Site icon Vistara News

ದೇಶದಲ್ಲಿ ಮತ್ತೆ ಕುಸ್ತಿ ಚಟುವಟಿಕೆ ಆರಂಭಿಸಿ; ಕೇಂದ್ರಕ್ಕೆ ಬಜರಂಗ್ ಪೂನಿಯಾ ಮನವಿ

Bajrang Punia

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್‌(WFI) ಅಧ್ಯಕ್ಷರಾಗಿ ಬೃಜ್‌ಭೂಷಣ್‌ ಸಿಂಗ್‌(Brij Bhushan Sharan Singh) ಅವರ ಪರಮಾಪ್ತ ಸಂಜಯ್‌ ಸಿಂಗ್‌(Sanjay Singh) ಆಯ್ಕೆಯಾದ ಬೆನ್ನಲ್ಲೇ ಕುಸ್ತಿಪಟು ಬಜರಂಗ್‌ ಪೂನಿಯ(Bajrang Punia) ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್​ ಮಾಡಿದ್ದರು. ಇದೀಗ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ(Paris Olympics) ಸಿದ್ಧತೆ ನಡೆಸಲು ದೇಶದಲ್ಲಿ ನಿಂತು ಹೋಗಿರುವ ಕುಸ್ತಿ ಚಟುವಟಿಕೆಯನ್ನು ಶೀಘ್ರದಲ್ಲೇ ಆರಂಭಿಸಬೇಕು ಎಂದು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ(Sports Ministry) ಮನವಿ ಮಾಡಿದ್ದಾರೆ.

ಟ್ವಿಟರ್​ ಎಕ್ಸ್​ನಲ್ಲಿ ಈ ಬಗ್ಗೆ ಮನವಿ ಮಾಡಿಕೊಂಡಿರುವ ಬಜರಂಗ್​ ಪೂನಿಯ, “ಪ್ಯಾರಿಸ್​ ಒಲಿಂಪಿಕ್ಸ್​ ಆರಂಭಕ್ಕೆ ಇನ್ನು ಕೇವಲ 7 ತಿಂಗಳು ಮಾತ್ರ ಬಾಕಿ ಉಳಿದಿದೆ. ಆದರೆ ದೇಶದಲ್ಲಿ ಕುಸ್ತಿ ಚಟುವಟಿಕೆ ಸ್ಥಗಿತಗೊಂಡಿವೆ. ಇದರಿಂದ ದೇಶದ ಕುಸ್ತಿಪಟುಗಳಿಗೆ ಸಿದ್ಧತೆ ಮಾಡಲು ಹಿನ್ನಡೆಯಾಗಿದೆ. ಆಟಗಾರರನ್ನು ಒಲಿಂಪಿಕ್ಸ್‌ಗೆ ಸಿದ್ಧಪಡಿಸಲು ಯಾವುದೇ ರಾಷ್ಟ್ರೀಯ ಟೂರ್ನಿಯನ್ನು ನಡೆಸಲಾಗಿಲ್ಲ ಅಥವಾ ಯಾವುದೇ ಶಿಬಿರಗಳನ್ನು ಆಯೋಜಿಸಲಾಗಿಲ್ಲ” ಎಂದು ಬರೆದುಕೊಂಡಿದ್ದಾರೆ.

“ಏಳು ತಿಂಗಳ ನಂತರ ಒಲಿಂಪಿಕ್ ಕ್ರೀಡಾಕೂಟವಿದೆ ಆದರೆ ಯಾರೂ ಕೂಡ ಇದರ ಬಗ್ಗೆ ಗಂಭೀರವಾಗಿ ಚಿಂತಿಸಿಲ್ಲ. ಕಳೆದ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಕುಸ್ತಿ ವಿಭಾಗದಿಂದ ಸತತ ನಾಲ್ಕು ಪದಕಗಳನ್ನು ನೀಡಿದ್ದೇವೆ. ಯುವ ಕುಸ್ತಿ ಆಟಗಾರರ ಭವಿಷ್ಯವನ್ನು ಗಮನದಲ್ಲಿಟ್ಟು ಶೀಘ್ರವೇ ಈ ಕುಸ್ತಿ ವಿಚಾರದಲ್ಲಿ ಒಂದು ನಿರ್ಣಾಯ ಕೈಗೊಳ್ಳಬೇಕು” ಎಂದು ಬಜರಂಗ್​ ಕೇಂದ್ರ ಕ್ರೀಡಾ ಸಚಿವಾಲಕ್ಕೆ ಆಗ್ರಹಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪೂನಿಯ 65 ಕೆಜಿ ಫ್ರೀಸ್ಟೈಲ್​ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು.

