Site icon Vistara News

Team India | ವಿಶ್ವ ಕಪ್‌ ನಿರ್ಗಮನದ ಬಳಿಕ ಟೀಮ್ ಇಂಡಿಯಾ ಕೋಚಿಂಗ್‌ ಸಿಬ್ಬಂದಿಗೆ ರಜಾ ಕೊಟ್ಟ ಬಿಸಿಸಿಐ!

ಮುಂಬಯಿ : ಟೀಮ್‌ ಇಂಡಿಯಾದ (Team India) ವಿಶ್ವ ಕಪ್‌ ಅಭಿಯಾನ ಹೀನಾಯವಾಗಿ ಕೊನೆಗೊಂಡಿದೆ. ಸೆಮಿ ಫೈನಲ್‌ ಹಣಾಹಣಿಯಲ್ಲಿ ೧೦ ವಿಕೆಟ್‌ಗಳ ಅಂತರದ ಸೋಲು ಕಂಡಿರುವ ಭಾರತ ತಂಡದ ಸದಸ್ಯರು ತಾವು ನೋವು ಅನುಭವಿಸುವ ಜತೆಗೆ ಅಭಿಮಾನಿಗಳಿಗೂ ಬೇಸರ ಮೂಡಿಸಿದ್ದಾರೆ. ಸದ್ಯ ಇವೆಲ್ಲವೂ ಮುಗಿದ ಅಧ್ಯಾಯ. ಎಲ್ಲರೂ ಮುಂಬರುವ ನ್ಯೂಜಿಲೆಂಡ್‌ ಪ್ರವಾಸದ ಸೀಮಿತ ಓವರ್‌ಗಳ ಪಂದ್ಯಗಳ ಸರಣಿಗೆ ಸಜ್ಜಾಗಬೇಕಾಗಿದೆ. ತಂಡವು ಆಸ್ಟ್ರೇಲಿಯಾದಿಂದ ನೇರವಾಗಿ ನ್ಯೂಜಿಲೆಂಡ್‌ಗೆ ಹಾರಲಿದ್ದು ಅಲ್ಲಿ ಮೂರು ಪಂದ್ಯಗಳ ಟಿ೨೦ ಸರಣಿ ಹಾಗೂ ಅಷ್ಟೇ ಪಂದ್ಯಗಳ ಏಕ ದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇವೆಲ್ಲದರ ನಡುವೆ ಬಿಸಿಸಿಐ ಭಾರತ ತಂಡದ ಕಾಯಂ ಕೋಚಿಂಗ್‌ ಸಿಬ್ಬಂದಿಗೆ ರಜಾ ಕೊಟ್ಟಿದ್ದು, ಅವರ ಬದಲಿಗೆ ಲಕ್ಷ್ಮಣ ನೇತೃತ್ವದ ಕೋಚಿಂಗ್‌ ಬಳಗ ತಂಡವನ್ನು ಮುನ್ನಡೆಸಲಿದೆ.

ಟೀಮ್‌ ಇಂಡಿಯಾದ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್ ಅವರು ಆಸ್ಟ್ರೇಲಿಯಾದಿಂದ ತವರಿಗೆ ಮರಳಲಿದ್ದಾರೆ. ಅವರ ಜತೆಗೆ ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌, ಬೌಲಿಂಗ್ ಕೋಚ್‌ ಪರಾಸ್‌ ಮಹಾಂಬ್ರೆ ಕೂಡ ಭಾರತದ ವಿಮಾನ ಏರಲಿದ್ದಾರೆ. ಹೀಗಾಗಿ ರಾಷ್ಟ್ರಿಯ ಕ್ರಿಕೆಟ್‌ ಅಕಾಡೆಮಿಯ ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌ ಅವರು ತಂಡದ ಹಂಗಾಮಿ ಹೆಡ್‌ ಕೋಚ್‌ ಆಗಲಿದ್ದಾರೆ. ಅವರ ಬ್ಯಾಟಿಂಗ್‌ ಕೋಚ್ ಆಗಿ ಹೃಷಿಕೇಷ್‌ ಕಾನಿಟ್ಕರ್ ಹಾಗೂ ಬೌಲಿಂಗ್‌ ಕೋಚ್‌ ಆಗಿ ಸಾಯಿರಾಜ್‌ ಬಹುತುಳೆ ಅವರು ನ್ಯೂಜಿಲೆಂಡ್‌ಗೆ ಪ್ರವಾಸ ಮಾಡಲಿದ್ದಾರೆ.

ವಿವಿಎಸ್‌ ಲಕ್ಷ್ಮಣ್‌ ಅವರು ಕೋಚಿಂಗ್‌ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಐರ್ಲೆಂಡ್‌ ಹಾಗೂ ಜಿಂಬಾಬ್ವೆ ಪ್ರವಾಸದಲ್ಲಿ ಅವರು ತಂಡವನ್ನು ಮುನ್ನಡೆಸಿದ್ದರು. ಅಂತೆಯೇ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕ ದಿನ ಸರಣಿಯಲ್ಲೂ ಅವರೇ ಟೀಮ್‌ ಇಂಡಿಯಾದ ಕೋಚ್‌ ಆಗಿದ್ದರು.

ಲಕ್ಷ್ಮಣ್‌ ಅವರಲ್ಲದೆ ತಂಡದ ಸದಸ್ಯರಾದ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಕೆ. ಎಲ್‌ ರಾಹುಲ್‌ ಕೂಡ ಈ ಸರಣಿಯಲ್ಲಿ ಆಡುತ್ತಿಲ್ಲ. ಹಾರ್ದಿಕ್‌ ಪಾಂಡ್ಯ ಟಿ೨೦ ತಂಡದ ನಾಯಕತ್ವ ವಹಿಸಿಕೊಂಡರೆ, ಶಿಖರ್‌ ಧವನ್‌ ಏಕ ದಿನ ತಂಡದ ನಾಯಕರಾಗಿ ಇರಲಿದ್ದಾರೆ.

ಇದನ್ನೂ ಓದಿ | Team India | ಕಷ್ಟ ಕಾಲದಲ್ಲಿ ಗೆಳೆಯ ರಾಹುಲ್‌ ಜತೆಗೆ ಸದಾ ನಿಲ್ಲುವ ವಿರಾಟ್ ಕೊಹ್ಲಿ

Exit mobile version