Site icon Vistara News

Asia Cup: ಪಾಕಿಸ್ತಾನಕ್ಕೆ ಬರುವಂತೆ ಜಯ್​ ಶಾಗೆ ಆಹ್ವಾನ ನೀಡಿದ ಪಾಕ್​ ಕ್ರಿಕೆಟ್​ ಮಂಡಳಿ

ಮುಂಬಯಿ: ಏಷ್ಯಾ ಕಪ್(Asia Cup)​ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಜತೆ ತಿಕ್ಕಾಟ ನಡೆಸಿದ್ದ ಬಿಸಿಸಿಐ(BCCI) ಕಾರ್ಯದರ್ಶಿ ಜಯ್​ ಶಾ(Jay Shah) ಅವರನ್ನು ಪಾಕಿಸ್ತಾನಕ್ಕೆ ಬರುವಂತೆ ಪಿಸಿಬಿ(PCB) ಆಹ್ವಾನಿಸಿದೆ. ಆಗಸ್ಟ್​ 30ರಿಂದ ಆರಂಭಗೊಳ್ಳಲಿರುವ ಏಷ್ಯಾ ಕಪ್​ ಟೂರ್ನಿಯ ಉದ್ಘಾಟನ ಪಂದ್ಯದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದೆ.

ಜಯ್​ ಶಾ ಅವರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಲು ಒಂದು ಪ್ರಮುಖ ಕಾರಣವಿದೆ. ಶಾ ಅವರು ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ನ(Asian Cricket Council) ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಅವರನ್ನು ಆಹ್ವಾನಿಸಲಾಗಿದೆ. ಇವರ ಜತೆ ಈ ಸಮಿತಿಯಲ್ಲಿರುವ ಎಲ್ಲ ಸದ್ಯರಿಗೂ ಆಮಂತ್ರಣ ನೀಡಲಾಗಿದೆ. ಆದರೆ ಜಯ್​ ಶಾ ಅವರು ಪಾಕಿಸ್ತಾನಕ್ಕೆ ತೆರಳಲಿದ್ದಾರಾ ಎಂದು ಕಾದು ನೋಡಬೇಕಿದೆ.

“ಜಯ್ ಶಾ ಅವರಿಗೆ ಏಷ್ಯಾ ಕಪ್​ ಟೂರ್ನಿಯ ಸಲುವಾಗಿ ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನ ಕಳುಹಿಸಲಾಗಿದೆ. ಏಕೆಂದರೆ ಅವರು ಏಷ್ಯನ್​ ಕ್ರಿಕೆಟ್​ ಕೌನಿಲ್ಸ್​ನ ಅಧ್ಯಕ್ಷರಾಗಿದ್ದಾರೆ. ನಮ್ಮ ಆಹ್ವಾನದಂತೆ ಜೈ ಶಾ ಪಾಕ್​ಗೆ ಬರುವು ನಿರೀಕ್ಷೆ ಇದೆ” ಎಂದು ಪಾಕ್ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಝಾಕಾ ಅಶ್ರಫ್ (Zaka Ashraf) ತಿಳಿಸಿದ್ದಾರೆ. ಈ ಹಿಂದೆ ಡರ್ಬನ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಜಯ್ ಶಾ ಮತ್ತು ಝಾಕಾ ಅಶ್ರಫ್ ಭೇಟಿಯಾಗಿದ್ದರು. ಇಲ್ಲಿ ಅಶ್ರಫ್ ಅವರು ಜಯ್​ ಶಾಗೆ ಮೌಖಿಕವಾಗಿ ಪಾಕ್​ಗೆ ಬರುವಂತೆ ಕರೆದಿದ್ದರು. ಆದರೆ ಈಗ ಔಪಚಾರಿಕವಾಗಿ ಆಹ್ವಾನವನ್ನು ಕಳುಹಿಸಲಾಗಿದೆ ಎಂದು ಪಿಸಿಬಿ ಮೂಲಗಳು ಮಾಹಿತಿ ನೀಡಿದೆ.

