Site icon Vistara News

IND vs AUS: ಆಸೀಸ್​ಗೆ ಬೀಳಲಿ ಸರಣಿ ಸೋಲಿನ ಏಟು

India vs Australia, 2nd ODI

ಇಂದೋರ್​: ಏಕದಿನ ವಿಶ್ವಕಪ್​ ಟೂರ್ನಿ ಆರಂಭಕ್ಕೂ ಮುನ್ನ ಭಾರತ ತವರಿನಲ್ಲೇ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ ಒಂದನ್ನು ಗೆದ್ದಿರುವ ಕನ್ನಡಿಗ ಕೆ.ಎಲ್​ ರಾಹುಲ್​ ಪಡೆ ಮತ್ತೊಂದು ಪಂದ್ಯವನ್ನು ಗೆಲ್ಲುವ ಇರಾದೆಯಲ್ಲಿದೆ. ಭಾನುವಾರ ನಡೆಯುವ ಇತ್ತಂಡಗಳ ಮುಖಾಮುಖಿಯಲ್ಲಿ(India vs Australia, 2nd ODI) ಭಾರತ ತಂಡ ಗೆದ್ದರೆ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಗೆಲುವು ದಾಖಲಿಸಿದೆ.

ಕಳಪೆ ಫೀಲ್ಡಿಂಗ್​ಗೆ ಬೇಕಿದೆ ತುರ್ತು ಚೇತರಿಕೆ

ಸ್ಟಾರ್​ ಆಟಗಾರರಾದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಹಾರ್ದಿಕ್​ ಪಾಂಡ್ಯ, ಮೊಹಮ್ಮದ್​ ಸಿರಾಜ್​ ಅನುಪಸ್ಥಿತಿಯಲ್ಲಿಯೂ ಭಾರತ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ನಿಜಕ್ಕೂ ಮೆಚ್ಚಲೇ ಬೇಕು. ಆದರೆ ಮೊದಲ ಪಂದ್ಯದಂತೇ ಈ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್​ ನಡೆಸಿದರೆ ಕೈ ಸುಟ್ಟುಕೊಳ್ಳುವುದು ಖಚಿತ. ನಾಯಕ ರಾಹುಲ್​ ಸೇರಿ ಎಲ್ಲ ಆಟಗಾರರು ಮಿಸ್​ ಪೀಲ್ಡಿಂಗ್​, ರನೌಟ್​, ಕ್ಯಾಚ್​ ಕೈಚೆಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದರು. ಇದಲ್ಲದೇ ವಿಶ್ವಕಪ್​ ಆರಂಭಕ್ಕೆ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. ಹೀಗಿರುವಾಗ ಕಳಪೆ ಫೀಲ್ಡಿಂಗ್​ ನಡೆಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಅದರಲ್ಲೂ ರಾಹುಲ್​ ಅವರನ್ನು ವಿಶ್ವಕಪ್​ ಟೂರ್ನಿಯಲ್ಲಿ ಪ್ರಧಾನ ಕೀಪರ್​ ಆಗಿ ಆಯ್ಕೆ ಮಾಡಲಾಗಿದೆ ಆದರೆ ಅವರ ಕಳಪೆ ಕೇತ್ರರಕ್ಷಣೆ ನೋಡುವಾಗ ಟೀಮ್​ ಮ್ಯಾನೆಜ್​ಮೆಂಟ್​ಗೆ ತಲೆ ನೋವು ತಂದಿದೆ. ದ್ವಿತೀಯ ಪಂದ್ಯದಲ್ಲಿ ಎಲ್ಲ ತಪ್ಪುಗಳನ್ನು ಸರಿಪಡಿಸಲೇ ಬೇಕಾದ ಒತ್ತಡ ರಾಹುಲ್ ಮುಂದಿದೆ.

ಆಸೀಸ್​ಗೆ ಮಾಡು ಇಲ್ಲವೇ ಮಡಿ ಪಂದ್ಯ

ಅನುಭವಿಗಳಿಂದಲೇ ಕೂಡಿದ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಪಂದ್ಯದಲ್ಲಿ ಸೋಲು ಎದುರಾದ ಕಾರಣ ಸರಣಿಯನ್ನು ಜೀವಂತವಿರಿಸಬೇಕಿದ್ದರೆ, ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಸ್ಥಿತಿ ಎದುರಾಗಿದೆ. ಮಿಚೆಲ್​ ಮಾರ್ಷ್​ ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಬ್ಯಾಟರ್​ಗಳು ಮೊದಲ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ಯಶಸ್ಸು ಕಂಡಿದ್ದರು. ಬೌಲಿಂಗ್​ನಲ್ಲಿ ಮಾತ್ರ ಹೇಳುವಷ್ಟರ ಮಟ್ಟಿಗೆ ಪ್ರದರ್ಶನ ಕಂಡುಬರಲಿಲ್ಲ. ಸರಣಿಯನ್ನು ಸಮಬಲಕ್ಕೆ ತರುವ ನಿಟ್ಟಿನಲ್ಲಿ ಆಸೀಸ್​ ಈ ಪಂದ್ಯಕ್ಕೆ ಕೆಲ ಆಟಗಾರರನ್ನು ಬದಲಾಯಿಸುವ ಸಾಧ್ಯತೆ ಇದೆ. ಮಿಚೆಲ್​ ಸ್ಟಾರ್ಕ್​ ತಂಡ ಸೇರಿದರೂ ಅಚ್ಚರಿಯಿಲ್ಲ.

ಇದನ್ನೂ ಓದಿ IND vs AUS 2nd ODI: ಭಾರತ-ಆಸೀಸ್​ ದ್ವಿತೀಯ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡ

ಸಿಡಿಯ ಬೇಕಿದೆ ಅಯ್ಯರ್​

ಬೆನ್ನು ನೋವಿನಿಂದ ಚೇತರಿಕೆ ಕಂಡು ಭಾರತ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದ ಶ್ರೇಯಸ್​ ಅಯ್ಯರ್​ಗೆ ಏಷ್ಯಾಕಪ್​ನಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲೇ ಅವರು ಗಾಯಗೊಂಡು ಬಳಿಕದ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಆಸೀಸ್​ ವಿರುದ್ಧದ ಸರಣಿಯಲ್ಲಿ ಅವಕಾಶ ಪಡೆದರೂ ಕಳಪೆ ಫೀಲ್ಡಿಂಗ್​ ಮತ್ತು ಬ್ಯಾಟಿಂಗ್​ ನಡೆಸಿ ಸಂಪೂರ್ಣ ವಿಫಲರಾದರು. ಒಂದೊಮ್ಮೆ ದ್ವಿತೀಯ ಪಂದ್ಯದಲ್ಲಿಯೂ ಅವರು ಇದೇ ಪ್ರದರ್ಶನವನ್ನು ತೋರ್ಪಡಿಸಿದರೆ ವಿಶ್ವಕಪ್​ ತಂಡದ ಆಡುವ ಬಳಗದಿಂದ ಹೊರಗುಳಿಯುವುದು ಖಚಿತ. ಈ ನಿಟ್ಟಿನಲ್ಲಿ ಸಿಕ್ಕ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಳ್ಳಬೇಕಿದೆ.​ ಜತೆಗೆ ಶಾರ್ದೂಲ್​ ಠಾಕೂರ್​ ಕೂಡ ತಮ್ಮ ಎಸೆತಗಳಿಗೆ ಸಾಣೆ ಹಿಡಿಯಬೇಕಿದೆ.

Exit mobile version