಕ್ತಿಯ ಮೇಲೆ ಕಣ್ಣಿಡುವುದೇ ಒಂದು ಕೆಲಸವಾಯಿತು. ಟಿಎಂಸಿ ವಿರೋಧಿಸುವವರ ಮನೆ ಮೇಲೆ ರಾತ್ರಿ ದಾಳಿ ಮಾಡಿಸುವುದು, ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂಬ ಹಠದಿಂದ ಗಲಭೆ ಎಬ್ಬಿಸುವುದೇ ಇವರ ಕಾಯಕವಾಗಿತ್ತು. ಚುನಾವಣೆ ಸಂದರ್ಭದಲ್ಲಿ ಮಂಡಲ್​ ದಾಂಧಲೆ ಎಬ್ಬಿಸದಂತೆ ಕಣ್ಣಿಡುವ ಸಲುವಾಗಿಯೇ ನ್ಯಾಯಾಲಯ, ವಿಶೇಷ ಅಧಿಕಾರಿಗಳನ್ನು ನೇಮಕ ಕೂಡ ಮಾಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, 2021ರ ವಿಧಾನಸಭೆ ಚುನಾವಣೆ ವೇಳೆ, ಮಮತಾ ಬ್ಯಾನರ್ಜಿಯವರ khela hobe (ಆಟ ಶುರುವಾಗಿದೆ-The game is On) ಎಂಬ ಘೋಷಣೆಯನ್ನು ಅತ್ಯಂತ ಜನಪ್ರಿಯಗೊಳಿಸಿದವರು ಇವರು.

ಇತ್ತೀಚೆಗಷ್ಟೇ ಮಮತಾ ಬ್ಯಾನರ್ಜಿ ಆಪ್ತ ಪಾರ್ಥ ಚಟರ್ಜಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈಗ ಬಲಗೈ ಬಂಟನಂತಿದ್ದ ಅನುಬ್ರತಾರನ್ನು ಸಿಬಿಐ ಅರೆಸ್ಟ್ ಮಾಡಿದೆ. ಈ ಮಧ್ಯೆ ಕಲ್ಲಿದ್ದಲು ಹಗರಣದಲ್ಲಿ 8 ಐಪಿಎಸ್​ ಅಧಿಕಾರಿಗಳಿಗೆ ಇಡಿ ಸಮನ್ಸ್ ಕೊಟ್ಟಿದೆ. ಅದರ ಮೂಲ ಕೂಡ ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್​ ಬ್ಯಾನರ್ಜಿ ಕಾಲಬುಡದಲ್ಲೇ ಇದೆ. ಇನ್ನು ಈ ಜಾನುವಾರುಗಳ ಅಕ್ರಮ ಸಾಗಣೆ ಕೇಸ್​​ನಲ್ಲಿ ಈಗಾಗಲೇ ಅನುಬ್ರತಾ ಆಪ್ತ ಸೇಗಲ್​ ಹುಸೇನ್​​ ಅರೆಸ್ಟ್ ಆಗಿದ್ದಾನೆ. ಈತನ ಬಳಿ 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ.

ಇದನ್ನೂ ಓದಿ: Anubrata Mondal | ಸಿಎಂ ಮಮತಾ ಬ್ಯಾನರ್ಜಿ ಆಪ್ತ ಅನುಬ್ರತಾ ಮಂಡಲ್​ರನ್ನು ಬಂಧಿಸಿದ ಸಿಬಿಐ

Exit mobile version