Site icon Vistara News

Snake in Cricket Ground | ಅಸ್ಸಾಂ​ ಕ್ರಿಕೆಟ್​ ಸಂಸ್ಥೆಗೆ ಹಾವಿನ ಭಯ; ಮತ್ತೆ ಬಂದರೆ ಏನು ಮಾಡುವುದು?

snake in cricket ground

ಗುವಾಹಟಿ : ಜನವರಿ 10ರಂದು ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಗುವಾಹಟಿಯಲ್ಲಿ ನಡೆಯಲಿದೆ. ರಾಜ್​ಕೋಟ್​ನಲ್ಲಿ ಶನಿವಾರ ನಡೆಯುವ ಟಿ20 ಸರಣಿಯ ಕೊನೇ ಪಂದ್ಯ ಮುಕ್ತಾಯಗೊಂಡ ಬಳಿಕ ಲಂಕಾ ಬಳಗ ಅಸ್ಸಾಮ್​ನ ರಾಜಧಾನಿಗೆ ಪ್ರಯಾಣ ಬೆಳೆಸಲಿದೆ. ಜತೆಗೆ ಭಾರತ ತಂಡವೂ ಅಲ್ಲಿಗೆ ಹೋಗುವ ವಿಮಾನ ಏರಲಿದೆ. ಪಂದ್ಯದ ದಿನ ಹತ್ತಿರ ಬರುತ್ತಿದ್ದಂತೆ ಅಸ್ಸಾಂ ಕ್ರಿಕೆಟ್​ ಸಂಸ್ಥೆಗೆ ಹಾವಿನ ಭಯ ಕಾಡುತ್ತಿದೆ. ಅದರ ನಿಯಂತ್ರಣಕ್ಕೆ ಬಗೆಬಗೆಯ ಯೋಜನೆಗಳನ್ನು ರೂಪಿಸುತ್ತಿದೆ.

ಕಳೆದ ಬಾರಿ ಗುವಾಹಟಿಯ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಟಿ20 ಪಂದ್ಯ ನಡೆದಾಗ ಹಾವೊಂದು ಮೈದಾನದ ಹುಲ್ಲು ಹಾಸಿನ ಮೇಲೆ ಹರಿದಾಡಿಕೊಂಡು ಹೋಗಿತ್ತು. ಹಾವಿನ ಸರಿದಾಟ ನೇರ ಪ್ರಸಾರದ ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು. ಅಲ್ಲಿಂದ ಫೀಲ್ಡ್​ ಅಂಪೈರ್​ಗಳಿಗೆ ಮಾಹಿತಿ ನೀಡಲಾಗಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಆಟಗಾರರು ಹಾಗೂ ಪ್ರೇಕ್ಷಕರು ಆತಂಕಕ್ಕೆ ಬಿದ್ದಿದ್ದರು. ತಮ್ಮ ಕಾಲ ಕೆಳಗೆ ಹಾವು ಇದೆಯೇ ಎಂದು ಪದೇ ಪದೇ ನೋಡುವಂತೆ ಮಾಡಿತ್ತು ಈ ಸರಿಸೃಪದ ಪ್ರವೇಶ. ಅಂತಿಮವಾಗಿ ಉರಗ ತಜ್ಱರು ಬಂದು ಹಾವನ್ನು ಕಾಪಾಡಿದ್ದರು.

ಇಷ್ಟೆಲ್ಲ ಘಟನೆಗಳು ನಡೆಯವಾಗ 10 ನಿಮಿಷದ ಆಟಕ್ಕೆ ಅಡಚಣೆ ಉಂಟಾಗಿತ್ತು. ಈ ಪರಿಸ್ಥಿತಿ ಮತ್ತೆ ಎದುರಾದರೆ ಏನು ಮಾಡುವುದು ಎಂಬುದು ಅಸ್ಸಾಂ ಕ್ರಿಕೆಟ್ ಸಂಸ್ಥೆಯ ಯೋಚನೆ. ಸದ್ಯ ಸರ್ಕಾರೇತರ ಸಂಸ್ಥೆ (ಎನ್​ಜಿಒ) ಜತೆ ಅಸ್ಸಾಮ್​ ಕ್ರಿಕೆಟ್​ ಮಾತುಕತೆ ಮಾಡಿದೆ. ಹಾವು ಬರದಂತೆ ನೋಡಿಕೊಳ್ಳುವುದಕ್ಕೆ ತಂತ್ರಗಳನ್ನು ಹೂಡಲಾಗಿದೆ. ರಾಸಾಯನಿಕವೊಂದನ್ನು ಮೈದಾನಕ್ಕೆ ಹಾಗೂ ಪ್ರೇಕ್ಷಕರ ಗ್ಯಾಲರಿಗೆ ಸಿಂಪಡಿಸಿ ಹಾವುಗಳು ಅಲ್ಲಿಗೆ ಸುಳಿಯದಂತೆ ನೋಡಿಕೊಳ್ಳುವುದಾಗಿ ಎನ್​ಜಿಒ ಭರವಸೆ ಕೊಟ್ಟಿದೆಯಂತೆ.

ಲೈಟ್​ ರಿಪೇರಿ

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಫ್ಲಡ್​ ಲೈಟ್​ ಕೂಡ ಕೈ ಕೊಟ್ಟಿತ್ತು. ಸ್ಟೇಡಿಯಮ್​ನ ಒಂದು ಬದಿಯ ದೀಪಗಳು ಸಂಪೂರ್ಣವಾಗಿ ಆಫ್​ ಆಗಿತ್ತು. ಸುಮಾರು ಹೊತ್ತು ಕಾದ ಬಳಿಕ ರಿಪೇರಿ ಮಾಡಲಾಗಿತ್ತು. ಆ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಅಸ್ಸಾಮ್​ ಕ್ರಿಕೆಟ್​ ಸಂಸ್ಥೆ ಮುಂದಾಗಿದೆ.

ಇದನ್ನೂ ಓದಿ | IND VS SL | ಭಾರತಕ್ಕೆ ಬಂದ ಶ್ರೀಲಂಕಾ ಕ್ರಿಕೆಟ್ ತಂಡ; ಜ.03ಕ್ಕೆ ಮೊದಲ ಟಿ20 ಪಂದ್ಯ

Exit mobile version