ಇದನ್ನೂ ಓದಿ ಖೇಲ್‌ರತ್ನ, ಅರ್ಜುನ ಪ್ರಶಸ್ತಿ ವಾಪಸ್​ ಮಾಡುವ ನಿರ್ಧಾರ ಘೋಷಿಸಿ ಮೋದಿಗೆ ಪತ್ರ ಬರೆದ ವಿನೇಶ್‌ ಫೋಗಟ್

ರಾಹುಲ್‌ ಗಾಂಧಿ ಜತೆ ಕುಸ್ತಿ ಆಡಿದ್ದ ಬಜರಂಗ್‌

ಕೆಲ ದಿನನಗಳ ಹಿಂದಷ್ಟೇ ಹರಿಯಾಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಬಜರಂಗ್‌ ಪೂನಿಯಾ (Bajrang Punia) ಸೇರಿ ಹಲವು ಕುಸ್ತಿಪಟುಗಳನ್ನು ಭೇಟಿಯಾಗಿದ್ದರು. ಇದೇ ವೇಳೆ ಅವರು ಬಜರಂಗ್‌ ಪೂನಿಯಾ ಜತೆ ಕುಸ್ತಿ ಆಡಿದ್ದರು. ಈ ಫೋಟೊಗಳನ್ನು ರಾಹುಲ್‌ ಗಾಂಧಿ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದರು.

ರಾಹುಲ್‌ ಗಾಂಧಿ ಭೇಟಿ ಕುರಿತು ಮಾತನಾಡಿದ್ದ ಬಜರಂಗ್‌ ಪೂನಿಯಾ, “ರಾಹುಲ್‌ ಗಾಂಧಿ ಅವರು ವೀರೇಂದ್ರ ಆರ್ಯ ಅಖಾಡಕ್ಕೆ ಭೇಟಿ ನೀಡಿ, ಕುಸ್ತಿಪಟುಗಳ ಜತೆ ಚರ್ಚಿಸಿದ್ದಾರೆ. ಕುಸ್ತಿ ಕುರಿತು ಮಾಹಿತಿ ಪಡೆದ ಅವರು ಕೆಲಹೊತ್ತು ವ್ಯಾಯಾಮ ಮಾಡಿ, ಕುಸ್ತಿ ಆಡಿ್ದಾರೆ. ಅಲ್ಲದೆ, ಕುಸ್ತಿಪಟುವಿನ ನಿತ್ಯದ ಚಟುವಟಿಕೆಗಳು ಏನಿರುತ್ತವೆ, ಅವರ ಪರಿಶ್ರಮ ಹೇಗಿರುತ್ತದೆ ಎಂಬುದನ್ನು ತಿಳಿದುಕೊಂಡರು” ಎಂದು ಮಾಹಿತಿ ನೀಡಿದ್ದರು. ಅಲ್ಲದೆ, ಕುಸ್ತಿ ಆಡುವ ಫೋಟೊಗಳನ್ನು ಶೇರ್‌ ಮಾಡುವ ಜತೆಗೆ, ಕುಸ್ತಿಪಟುಗಳ ಪರಿಶ್ರಮ, ಅವರು ಹೇಗೆ ದೇಶಕ್ಕೆ ಪದಕ ಗೆಲ್ಲುತ್ತಾರೆ, ಅವರ ತ್ಯಾಗ ಏನು ಎಂಬುದರ ಕುರಿತು ರಾಹುಲ್‌ ಗಾಂಧಿ ಪೋಸ್ಟ್‌ ಮಾಡಿದ್ದರು. ಹಾಗೆಯೇ, ಕುಸ್ತಿಪಟುಗಳಿಗೆ ಅನ್ಯಾಯ ಆಗಿದೆ ಎಂದು ಕೂಡ ಅವರ ಪರ ಧ್ವನಿ ಎತ್ತಿದ್ದರು.

Exit mobile version