ಇದನ್ನೂ ಓದಿ Asia Cup 2023: ಏಷ್ಯಾಕಪ್​ ಪಂದ್ಯಗಳ ಸಮಯ ನಿಗದಿಪಡಿಸಿದ ಏಷ್ಯನ್ ಕೌನ್ಸಿಲ್

ಏಷ್ಯಾ ಕಪ್​ ವಿಚಾರದಲ್ಲಿ ಕಿತ್ತಾಟ

ಏಷ್ಯಾ ಕಪ್​ ವಿಚಾರದಲ್ಲಿ ಜಯ್​ ಶಾ ಮತ್ತು ಪಾಕ್​ ಕ್ರಿಕೆಟ್​ ಮಂಡಳಿ ಮಧ್ಯೆ ಮಾತಿನ ಜಟಾಪಟಿ ನಡೆದಿತ್ತು. ಪಾಕಿಸ್ತಾನದಲ್ಲಿ ಪಂದ್ಯಗಳು ನಡೆದರೆ ಭಾರತ ಪಾಲ್ಗೊಳ್ಳುವುದಿಲ್ಲ ಎಂದು ಜಯ್​ ಶಾ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪಾಕ್​ ಕ್ರಿಕೆಟ್​ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು. ಇದೇ ಕಾರಣದಿಂದ ಈ ಟೂರ್ನಿ ನಡೆಯುವುದು ಅನುಮಾನ ಎನ್ನಲಾಗಿತ್ತು. ಅಂತಿಮವಾಗಿ ಪಾಕ್​ ಬಿಸಿಸಿಐ ಎದುರು ಸೋತು ಹೈಬ್ರೀಡ್​ ಮಾದರಿಯಲ್ಲಿ ಟೂರ್ನಿ ನಡೆಸಲು ಒಪ್ಪಿತ್ತು. ಹೀಗಾಗಿ ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಒಟ್ಟು 13 ಪಂದ್ಯಗಳ ಪೈಕಿ ಪಾಕ್​ನಲ್ಲಿ ಕೇವಲ ನಾಲ್ಕು ಪಂದ್ಯಗಳು ಮಾತ್ರ ನಡೆಯಲಿದೆ.

ಭಾರತಕ್ಕೆ ಅಗ್ನಿ ಪರೀಕ್ಷೆ

ಏಷ್ಯಾಕಪ್​ನಲ್ಲಿ 7 ಬಾರಿಯ ಚಾಂಪಿಯನ್ ಆಗಿರುವ ಭಾರತ ತಂಡಕ್ಕೆ 2023ರ ನಿರ್ಣಾಯಕ ವಿಶ್ವಕಪ್​ಗೆ ಮುಂಚಿತವಾಗಿ ನಡೆಯುವ ಅಗ್ನಿಪರೀಕ್ಷೆ ಇದಾಗಿದೆ. ಇಲ್ಲಿ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದ ಮೇಲೆ ವಿಶ್ವಕಪ್​ ಭವಿಷ್ಯ ನಿರ್ಧರವಾಗಲಿದೆ. ರೋಹಿತ್ ಶರ್ಮಾ(Rohit Sharma) ಈಗಾಗಲೇ ಭಾರತ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ಗೆದ್ದರೆ ಎರಡನೇ ಪ್ರಶಸ್ತಿಯಾಗಲಿದೆ. 2018ರಲ್ಲಿ ಯುಎಇಯಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್​​ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿದ ಹಿರಿಮೆಯೂ ಭಾರತ ತಂಡದ್ದಾಗಿದೆ. ಈ ಬಾರಿಯೂ ಗೆದ್ದರೆ ವಿಶ್ವ ಕಪ್​ನಲ್ಲಿ ಭಾರತ ತಂಡದ ಮೇಲೆ ನಿರಿಕ್ಷೆಯೊಂದನ್ನು ಮಾಡಬಹುದಾಗಿದೆ.

Exit mobile version