Site icon Vistara News

ಅಂತಿಮ ಏಕದಿನ ಪಂದ್ಯದಿಂದ ಹೊರಬಿದ್ದ ಅಕ್ಷರ್​ ಪಟೇಲ್​; ವಿಶ್ವಕಪ್​ಗೂ ಅನುಮಾನ

Axar Patel

ಬೆಂಗಳೂರು: ಆಸ್ಟ್ರೇಲಿಯಾ(IND vs AUS) ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಬುಧವಾರ ರಾಜ್​ಕೋಟ್​ನಲ್ಲಿ(Rajkot) ನಡೆಯಲಿದೆ. ಮೊದಲೆರಡು ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಜಸ್​ಪ್ರೀತ್​ ಬುಮ್ರಾ ಸೇರಿ ಕೆಲ ಆಟಗಾರರು ಈಗಾಗಲೇ ತಂಡ ಸೇರಿಕೊಂಡಿದ್ದಾರೆ. ಆದರೆ ಏಷ್ಯಾಕಪ್​ ವೇಳೆ ಗಾಯಗೊಂಡ ಅಕ್ಷರ್​ ಪಟೇಲ್(Axar Patel)​ ಈ ಪಂದ್ಯದಿಂದ ಹೊರಬಿದ್ದಿರುವುದಾಗಿ ಕ್ರಿಕ್​ಬಜ್​ ವರದಿ ಮಾಡಿದೆ.

ಕ್ರಿಕ್​ಬಜ್​ ವರದಿಯ ಪ್ರಕಾರ ಅಕ್ಷರ್​ ಪಟೇಲ್ ಅವರು ಮೊಣಕೈ ಗಾಯದಿಂದ ಸಂಪೂರ್ಣ ಚೇತರಿಕೆ ಕಾಣದ ಕಾರಣ ಆಸೀಸ್​ ವಿರುದ್ಧದ ಅಂತಿಮ ಪಂದ್ಯದಿಂದ ಹೊರಬಿದ್ದಿದ್ದು ಸದ್ಯ ಅವರು ಬೆಂಗಳೂರಿನಲ್ಲಿರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದೆ. ಅಕ್ಷರ್​ ಅವರು ಫಿಟ್​ನೆಸ್​ ಪಾಸ್​ ಆದ ಬಳಿಕ ವಿಶ್ವಕಪ್​ ತಂಡಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.

ಏಷ್ಯಾಕಪ್​ ವೇಳೆ ಗಾಯ

ಏಷ್ಯಾಕಪ್​ನ ಬಾಂಗ್ಲಾದೇಶ ವಿರುದ್ಧದ ಅಂತಿಮ ಸೂಪರ್ 4 ಪಂದ್ಯದಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡಿದ್ದರು. ಗಾಯದ ಮಧ್ಯೆಯೂ ಅವರು ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಮೊಣಕೈ ಮತ್ತು ಸ್ನಾಯು ಸೆಳೆತದ ಗಾಯದಿಂದ ಬಳಲಿದ ಅವರು ಟೂರ್ನಿಯಿಂದ ಹೊರಬಿದ್ದಿದ್ದರು. ಒಂದೊಮ್ಮೆ ಅಕ್ಷರ್​ ಪಟೇಲ್​ ಅವರು ಗಾಯದಿಂದ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದರೆ, ಆಗ ಅವರ ಸ್ಥಾನಕ್ಕೆ ಅಶ್ವಿನ್​ ಆಯ್ಕೆಯಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಅಶ್ವಿನ್​ಗೆ ಆಸೀಸ್​ ಸರಣಿಯಲ್ಲಿ ದಿಢೀರ್ ಅವಕಾಶ ನೀಡಿದಂತೆ ತೋರುತ್ತಿದೆ. ಇನ್ನೊಂದೆಡೆ ವಾಷಿಂಗ್ಟನ್​​ ಸುಂದರ್​ ಕೂಡ ಈ ರೇಸ್​ನಲ್ಲಿದ್ದಾರೆ.

ಗಿಲ್​-ಶಾರ್ದೂಲ್​ಗೆ ವಿಶ್ರಾಂತಿ

ಟೀಮ್​ ಇಂಡಿಯಾದ ಯುವ ಆಟಗಾರ ಶುಭಮನ್​ ಗಿಲ್(Shubman Gill)​ ಮತ್ತು ಆಲ್​ರೌಂಡರ್​ ಶಾರ್ದೂಲ್​ ಠಾಕೂರ್(Shardul Thakur)​ ಅವರಿಗೆ, ಆಸೀಸ್​ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ(IND vs AUS) ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ ಎಂದು ವರದಿಯಾಗಿದೆ. ಈಗಾಗಲೇ ಭಾರತ ತಂಡ ಸರಣಿಯನ್ನು ವಶಪಡಿಸಿಕೊಂಡಿರುವ ಕಾರಣ ಬುಧವಾರ ನಡೆಯುವ ಪಂದ್ಯ ಅಷ್ಟಾಗಿ ಮಹತ್ವ ಪಡೆದಿಲ್ಲ. ವಿಶ್ವಕಪ್​ಗೆ(ODI world cup) ಇನ್ನೊಂದು ವಾರ ಇರುವ ಕಾರಣ ಉಭಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಇದನ್ನೂ ಓದಿ World Record: ಸಿಕ್ಸರ್​ಗಳ ಮೂಲಕವೇ ವಿಶ್ವ ದಾಖಲೆ ಬರೆದ ಟೀಮ್​ ಇಂಡಿಯಾ

ವಿಶ್ವಕಪ್​ ಟೂರ್ನಿಯ ಹಿನ್ನಲೆ ಮೊದಲ ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ತಂಡದ ಖಾಯಂ ನಾಯಕ ರೋಹಿತ್​ ಶರ್ಮ ಮತ್ತು ಅನುಭವಿ ವಿರಾಟ್​ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ ಹಾಗೂ ಉಪನಾಯಕ ಹಾರ್ದಿಕ್​ ಪಾಂಡ್ಯ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಗಾಯಕ್ವಾಡ್​, ಸೂರ್ಯಕುಮಾರ್, ಆರ್​ ಅಶ್ವಿನ್​ ಅಂತಿಮ ಪಂದ್ಯದಿಂದ ಹೊರಗುಳಿಯುವ ಸಾ​ಧ್ಯತೆ ಇದೆ.

ಭಾರತ ವಿಶ್ವಕಪ್​ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್​ ಪಟೇಲ್‌, ಸೂರ್ಯಕುಮಾರ್‌ ಯಾದವ್​.

Exit mobile version